ತಿರುವನಂತಪುರ: ಲೋಕಸಭಾ ಚುನಾವಣೆಗೆ ಕೆಲವೇ ದಿನ ಬಾಕಿ ಇರುವಾಗಲೇ ಪ್ರಧಾನಿ ನರೇಂದ್ರ ಮೋದಿ ಫೆ. 27ರಂದು ಕೇರಳಕ್ಕೆ ಆಗಮಿಸಲಿದ್ದಾರೆ. ಇದು ಈ ವರ್ಷದಲ್ಲಿ ಅವರು ರಾಜ್ಯಕ್ಕೆ ಕೈಗೊಳ್ಳುವ ಮೂರನೇ ಪ್ರವಾಸವಾಗಿದೆ.
ಮಂಗಳವಾರ ರಾಜ್ಯ ರಾಜಧಾನಿ ತಿರುವನಂತಪುರಕ್ಕೆ ಆಗಮಿಸುವ ಅವರು, ಸರ್ಕಾರಿ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಲಿದ್ದಾರೆ. ಬಳಿಕ ಇಲ್ಲಿನ ಸೆಂಟ್ರಲ್ ಮೈದಾನದಲ್ಲಿ ನಡೆಯುವ ರಾಜ್ಯ ಬಿಜೆಪಿ ಘಟಕದ ರಾಜ್ಯವ್ಯಾಪಿ ಪಾದಯಾತ್ರೆಯ ಸಮಾರೋಪ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.
ಕೇರಳ ಬಿಜೆಪಿ ಘಟಕದ ಅಧ್ಯಕ್ಷ ಕೆ. ಸುರೇಂದ್ರನ್ ಅವರ ನೇತೃತ್ವದಲ್ಲಿ ಕಾಸರಗೋಡಿನಿಂದ ಜನವರಿ 27ರಂದು ಈ ಪಾದಯಾತ್ರೆ ಆರಂಭವಾಗಿತ್ತು.
ಈ ಹಿಂದೆ ಜ.3ರಂದು ತ್ರಿಶ್ಶೂರ್ಗೆ ಬಂದಿದ್ದ ಪ್ರಧಾನಿ ಮೋದಿ, ರೋಡ್ ಶೋ ನಡೆಸಿ ಪಕ್ಷದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಆದಾದ ಬಳಿಕ ಜನವರಿ 16–17ರಂದು ರಾಜ್ಯದ ಪ್ರಸಿದ್ಧ ಗುರುವಾಯೂರು ಶ್ರೀಕೃಷ್ಣ ದೇಗುಲಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದರು. ಅಲ್ಲಿ ನಡೆದ ನಟ, ರಾಜಕಾರಣಿ ಸುರೇಶ್ ಗೋಪಿ ಅವರ ಮಗಳ ವಿವಾಹ ಸಮಾರಂಭದಲ್ಲೂ ಭಾಗಿಯಾಗಿದ್ದರು.
ನಂತರ ತ್ರಿಶ್ಶೂರ್ನ ತ್ರಿಪ್ರಯಾರ್ ಶ್ರೀರಾಮ ದೇಗುಲಕ್ಕೆ ಭೇಟಿ ನೀಡಿದ್ದರು. ಬಳಿಕ ಕೊಚ್ಚಿಗೆ ಪ್ರಯಾಣ ಬೆಳೆಸಿ ಅಲ್ಲಿ ಕೇಂದ್ರ ಸರ್ಕಾರ ಹಾಗೂ ಪಕ್ಷದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.