ADVERTISEMENT

ರಾಜ್‌ಕೋಟ್‌ ಗೇಮ್ ಝೋನ್ ಬೆಂಕಿ: ದೇಶವನ್ನೇ ಬೆಚ್ಚಿಬೀಳಿಸಿದ ದುರಂತಕ್ಕೆ ಕಾರಣ ಏನು?

ಘಟನೆಯಲ್ಲಿ ಮೃತಪಟ್ಟವರ ಸಂಖ್ಯೆ 33 ಕ್ಕೆ ಏರಿಕೆಯಾಗಿದೆ. ಇದರಲ್ಲಿ 12 ಮಕ್ಕಳೂ ಸೇರಿದ್ದಾರೆ.

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 26 ಮೇ 2024, 7:41 IST
Last Updated 26 ಮೇ 2024, 7:41 IST
   

ರಾಜ್‌ಕೋಟ್‌: ರಾಜ್‌ಕೋಟ್‌ ಮನರಂಜನಾ ಕೇಂದ್ರ ‘ಟಿಆರ್‌ಪಿ ಗೇಮ್‌ ಝೋನ್‌’ನಲ್ಲಿ ಶನಿವಾರ ಸಂಜೆ ಸಂಭವಿಸಿದ ಭಾರಿ ಅಗ್ನಿ ದುರಂತ ಇಡೀ ದೇಶವನ್ನೇ ಮನಕಲುಕಿದೆ‌.

ಘಟನೆಯಲ್ಲಿ ಮೃತಪಟ್ಟವರ ಸಂಖ್ಯೆ 33 ಕ್ಕೆ ಏರಿಕೆಯಾಗಿದೆ. ಇದರಲ್ಲಿ 12 ಮಕ್ಕಳೂ ಸೇರಿದ್ದಾರೆ ಎಂದು ವರದಿಯಾಗಿದೆ.

ಇಲ್ಲಿ ವಾರಾಂತ್ಯದ ಮೋಜು ಸವಿಯಲು ಗೇಮ್ ಝೋನ್ ಗೆ ತೆರಳಿದ್ದ ಅನೇಕ ಮಕ್ಕಳು ಗುರುತೇ ಸಿಗದಂತೆ ಸುಟ್ಟು ಕರಕಲಾಗಿದ್ದಾರೆ.

ADVERTISEMENT

ಇನ್ನು, ಗೇಮ್ ಝೋನ್ ನಡೆಸಲು ರಾಜಕೋಟ್ ನಗರ ಪಾಲಿಕೆಯಿಂದ ಝೋನ್ ಮಾಲೀಕರು ಪರವಾನಗಿ ಪಡೆದಿರಲಿಲ್ಲ ಹಾಗೂ ಅಗ್ನಿ ಸುರಕ್ಷತಾ ಪ್ರಮಾಣ ಪತ್ರವೂ ಹೊಂದಿರಲಿಲ್ಲ ಎಂದು ಪೊಲೀಸ್ ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ.

ಘಟನೆಗೆ ಸಂಬಂಧಿಸಿದಂತೆ ಮಾಲೀಕ ಸೇರಿದಂತೆ 10 ಜನರನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ ಎಂದು ವರದಿಗಳು ತಿಳಿಸಿವೆ. ಘಟನಾ ಸ್ಥಳದಲ್ಲಿ ಭಾರಿ ಪ್ರಮಾಣದಲ್ಲಿ ಡಿಸೇಲ್ ಸಂಗ್ರಹ ಮಾಡಿದ್ದೇ ದುರಂತ ನಡೆಯಲು ಕಾರಣ ಎನ್ನಲಾಗುತ್ತಿದೆ.

ದುರಂತದ ತೀವ್ರತೆ ಸಾವು‌ ನೋವಿನ ಪ್ರಮಾಣವನ್ನು ಹೆಚ್ಚಿಸಬಹುದು ಎಂದು ತಿಳಿಸಿದೆ.

ಆಟದ ಚಟುವಟಿಕೆಗಳಿಗೆ ನಿರ್ಮಿಸಲಾಗಿದ್ದ ಫೈಬರ್‌ ಗೊಮ್ಮಟದಲ್ಲಿ ಶನಿವಾರ ಸಂಜೆ ಸುಮಾರು 4:30 ಗಂಟೆಗೆ ಬೆಂಕಿ ಹೊತ್ತಿಕೊಂಡಿತು. ಬೆಂಕಿ ಕಾರಣಕ್ಕೆ ಕಟ್ಟಡ ಕುಸಿಯಿತು. ಈ ವೇಳೆ ಮಕ್ಕಳು ಸೇರಿ ಹಲವರು ಆ ಸ್ಥಳದಲ್ಲಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

‘ಸ್ಥಳದಲ್ಲಿ ರಕ್ಷಣಾ ಕಾರ್ಯಗಳು ಬೆಳಿಗ್ಗೆ 4:30ರವರೆಗೆ ನಡೆದಿದ್ದವು. ಬೇಸಿಗೆ ರಜೆ ಕಾರಣ ಗೇಮ್‌ ಝೋನ್‌ನಲ್ಲಿ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು. ಹೀಗಾಗಿ, ಸಾವಿನ ಸಂಖ್ಯೆ ಹೆಚ್ಚಾಗುವ ಆತಂಕವಿದೆ’ ಎಂದು ತಿಳಿಸಿದ್ದಾರೆ.

ಬೆಂಕಿ ಹೊತ್ತಿಕೊಳ್ಳಲು ಕಾರಣವೇನು ಎಂಬುದನ್ನು ತಿಳಿದುಕೊಳ್ಳುವ ನಿಟ್ಟಿನಲ್ಲಿ ತನಿಖೆ ನಡೆಸಲಾಗುವುದು. ನಗರದಲ್ಲಿರುವ ಎಲ್ಲಾ ಗೇಮ್‌ ಝೋನ್‌ಗಳಿಗೆ ಕಾರ್ಯಾಚರಣೆ ಸ್ಥಗಿತಗೊಳಿಸುವಂತೆ ಸೂಚಿಸಲಾಗಿದೆ ಎಂದು ರಾಜ್‌ಕೋಟ್‌ ಪೊಲೀಸ್ ಆಯುಕ್ತ ರಾಜು ಭಾರ್ಗವ್ ಅವರು ಮಾಧ್ಯಮಗಳಿಗೆ ಹೇಳಿದ್ದಾರೆ.

ಇಂದು ಬೆಳಿಗ್ಗೆ ಘಟನಾ ಸ್ಥಳಕ್ಕೆ ಗುಜರಾತ್ ಸಿಎಂ ಭೂಪೇಂದ್ರ ಪಟೇಲ್ ಭೇಟಿ ನೀಡಿ ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ. ತಪ್ಪಿತಸ್ಥರ ವಿರುದ್ಧ ಕ್ರಮದ ಭರವಸೆ ನೀಡಿದ್ದಾರೆ.

ರಾಜ್‌ಕೋಟ್‌ ಗೇಮ್‌ ಝೋನ್‌ ಅಗ್ನಿ ದುರಂತದ ಬಗ್ಗೆ ಕಿಡಿಕಾರಿರುವ ಗುಜರಾತ್‌ ಹೈಕೋರ್ಟ್‌ನ ವಿಶೇಷ ಪೀಠ ‘ಇದು ಮಾನನಿಂದಾದ ದುರಂತ’ ಎಂದು ಹೇಳಿದೆ. ಅಲ್ಲದೆ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು, ಯಾವ ನಿಬಂಧನೆ ಮೇಲೆ ಈ ಗೇಮ್ ಝೋನ್‌ ಕಾರ್ಯನಿರ್ವಹಿಸುತ್ತಿತ್ತು ಎನ್ನುವುರ ಬಗ್ಗೆ ಮಾಹಿತಿ ಕೊಡಿ ಎಂದು ರಾಜ್ಯ ಸರ್ಕಾರ ಹಾಗೂ ಮಹಾನಗರ ಪಾಲಿಕೆಗೆ ನೋಟಿಸ್ ಜಾರಿ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.