ನವದೆಹಲಿ: ಸರ್ಕಾರಿ ಅಧಿಕಾರಿಗಳ ವ್ಯಕ್ತಿಗತ ಹಾಗೂ ಸಾಂಸ್ಥಿಕ ಸಾಮರ್ಥ್ಯ ವೃದ್ಧಿಗೆ ಕೈಗೊಂಡಿರುವ ‘ಕರ್ಮಯೋಗಿ ಸಪ್ತಾಹ’–ರಾಷ್ಟ್ರೀಯ ಕಲಿಕಾ ಸಾಪ್ತಾಹ (ಎನ್ಎಲ್ಡಬ್ಲ್ಯು) ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಚಾಲನೆ ನೀಡಲಿದ್ದಾರೆ.
‘ಮಿಷನ್ ಕರ್ಮಯೋಗಿ’ ಕಾರ್ಯಕ್ರಮಕ್ಕೆ 2020ರ ಸೆಪ್ಟೆಂಬರ್ನಲ್ಲಿ ಚಾಲನೆ ನೀಡಿದ ಬಳಿಕ ಅದು ಗಣನೀಯ ಪ್ರಗತಿ ಕಂಡಿತ್ತು. ಇದೀಗ, ‘ಒಂದು ಸರ್ಕಾರ’ ಎಂಬ ಸಂದೇಶ ನೀಡಿ, ಎಲ್ಲರನ್ನೂ ರಾಷ್ಟ್ರೀಯ ಗುರಿಗಳತ್ತ ಮತ್ತು ಜೀವನ ಪರ್ಯಂತ ಕಲಿಕೆಯತ್ತ ಕೊಂಡೊಯ್ಯುವ ಉದ್ದೇಶದಿಂದ ಎನ್ಎಲ್ಡಬ್ಲ್ಯುಗೆ ಚಾಲನೆ ನೀಡಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.
ಎನ್ಎಲ್ಡಬ್ಲ್ಯು ವೇಳೆ ಪ್ರತಿ ‘ಕರ್ಮಯೋಗಿ’ ಸಾಮರ್ಥ್ಯಕ್ಕೆ ಸಂಬಂಧಿಸಿದ ಕನಿಷ್ಠ 4 ತಾಸುಗಳ ಕಲಿಕೆಯ ಗುರಿ ಸಾಧನೆ ಮಾಡಬೇಕಿದೆ. ಕಲಿಯುವವರು ತಮ್ಮ ಕಲಿಕೆಯ ಗುರಿಯನ್ನು ಐಗೋಟ್, ವೆಬಿನಾರ್ಗಳ (ಸಾರ್ವಜನಿಕ ಬೋಧನೆ/ಪಾಲಿಸಿ ಮಾಸ್ಟರ್ ತರಗತಿಗಳು) ಮೂಲಕ ಮುಟ್ಟಬಹುದು.
ಸಾಪ್ತಾಹಿಕದ ವೇಳೆ ತಜ್ಞ ಬೋಧಕರು ತಮ್ಮ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಬೋಧನೆ ನೀಡಲಿದ್ದಾರೆ. ಆಯಾ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಸಾಮರ್ಥ್ಯ ಹೆಚ್ಚಿಸಲು ಸಚಿವಾಲಯಗಳು, ಇಲಾಖೆಗಳು ಮತ್ತು ಸಂಸ್ಥೆಗಳು ವಿಚಾರ ಸಂಕಿರಣ ಹಾಗೂ ಕಾರ್ಯಾಗಾರ ಹಮ್ಮಿಕೊಳ್ಳಲಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.