ADVERTISEMENT

ಮಹಾರಾಷ್ಟ್ರ ಮಾಜಿ ಸಚಿವ ಬಾಬಾ ಸಿದ್ಧಿಕಿ ಹತ್ಯೆ ಪೂರ್ವಯೋಜಿತ: ಮುಂಬೈ ಪೊಲೀಸ್

ಎನ್‌ಸಿಪಿ ಅಜಿತ್ ಪವಾರ್ ಬಣದ ನಾಯಕ ಹಾಗೂ ಮಹಾರಾಷ್ಟ್ರದ ಮಾಜಿ ಸಚಿವ ಬಾಬಾ ಸಿದ್ಧೀಕಿ (66) ಅವರ ಹತ್ಯೆ ಪೂರ್ವಯೋಜಿತ ಎಂದು ಮುಂಬೈ ಪೊಲೀಸರು ಖಚಿತಪಡಿಸಿದ್ದಾರೆ.

ಪಿಟಿಐ
Published 13 ಅಕ್ಟೋಬರ್ 2024, 5:38 IST
Last Updated 13 ಅಕ್ಟೋಬರ್ 2024, 5:38 IST
<div class="paragraphs"><p>ನಟ ಸಲ್ಮಾನ್ ಖಾನ್ ಜೊತೆ&nbsp;ಬಾಬಾ ಸಿದ್ಧಿಕಿ</p></div>

ನಟ ಸಲ್ಮಾನ್ ಖಾನ್ ಜೊತೆ ಬಾಬಾ ಸಿದ್ಧಿಕಿ

   

ಮುಂಬೈ: ಎನ್‌ಸಿಪಿ ಅಜಿತ್ ಪವಾರ್ ಬಣದ ನಾಯಕ ಹಾಗೂ ಮಹಾರಾಷ್ಟ್ರದ ಮಾಜಿ ಸಚಿವ ಬಾಬಾ ಸಿದ್ಧೀಕಿ (66) ಅವರ ಹತ್ಯೆ ಪೂರ್ವಯೋಜಿತ ಎಂದು ಮುಂಬೈ ಪೊಲೀಸರು ಖಚಿತಪಡಿಸಿದ್ದಾರೆ.

ಮುಂಬೈನ ಬಾಂದ್ರಾದ ಪೂರ್ವ ವಲಯದ ನಿರ್ಮಲ್ ನಗರದಲ್ಲಿ ಶನಿವಾರ ರಾತ್ರಿ ಸಿದ್ಧಿಕಿ ಅವರ ಹತ್ಯೆ ನಡೆದಿದೆ.

ADVERTISEMENT

ಮುಂಬೈ ಕ್ರೈಂ ಬ್ರ್ಯಾಂಚ್ ತನಿಖೆ ಕೈಗೆತ್ತಿಕೊಂಡಿದ್ದು, ಹಲವು ಆಯಾಮಗಳಲ್ಲಿ ತನಿಖೆ ನಡೆಸುತ್ತಿದೆ. ಸುಫಾರಿ ಕೊಟ್ಟು ಹತ್ಯೆ ಮಾಡಿಸಿರುವ ಮತ್ತು ವೃತ್ತಿ ವೈಷಮ್ಯದಿಂದ ಹತ್ಯೆ ನಡೆದಿರಬಹುದಾದ ಶಂಕೆ ವ್ಯಕ್ತಪಡಿಸಲಾಗಿದೆ.

ಹತ್ಯೆಗೂ ಮುನ್ನ ಬಾಬಾ ಸಿದ್ಧಿಕಿ ಅವರಿಗೆ ಬೆದರಿಕೆ ಕರೆಗಳು ಬಂದಿದ್ದವು. ಆದರೆ, ಅವುಗಳನ್ನು ನಿರ್ಲಕ್ಷ್ಯಿಸಿದ್ದರು ಎಂದು ಪೊಲೀಸರು ಹೇಳಿದ್ದಾರೆ. ವೈ ಮಾದರಿಯ ಭದ್ರತೆಯ ಜೊತೆಗೆ ಖಾಸಗಿ ಸೆಕ್ಯೂರಿಟಿ ಗಾರ್ಡ್‌ಗಳೂ ಅವರಿಗೆ ಭದ್ರತೆ ಒದಗಿಸುತ್ತಿದ್ದರು. ಅದಾಗ್ಯೂ ಅವರ ಹತ್ಯೆ ಹಲವರಿಗೆ ಆಶ್ಚರ್ಯ ತರಿಸಿದೆ.

ದಸರಾ ಪ್ರಯುಕ್ತ ಬಾಬಾ ಅವರು ತಮ್ಮ ಮಗ ಹಾಗೂ ಶಾಸಕ ಜಿಶಾನ್ ಸಿದ್ಧಿಕಿ ಅವರ ಮನೆಗೆ ತೆರಳಿದ್ದರು. ಮನೆಯಿಂದ ಹೊರಗೆ ಬರುವಾಗ ಶನಿವಾರ ರಾತ್ರಿ 9.30 ರ ಸುಮಾರು ಬೈಕ್‌ನಲ್ಲಿ ಬಂದಿದ್ದ ಮೂವರು ದುಷ್ಕರ್ಮಿಗಳು ಬಾಬಾ ಅವರ ಮೇಲೆ ಪಿಸ್ತೂಲ್‌ನಿಂದ ಮೂರು ಸುತ್ತು ಗುಂಡು ಹಾರಿಸಿದ್ದರು. ಎದೆ ಹಾಗೂ ಹೊಟ್ಟೆಗೆ ಗುಂಡು ತಗುಲಿದ್ದ ಬಾಬಾ ಅವರನ್ನು ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೇ ಅವರು ಭಾನುವಾರ ಬೆಳಿಗ್ಗೆ 12.30ಕ್ಕೆ ಮೃತರಾದರು ಎಂದು ವೈದ್ಯರು ತಿಳಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಒಬ್ಬ ನಾಪತ್ತೆಯಾಗಿದ್ದು ಆತನ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಮುಖ್ಯಮಂತ್ರಿ ಏಕನಾಥ್ ಶಿಂದೆ ತಿಳಿಸಿದ್ದಾರೆ. ಆರೋಪಿತರು ಗ್ಯಾಂಗ್‌ಸ್ಟರ್ ಲಾರೆನ್ಸ್‌ ಬಿಷ್ಣೋಯ್ ಸಹಚರರು ಎನ್ನಲಾಗಿದೆ. ಬಂಧಿತರನ್ನು ಕರ್ನೈಲ್ ಸಿಂಗ್ ಹಾಗೂ ಧರ್ಮರಾಜ್ ಕಶ್ಯಪ್ ಎಂದು ಗುರುತಿಸಲಾಗಿದೆ.

ಕಾಂಗ್ರೆಸ್‌ನಿಂದ ಮೂರು ಬಾರಿ ಶಾಸಕರಾಗಿದ್ದ ಬಿಹಾರ ಮೂಲದ ಬಾಬಾ ಸಿದ್ಧಿಕಿ ಅವರು ಕಳೆದ ಫೆಬ್ರುವರಿಯಲ್ಲಿ ಕಾಂಗ್ರೆಸ್ ತೊರೆದು ಅಜಿತ್ ಪವಾರ್ ಬಣದ ಎನ್‌ಸಿಪಿ ಸೇರಿದ್ದರು.

ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿರುವ ಎನ್‌ಸಿಪಿ ನಾಯಕ ಶರದ್ ಪವಾರ್ ಅವರು, ಮಹಾರಾಷ್ಟ್ರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಎಂದು ಆರೋಪಿಸಿದ್ದಾರೆ.

2004ರಿಂದ 2008ರವರೆಗಿನ ವಿಲಾಸ್‌ರಾವ್ ದೇಶಮುಖ್ ಅವರ ಸರ್ಕಾರದಲ್ಲಿ ಬಾಬಾ ಸಿದ್ಧಿಕಿ ಅವರು ಕಾರ್ಮಿಕ ಸಚಿವರಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.