ಪುದುಚೇರಿ: ಆಲ್ ಇಂಡಿಯ ಎನ್.ಆರ್. ಕಾಂಗ್ರೆಸ್ (ಎಐಎನ್ಆರ್ಸಿ)– ಬಿಜೆಪಿ ನಡುವಣ ಮೈತ್ರಿಯಲ್ಲಿ ಬಿಕ್ಕಟ್ಟು ಹೆಚ್ಚಾಗುತ್ತಿದ್ದು, ಪರಿಸ್ಥಿತಿ ಕೈ ಮೀರುವ ಒಳಗೆ ಪರಿಹಾರ ಒದಗಿಸುವಂತೆ ಬಿಜೆಪಿ ಶಾಸಕರು ತಮ್ಮ ಕೇಂದ್ರ ನಾಯಕತ್ವಕ್ಕೆ ಮನವಿ ಮಾಡಿದ್ದಾರೆ.
ಭ್ರಷ್ಟಾಚಾರವೂ ಸೇರಿ ಹಲವು ಸಮಸ್ಯೆಗಳ ಕಾರಣಕ್ಕೆ ಪುದುಚೇರಿ ಸರ್ಕಾರದ ವಿರುದ್ಧ ಬಿಜೆಪಿಯು ಅಸಮಾಧಾನ ಹೊಂದಿದೆ. ಬಿಜೆಪಿಯ ಕೆಲ ಶಾಸಕರು ಸಂಪುಟ ಪುನರ್ರಚನೆಗೂ ಒತ್ತಾಯಿಸಿದ್ದಾರೆ.
ಈಚೆಗೆ ನಡೆದ ಲೋಕಸಭೆ ಚುನಾವಣೆಯಲ್ಲಿ ಮೈತ್ರಿಕೂಟದ ಅಭ್ಯರ್ಥಿ, ಪುದುಚೇರಿ ಗೃಹ ಸಚಿವ ಎ. ನಮಶಿವಾಯಂ ಅವರು ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಸೋತಿದ್ದರು. ಎಐಎನ್ಆರ್ಸಿ ಮುಖ್ಯಸ್ಥರೂ ಎನ್. ರಂಗಸ್ವಾಮಿ ಅವರ ನೇತೃತ್ವದ ಸರ್ಕಾರವು ಜನರ ವಿಶ್ವಾಸಗಳಿಸಲು ವಿಫಲವಾಗಿರುವುದೇ ತಮ್ಮ ಅಭ್ಯರ್ಥಿ ಸೋಲಲು ಕಾರಣ ಎಂದು ಬಿಜೆಪಿ ಶಾಸಕರು ಆರೋಪಿಸಿದ್ದಾರೆ.
ಇದಲ್ಲದೇ, ಪುದುಚೇರಿ ಲೆಫ್ಟಿನಂಟ್ ಗವರ್ನರ್ ಅವರನ್ನೂ ಭೇಟಿಯಾಗಿದ್ದ ಬಿಜೆಪಿ ಶಾಸಕರ ನಿಯೋಗವು, ಬಿಜೆಪಿ ಶಾಸಕರ ಕ್ಷೇತ್ರಗಳ ಅಗತ್ಯಗಳನ್ನು ಸರ್ಕಾರವು ಕಡೆಗಣಿಸುತ್ತಿದೆ ಎಂದು ದೂರಿದ್ದರು.
ಬಿಜೆಪಿಯ ಯಾವ ಆರೋಪಗಳಿಗೂ ರಂಗಸ್ವಾಮಿ ನೇತೃತ್ವದ ಸರ್ಕಾರವು ಪ್ರತಿಕ್ರಿಯೆ ನೀಡಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.