ADVERTISEMENT

‘ನ್ಯಾಯ’ಕ್ಕಾಗಿ ಹೋರಾಡುವವರಿಗೆ ’ಯಾತ್ರೆ’ ವೇದಿಕೆ: ರಾಹುಲ್‌ ಗಾಂಧಿ

ನಾಗರಿಕ ಸಂಘಟನೆಗಳೊಂದಿಗೆ ನಡೆದ ಸಂವಾದಲ್ಲಿ ರಾಹುಲ್‌ ಗಾಂಧಿ ಪ್ರತಿಪಾದನೆ

ಪಿಟಿಐ
Published 12 ಜನವರಿ 2024, 13:54 IST
Last Updated 12 ಜನವರಿ 2024, 13:54 IST
ರಾಹುಲ್‌ ಗಾಂಧಿ
ರಾಹುಲ್‌ ಗಾಂಧಿ   

ನವದೆಹಲಿ: ‘ಪಕ್ಷ ಕೈಗೊಂಡಿರುವ ಭಾರತ ಜೋಡೊ ನ್ಯಾಯ ಯಾತ್ರೆ ಮೂಲಕ ನಾನು ನ್ಯಾಯಕ್ಕಾಗಿ ಹೋರಾಡುತ್ತೇನೆ. ಇದೇ ಉದ್ದೇಶಕ್ಕಾಗಿ ಹೋರಾಟ ನಡೆಸುತ್ತಿರುವವರು ಈ ಯಾತ್ರೆಯನ್ನು ವೇದಿಕೆಯಾಗಿ ಬಳಸಿಕೊಳ್ಳಬೇಕು’ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಶುಕ್ರವಾರ ಆಹ್ವಾನ ನೀಡಿದ್ದಾರೆ.

ಮಣಿಪುರದಿಂದ ಇದೇ ಭಾನುವಾರ ಆರಂಭವಾಗಲಿರುವ ಯಾತ್ರೆ ಹಿನ್ನೆಲೆಯಲ್ಲಿ ನಾಗರಿಕ ಸಂಘಟನೆಗಳು ಹಾಗೂ ಜನಪರ ಚಳವಳಿಗಳ ಪ್ರತಿನಿಧಿಗಳ ಜೊತೆ ನಡೆಸಿದ ಸಂವಾದದ ವೇಳೆ ಅವರು ಈ ಮನವಿ ಮಾಡಿದ್ದಾರೆ.

‘ಭಾರತ ಜೋಡೊ ಅಭಿಯಾನ’ ಎಂಬ ನಾಗರಿಕ ಸಂಘಟನೆಗಳ ವೇದಿಕೆ ಈ ಸಂವಾದ ಆಯೋಜಿಸಿತ್ತು ಎಂದು ಕಾಂಗ್ರೆಸ್‌ ಪಕ್ಷ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ತಿಳಿಸಲಾಗಿದೆ.

ADVERTISEMENT

‘ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಹಾಗೂ ಆರ್‌ಎಸ್‌ಎಸ್‌ನಿಂದ ಆಗುತ್ತಿರುವ ಅನ್ಯಾಯ ಎದುರಿಸುವಲ್ಲಿ ನ್ಯಾಯಕ್ಕಾಗಿ ಹೋರಾಡುತ್ತಿರುವ ರಾಜಕೀಯ ಪಕ್ಷಗಳು, ಸಂಘಟನೆಗಳು ಹಾಗೂ ವ್ಯಕ್ತಿಗಳು ಒಂದಾಗುವುದು ನಿರ್ಣಾಯಕವಾಗಲಿದೆ ಎಂಬುದಾಗಿ ರಾಹುಲ್‌ ಗಾಂಧಿ ವಿವರಿಸಿದರು’ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.

ದಲಿತರು, ಆದಿವಾಸಿಗಳು, ಒಬಿಸಿಗಳು, ಮಹಿಳೆಯರು, ನಿರುದ್ಯೋಗಿ ಯುವ ಜನತೆ ಹಾಗೂ ಅಸಂಘಟಿತ ವಲಯದ ಕಾರ್ಮಿಕರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಸಂವಾದದಲ್ಲಿ ಪಾಲ್ಗೊಂಡಿದ್ದ ವಿವಿಧ ಸಂಘಟನೆಗಳ ಪ್ರತಿನಿಧಿಗಳು ಪ್ರಸ್ತಾಪಿಸಿದರು.

ಪಕ್ಷದ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್‌, ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಸಹ ಸಂವಾದ ನಡೆಸಿದರು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.