ADVERTISEMENT

ರಾಹುಲ್‌ ಗಾಂಧಿಯೊಂದಿಗೆ ಚರ್ಚೆಯಲ್ಲಿ ಭಾಗವಹಿಸಲು ಮೋದಿಗೆ ಧೈರ್ಯವಿಲ್ಲ: ಜೈರಾಮ್‌

ಪಿಟಿಐ
Published 12 ಮೇ 2024, 10:55 IST
Last Updated 12 ಮೇ 2024, 10:55 IST
ಜೈರಾಮ್‌ ರಮೇಶ್
ಜೈರಾಮ್‌ ರಮೇಶ್   

ನವದೆಹಲಿ: ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರೊಂದಿಗೆ ಚರ್ಚೆಯಲ್ಲಿ ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧೈರ್ಯ ಇಲ್ಲ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್‌ ರಮೇಶ್‌ ಟೀಕಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿರುವ ಅವರು, ‘ಹೊರಹೋಗುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರು ದಿನಪತ್ರಿಕೆಗಳು ಹಾಗೂ ಟಿವಿ ಚಾನೆಲ್‌ಗಳಿಗೆ ನೀಡುವ ಸಂದರ್ಶನಗಳು ನಕಲಿಯಾಗಿವೆ. ಅವರ ಸಂದರ್ಶನಗಳಲ್ಲಿ ನಾಟಕೀಯತೆ ಮತ್ತು ಸುಳ್ಳುಗಳನ್ನು ಹೊರತುಪಡಿಸಿ ಯಾವುದು ಸಹಜ ಮತ್ತು ಸ್ವಾಭಾವಿಕವಾಗಿ ಇರುವುದಿಲ್ಲ. ದೇಶದಲ್ಲಿ ಪ್ರಸ್ತುತ ಇರುವ ಅಥವಾ ಹಿಂದಿನ ಯಾವುದೇ ರಾಜಕೀಯ ನಾಯಕರು ಮಾಧ್ಯಮಗಳೊಂದಿಗೆ ಈ ರೀತಿ ವ್ಯವಹರಿಸಿಲ್ಲ’ ಎಂದು ಅವರು ಆರೋಪಿಸಿದ್ದಾರೆ.

ಚರ್ಚೆಯಲ್ಲಿ ಭಾಗವಹಿಸಲು ಪಂಥಾಹ್ವಾನವನ್ನು ಸ್ವೀಕರಿಸಿರುವ ರಾಹುಲ್‌ ಗಾಂಧಿ, ನಾವು ಸಿದ್ದವಾಗಿದ್ದೇವೆ. ಪ್ರಧಾನಿ ನರೇಂದ್ರ ಮೋದಿ ಅವರು ಚರ್ಚೆಯಲ್ಲಿ ಭಾಗವಹಿಸಬೇಕೆಂದು ದೇಶದ ಜನತೆ ನಿರೀಕ್ಷಿಸುತ್ತಿದ್ದಾರೆ ಎಂದು ಶನಿವಾರ ಹೇಳಿದ್ದರು.

ADVERTISEMENT

ಲೋಕಸಭೆ ಚುನಾವಣೆಯ ಪ್ರಮುಖ ವಿಷಯಗಳ ಕುರಿತು ಚರ್ಚೆಯಲ್ಲಿ ಭಾಗಹಿಸುವಂತೆ ನಿವೃತ್ತ ನ್ಯಾಯಾಧೀಶರಾದ ಮದನ್‌ ಬಿ.ಲೋಕೂರ್ ಮತ್ತು ಅಜಿತ್ ಪಿ.ಶಾ ಮತ್ತಿತ್ತರರು ರಾಹುಲ್ ಗಾಂಧಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ವಾರದ ಹಿಂದೆ ಪತ್ರ ಬರೆದು ಆಹ್ವಾನ ನೀಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.