ADVERTISEMENT

Porsche car crash: ಬಾಲ ನ್ಯಾಯ ಮಂಡಳಿಗೆ ಪೊಲೀಸರಿಂದ ಅಂತಿಮ ವರದಿ ಸಲ್ಲಿಕೆ

ಪಿಟಿಐ
Published 19 ಜೂನ್ 2024, 4:20 IST
Last Updated 19 ಜೂನ್ 2024, 4:20 IST
<div class="paragraphs"><p>ಅಪಘಾತಕ್ಕೀಡಾದ ಕಾರು</p></div>

ಅಪಘಾತಕ್ಕೀಡಾದ ಕಾರು

   

ಪಿಟಿಐ ಚಿತ್ರ

ಪುಣೆ: ಪೋಶೆ ಕಾರು ಅಪಘಾತ ಪ್ರಕರಣದ ಆರೋಪಿ, ಕಾನೂನು ಸಂಘರ್ಷಕ್ಕೆ ಸಿಲುಕಿರುವ 17 ವರ್ಷ ವಯಸ್ಸಿನ ಬಾಲಕನ ವಿರುದ್ಧದ ಎಲ್ಲ ಸಾಕ್ಷ್ಯಗಳನ್ನು ಒಳಗೊಂಡ ಅಂತಿಮ ವರದಿಯನ್ನು ಪೊಲೀಸರು ಬಾಲ ನ್ಯಾಯ ಮಂಡಳಿಗೆ (ಜೆಜೆಬಿ) ಸಲ್ಲಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಪುಣೆಯ ಕಲ್ಯಾಣಿ ನಗರದಲ್ಲಿ ಮೇ 19ರಂದು ಬೆಳಿಗ್ಗೆ ಪೋಶೆ ಕಾರು ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಟೆಕಿಗಳು ಸ್ಥಳದಲ್ಲೇ ಮೃತಪಟ್ಟಿದ್ದರು. ಈ ವೇಳೆ ಬಾಲಕ ಕುಡಿದ ಮತ್ತಿನಲ್ಲಿ ಕಾರು ಚಲಾಯಿಸಿದ್ದ ಎಂದು ಆರೋಪಿಸಲಾಗಿದೆ. ಈ ಸಂಬಂಧ ಬಾಲಕನನ್ನು ಜೂನ್ 25ರವರೆಗೆ ಗೃಹಬಂಧನದಲ್ಲಿರಿಸಲಾಗಿದೆ.

ವಿಚಾರಣೆ ಸಲುವಾಗಿ ಬಾಲಕನನ್ನು ವಯಸ್ಕ ಎಂದು ಪರಿಗಣಿಸಲು ಅವಕಾಶ ನೀಡುವಂತೆ ಪೊಲೀಸರು ಮನವಿ ಮಾಡಿದ್ದರು. ಅದಕ್ಕೆ ಪೂರಕವಾಗಿ ಸಾಕ್ಷ್ಯಗಳನ್ನು ಜೆಜೆಬಿಗೆ ಸಲ್ಲಿಸಿದ್ದಾರೆ.

ಈ ಬಗ್ಗೆ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದು, 'ಮೇ 19ರ ಸಂಜೆ ಮನೆಯಿಂದ ಹೊರಟಾಗಿನಿಂದ, ಅಪಘಾತ ಸಂಭವಿಸುವವರೆಗೆ ಪೋಶೆ ಕಾರನ್ನು ಚಾಲನೆ ಮಾಡುತ್ತಿದ್ದದ್ದು ಆರೋಪಿ ಬಾಲಕನೇ ಎಂಬುದನ್ನು ಸಾಬೀತು ಮಾಡುವ ಸಾಕಷ್ಟು ಪುರಾವೆಗಳನ್ನು ಜೆಜೆಬಿಗೆ ಸಲ್ಲಿಸಿದ್ದೇವೆ' ಎಂದು ತಿಳಿಸಿದ್ದಾರೆ.

'ಬಾಲಕ ಕಾರು ಚಾಲನೆ ಮಾಡುತ್ತಿದ್ದದ್ದನ್ನು ನೋಡಿದವರ ಹೇಳಿಕೆಗಳನ್ನು ದಾಖಲಿಸಿದ್ದೇವೆ. ಕೋಸಿ ರೆಸ್ಟೋರೆಂಟ್‌ ಮತ್ತು ಬ್ಲ್ಯಾಕ್‌ ಕ್ಲಬ್‌ನಲ್ಲಿ ಮದ್ಯ ಸೇವಿಸುತ್ತಿರುವುದೂ ಸೇರಿದಂತೆ ಸಂಬಂಧಿತ ಸ್ಥಳಗಳ ಸಿಸಿಟಿವಿ ದೃಶ್ಯಗಳನ್ನು ಸಂಗ್ರಹಿಸಿದ್ದೇವೆ. ಈ ಎಲ್ಲವನ್ನೂ ವರದಿಯಲ್ಲಿ ಸೇರಿಸಿದ್ದೇವೆ. ನ್ಯಾಯ ಮಂಡಳಿಗೆ ಸಲ್ಲಿಸಿರುವ ಸಮಗ್ರ ಹಾಗೂ ಅಂತಿಮ ವರದಿಯ ಸಾರಾಂಶದಲ್ಲಿ, ಆರೋಪಿಯು ಕುಡಿದ ಅಮಲಿನಲ್ಲಿ ಕಾರು ಚಲಾಯಿಸಿ ಇಬ್ಬರ ಸಾವಿಗೆ ಕಾರಣನಾಗಿದ್ದಾನೆ ಎಂದು ಉಲ್ಲೇಖಿಸಿದ್ದೇವೆ' ಎಂದೂ ಹೇಳಿದ್ದಾರೆ.

ಸಾಕ್ಷ್ಯ ನಾಶ ಹಾಗೂ ಅಪರಾಧದ ಹೊಣೆ ಹೊರುವಂತೆ ಕುಟುಂಬದ ಚಾಲಕನನ್ನು ಅಪಹರಿಸಿ, ಒತ್ತಡ ಹೇರಿದ ಆರೋಪದ ಮೇಲೆ ಬಾಲಕನ ತಂದೆ ವಿಶಾಲ್ ಅಗರ್ವಾಲ್ ಅವರನ್ನು ಮೇ 31ರಂದು ಬಂಧಿಸಲಾಗಿದೆ.

ಬಾಲಕನನ್ನು ರಕ್ಷಿಸುವ ಉದ್ದೇಶದಿಂದ ಆತನ ರಕ್ತದ ಮಾದರಿಯ ಬದಲು ತನ್ನ ರಕ್ತದ ಮಾದರಿಯನ್ನು ಇರಿಸಿದ ಆರೋಪದಲ್ಲಿ, ಬಾಲಕನ ತಾಯಿ ಶಿವಾನಿ ಅಗರ್ವಾಲ್ ಅವರನ್ನು ಜೂನ್ 1 ರಂದು ಬಂಧಿಸಲಾಗಿದೆ.

ರಕ್ತದ ಮಾದರಿ ಬದಲಾವಣೆ ಸಂಬಂಧ ಸಸ್ಸೂನ್‌ ಆಸ್ಪತ್ರೆಯ ವಿಧಿವಿಜ್ಞಾನ ಔಷಧಗಳ ವಿಭಾಗದ ಮುಖ್ಯಸ್ಥರಾಗಿದ್ದ ಡಾ. ಅಜಯ್ ತವಾರೆ, ವೈದ್ಯಕೀಯ ಅಧಿಕಾರಿ ಡಾ. ಶ್ರೀಹರಿ ಹಲ್ನೋರ್ ಹಾಗೂ ನೌಕರ ಅತುಲ್ ಘಟಕಾಂಬ್ಳೆ ಅವರನ್ನು ಹಾಗೂ ಮಧ್ಯವರ್ತಿಗಳಾಗಿ ನೆರವಾದ ಅಷ್ಪಕ್‌ ಮಕಂದರ್‌, ಅಮರ್‌ ಗಾಯಕವಾಡ್‌ ಎಂಬವರನ್ನೂ ಸೆರೆ ಹಿಡಿಯಲಾಗಿದೆ.

ಈ 'ನಕಲಿ' ರಕ್ತದ ಮಾದರಿಯನ್ನು ಸಸ್ಸೂನ್‌ ಆಸ್ಪತ್ರೆಯಲ್ಲಿ ವಿಲೇವಾರಿ ಮಾಡಲಾಗಿದೆ ಎಂಬುದು ತನಿಖೆಯಿಂದ ತಿಳಿದುಬಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.