ADVERTISEMENT

ಕೂಚ್‌ ಬಿಹಾರ್: ಭರವಸೆಗಳಷ್ಟೇ, ಬದುಕು ಬದಲಾಗಲಿಲ್ಲ

ಕೂಚ್‌ ಬಿಹಾರ್: ಬಾಂಗ್ಲಾ ಗಡಿಗೆ ಹೊಂದಿಕೊಂಡಿರುವ ನಿವಾಸಿಗಳ ಸ್ಥಿತಿ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2024, 19:40 IST
Last Updated 15 ಏಪ್ರಿಲ್ 2024, 19:40 IST

ದಿನ್‌ಹಾಟ, ಕೂಚ್‌ ಬಿಹಾರ್: ಸುಮಾರು 67 ವರ್ಷ ಅವರು ಎಲ್ಲೂ ಸಲ್ಲದವರಾಗಿದ್ದರು. ಭಾರತ ಮತ್ತು ಬಾಂಗ್ಲಾದೇಶ ನಡುವಿನ ಐತಿಹಾಸಿಕ ಭೂ ವಿನಿಮಯ ಒಪ್ಪಂದವಾದ 9 ವರ್ಷದ ಬಳಿಕ ಅವರಿಗೊಂದು ಗುರುತು ಸಿಕ್ಕಿತು. ಆದರೆ, ಆ ನಂತರವು ಅವರ ಬದುಕಿನಲ್ಲಿ ಅಂತಹ ಪರಿವರ್ತನೆ ಕಾಣಿಸಲಿಲ್ಲ.

ಇದು, ಪಶ್ಚಿಮ ಬಂಗಾಳದ ಕೂಚ್‌ ಬಿಹಾರ್ ಜಿಲ್ಲೆಯ, ನೆರೆ ದೇಶದ ಭೂ ಪ್ರದೇಶಕ್ಕೆ ಹೊಂದಿಕೊಂಡಿರುವ ಮೂರು ಗ್ರಾಮಗಳಲ್ಲಿನ ನಿವಾಸಿಗಳ ಸ್ಥಿತಿ. ರಾಜಕಾರಣಿಗಳ ಭರವಸೆಗಳು ಈಡೇರಿಲ್ಲ.

ಭೂಮಿ ಮಾಲೀಕತ್ವದ ದಾಖಲೆ ಹೊಂದುವ ಕನಸು ಮರೀಚಿಕೆಯಾಗಿದೆ. ಜಿಲ್ಲಾಡಳಿತ ಇನ್ನು ಭೂ ದಾಖಲೆ ನೀಡಿಲ್ಲ. ಇದಕ್ಕಾಗಿ ಸರ್ವೇ ಕಾರ್ಯವೂ ನಡೆದಿಲ್ಲ.

ADVERTISEMENT

ಇಲ್ಲಿನ ಜನರಿಗೆ ಸದ್ಯ ಮತದಾರರ ಗುರುತು ಚೀಟಿ, ಪಡಿತರ ಚೀಟಿ, ಆಧಾರ್‌ ಕಾರ್ಡ್ ಇದೆ. ಆದರೆ, ಇವುಗಳು ಇನ್ನೂ ಅವರ  ಜೀವನಮಟ್ಟ ಸುಧಾರಣೆಗೆ ನೆರವಾಗಿಲ್ಲ.

ಶಾಲೆ ಬರುತ್ತೆ. ಕೆಲವರಿಗೆ ಅಲ್ಲಿ ಶಿಕ್ಷಕರಾಗಿ ಕೆಲಸ ಸಿಗುತ್ತೆ ಎಂದು ಹೇಳಿದ್ದರು. ನನಗೆ  ವಿದ್ಯಾರ್ಹತೆ ಇತ್ತು. ಆದರೆ, ಇನ್ನೂ ಶಾಲೆ ಸ್ಥಾಪನೆಯಾಗಿಲ್ಲ. ಅಂಗನವಾಡಿ ಕೇಂದ್ರ ಬರುತ್ತದೆ ಎಂದರು. ಇನ್ನು ಬಂದಿಲ್ಲ ಎನ್ನುತ್ತಾರೆ ದಕ್ಷಿಣ್ ಮಾಶಲ್‌ದಾಂಗ ಗ್ರಾಮದ ನಿತುರಾಯ್‌ ಸರ್ಕಾರ್.

ಭೂ ಗಡಿ ಒಪ್ಪಂದದ ಅನುಸಾರ ‘ಭಾರತದ’ 111 ಪ್ರದೇಶ (ಸುಮಾರು 17,161 ಎಕರೆ) ಬಾಂಗ್ಲಾದೇಶದ ಸುಪರ್ದಿಗೆ ಹೋದರೆ, ಬಾಂಗ್ಲಾದೇಶದ 51 ಪ್ರದೇಶ (ಸುಮಾರು 7,110 ಎಕರೆ) ಭಾರತದ ಸುಪರ್ದಿಗೆ ಬಂದಿತು. ಇಲ್ಲಿ ವಾಸವಿದ್ದ ಜನರಿಗೆ ತಾವು  ಬಯಸಿದ ದೇಶದ ಜೊತೆಗೆ ಗುರುತಿಸಿಕೊಳ್ಳುವ ಆಯ್ಕೆ ನೀಡಲಾಯಿತು. ಈಭಾಗದ ಸುಮಾರು 15,856 ಜನರು ಭಾರತದ ಜೊತೆಗೆ ಇರಲು ಬಯಸಿ, ಪೌರತ್ವ ಪಡೆದರು. ಬಾಂಗ್ಲಾದೇಶದ ಗಡಿಯಲ್ಲಿದ್ದ ಸುಮಾರು 921 ಜನರು ಭಾರತೀಯ ಪ್ರಜೆಗಳಾದರು.

ಆರಂಭದಲ್ಲಿ ತಾತ್ಕಾಲಿಕ ಶಿಬಿರಗಳಲ್ಲಿ ಇದ್ದರು. 2020ರಲ್ಲಿ 3 ಸಮುಚ್ಚಯಕ್ಕೆ ಸ್ಥಳಾಂತರಿಸಲಾಯಿತು. ಕೇಂದ್ರದ ನೆರವಿನಲ್ಲಿ ಪಶ್ಚಿಮ ಬಂಗಾಳ ಸರ್ಕಾರ ಇದನ್ನು ನಿರ್ಮಿಸಿತ್ತು. 2 ಬೆಡ್‌ರೂಂಗಳ ಒಂದು ಫ್ಲಾಟ್‌ನಲ್ಲಿ ಕನಿಷ್ಠ 20 ಮಂದಿ ವಾಸವಿದ್ದು,  ಹೆಚ್ಚಿನ ಜನದಟ್ಟಣೆ ಕಂಡುಬಂದಿತ್ತು.

ಕೂಚ್ ಬಿಹಾರ್ ನಗರದಿಂದ 50 ಕಿ.ಮೀ. ದೂರದಲ್ಲಿರುವ ಈ ಗ್ರಾಮಗಳನ್ನು ಹೆಚ್ಚಿನ ರಾಜಕಾರಣಿಗಳು ಮರೆತಿದ್ದಾರೆ. ಸೂಕ್ತ ಭೂ ದಾಖಲೆ ಒದಗಿಸಬೇಕು ಎಂಬುದು ಇಲ್ಲಿನ ಜನರ ಪ್ರಮುಖ ಬೇಡಿಕೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.