ADVERTISEMENT

ಪಶ್ಚಿಮ ಬಂಗಾಳ: ವಾರ ಪೂರೈಸಿದ ವೈದ್ಯರ ಆಮರಣಾಂತ ಉಪವಾಸ

ಆರ್.ಜಿ.ಕರ್‌ ಆಸ್ಪತ್ರೆಯಲ್ಲಿ ವೈದ್ಯೆ ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ– ಕೊಲೆ ಪ್ರಕರಣ

ಪಿಟಿಐ
Published 12 ಅಕ್ಟೋಬರ್ 2024, 15:46 IST
Last Updated 12 ಅಕ್ಟೋಬರ್ 2024, 15:46 IST
ಕೋಲ್ಕತ್ತದ ವೈದ್ಯೆ ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ– ಕೊಲೆ ಪ್ರಕರಣದಲ್ಲಿ ನ್ಯಾಯಕ್ಕಾಗಿ ಆಗ್ರಹಿಸಿ ಆಮರಣಾಂತ ಉಪವಾಸ ನಡೆಸುತ್ತಿರುವ ಕಿರಿಯ ವೈದ್ಯರು ಆರೋಗ್ಯ ಸ್ಥಿತಿಗತಿ ದಾಖಲಿಸುತ್ತಿರುವ ಸಹೋದ್ಯೋಗಿಗಳು– ಪಿಟಿಐ ಚಿತ್ರ
ಕೋಲ್ಕತ್ತದ ವೈದ್ಯೆ ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ– ಕೊಲೆ ಪ್ರಕರಣದಲ್ಲಿ ನ್ಯಾಯಕ್ಕಾಗಿ ಆಗ್ರಹಿಸಿ ಆಮರಣಾಂತ ಉಪವಾಸ ನಡೆಸುತ್ತಿರುವ ಕಿರಿಯ ವೈದ್ಯರು ಆರೋಗ್ಯ ಸ್ಥಿತಿಗತಿ ದಾಖಲಿಸುತ್ತಿರುವ ಸಹೋದ್ಯೋಗಿಗಳು– ಪಿಟಿಐ ಚಿತ್ರ   

ಕೋಲ್ಕತ್ತ (‍ಪಿಟಿಐ): ಇಲ್ಲಿನ ಆರ್‌.ಜಿ.ಕರ್‌ ಆಸ್ಪತ್ರೆಯ ವೈದ್ಯೆ ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ– ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಕ್ಕಾಗಿ ಆಗ್ರಹಿಸಿ ಆರು ವೈದ್ಯರು ನಡೆಸುತ್ತಿರುವ ಆಮರಣಾಂತ ಉಪವಾಸ ಸತ್ಯಾಗ್ರಹ ಒಂದು ವಾರ ಪೂರೈಸಿದ್ದು, ಮತ್ತಿಬ್ಬರು ವೈದ್ಯರು ಹೋರಾಟಕ್ಕೆ ಕೈ ಜೋಡಿಸಿದ್ದಾರೆ.

ರಾಮಕೃಷ್ಣ ಮಿಷನ್‌ ಸೇವಾ ಪ್ರತಿಷ್ಠಾನದ ಪರಿಚಯ್‌ ಪಾಂಡಾ ಹಾಗೂ ಕಲ್ಕತ್ತಾ ನ್ಯಾಷನಲ್‌ ಮೆಡಿಕಲ್‌ ಕಾಲೇಜು ಹಾಗೂ ಆಸ್ಪತ್ರೆಯ ಅಲೊಲಿಕಾ ಘೋರುಯಿ ಅವರು ಕೂಡ ಶನಿವಾರ ಹೋರಾಟದಲ್ಲಿ ಕೈ ಜೋಡಿಸಿದ್ದಾರೆ. ಸಿಲಿಗುರಿಯ ನಾರ್ಥ್‌ ಬೆಂಗಾಲ್‌ ವೈದ್ಯಕೀಯ ಕಾಲೇಜಿನಲ್ಲಿ ಇಬ್ಬರು ವೈದ್ಯರು ಕೂಡ ಉಪವಾಸ ನಡೆಸಿದ್ದಾರೆ.

ವೈದ್ಯರ ಆರೋಗ್ಯ ಪರಿಸ್ಥಿತಿ ಬಿಗಡಾಯಿಸಿದ್ದು, ಗಂಭೀರ ಸ್ಥಿತಿಗೆ ತಲುಪಿದೆ ಎಂದು ಉಳಿದ ವೈದ್ಯರು ತಿಳಿಸಿದ್ದಾರೆ. ಅ.5ರಿಂದಲೇ ಈ ವೈದ್ಯರು ಉಪವಾಸಕ್ಕೆ ಕೂತಿದ್ದಾರೆ.

ADVERTISEMENT

‘ಉಪವಾಸಕ್ಕೆ ಕೂತ ವೈದ್ಯರು ಸಂಪೂರ್ಣವಾಗಿ ಬಳಲಿದ್ದಾರೆ. ಮೂತ್ರದಲ್ಲಿ ಕ್ರಿಯಾಟಿನೈನ್‌ ಪ್ರಮಾಣವು ಏರಿಕೆಯಾಗಿದ್ದು, ಮೂತ್ರಪಿಂಡಕ್ಕೆ ಹಾನಿಯಾಗಿ, ಆರೋಗ್ಯ ಪರಿಸ್ಥಿತಿ ಹದಗೆಟ್ಟಿರುವುದು ಕಂಡುಬಂದಿದೆ’ ಎಂದು ಪ್ರತಿಭಟನೆನಿರತ ಡಾ.ದೇಬಾಸಿಸ್‌ ಹಾಲ್ದರ್‌ ತಿಳಿಸಿದ್ದಾರೆ.

‘ಮತ್ತೊಬ್ಬ ವೈದ್ಯ ಅನಿಕೇತ್‌ ಮಹತೊ ಅವರನ್ನು ಆರ್‌.ಜಿ.ಕರ್‌ ಆಸ್ಪತ್ರೆಯ ತುರ್ತು ನಿಗಾ ಘಟಕಕ್ಕೆ ದಾಖಲಿಸಲಾಗಿದ್ದು, ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ’ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.

ಹೆಚ್ಚಿದ ಒತ್ತಡ:

ಉಪವಾಸ ಕೈ ಬಿಡುವಂತೆ ಕುಟುಂಬದ ಸದಸ್ಯರ ಮೇಲೆ ಪೊಲೀಸರು ಒತ್ತಡ ಹೇರುತ್ತಿದ್ದಾರೆ ಎಂದು ಕಿರಿಯ ವೈದ್ಯರು ಆರೋಪಿಸಿದ್ದಾರೆ.

ಪರಿಸ್ಥಿತಿ ಕೈ ಮೀರುವ ಮುನ್ನವೇ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಧ್ಯಪ್ರವೇಶಿಸಬೇಕು ಎಂದು ಭಾರತೀಯ ವೈದ್ಯಕೀಯ ಸಂಘಟನೆಯು ಶುಕ್ರವಾರ ಆಗ್ರಹಿಸಿದೆ.

‘ವೈದ್ಯರು ನಡೆಸುತ್ತಿರುವ ಉಪವಾಸ ಸತ್ಯಾಗ್ರಹವನ್ನು ಅಖಿಲ ಭಾರತೀಯ ವೈದ್ಯರ ಒಕ್ಕೂಟವು ಬೆಂಬಲಿಸಿದ್ದು, ಏನೇ ಅನಾಹುತವಾದರೂ ದೇಶದಾದ್ಯಂತ ವೈದ್ಯಕೀಯ ಸೇವೆಯನ್ನು ಸ್ಥಗಿತಗೊಳಿಸಲಾಗುವುದು’ ಎಂದು ಎಚ್ಚರಿಕೆ ನೀಡಿದೆ. 

ಬೇಡಿಕೆ ಏನು?: ಕೊಲೆಯಾದ ವೈದ್ಯೆಯ ತಪ್ಪಿತಸ್ಥರನ್ನು ಶಿಕ್ಷಿಸಬೇಕು. ಆರೋಗ್ಯ ಇಲಾಖೆ ಕಾರ್ಯದರ್ಶಿ ಎನ್‌.ಎಸ್‌. ನಿಗಮ್‌ ಅವರನ್ನು ಹುದ್ದೆಯಿಂದ ತೆಗೆದು ಹಾಕಬೇಕು. ಆಸ್ಪತ್ರೆಗಳಲ್ಲಿ ಕೇಂದ್ರಿಕೃತ ರೆಫರಲ್‌ ವ್ಯವಸ್ಥೆಗೆ ಆಗ್ರಹ, ಆಸ್ಪತ್ರೆಗಳಿಗೆ ಹೆಚ್ಚಿನ ಪೊಲೀಸ್‌ ಭದ್ರತೆ, ಖಾಲಿ ಉಳಿದಿರುವ ಹುದ್ದೆಗಳ ಭರ್ತಿಗೆ ಒತ್ತಾಯಿಸಿ ಕಿರಿಯ ವೈದ್ಯರು ಪ್ರತಿಭಟನೆ ನಡೆಸುತ್ತಿದ್ದಾರೆ.

ವೈದ್ಯೆ ವಿದ್ಯಾರ್ಥಿನಿಯ ಅತ್ಯಾಚಾರ– ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯ ಒದಗಿಸುವಂತೆ ಕೋರಿ ಸಿಟಿಜನ್‌ ಫೋರಂ ಸದಸ್ಯರು ಶನಿವಾರ ಸಿಬಿಐ ಕಚೇರಿಯವರೆಗೂ ಪ್ರತಿಭಟನೆ ನಡೆಸಿದರು

ಬಂಗಾಳ: ಖಾಸಗಿ ಆಸ್ಪತ್ರೆಗಳಲ್ಲಿ ಸೇವೆ ಭಾಗಶಃ ಸ್ಥಗಿತ

‘ಕಿರಿಯ ವೈದ್ಯರ ಉಪವಾಸ ಸತ್ಯಾಗ್ರಹವನ್ನು ಬೆಂಬಲಿಸಿ ಪಶ್ಚಿಮ ಬಂಗಾಳದಾದ್ಯಂತ ಇದೇ 14ರಿಂದ 48 ಗಂಟೆಗಳ ಕಾಲ ಭಾಗಶಃ ಸೇವೆ ಸ್ಥಗಿತಗೊಳಿಸಲಾಗುವುದು’ ಎಂದು ಖಾಸಗಿ ಆಸ್ಪತ್ರೆಗಳ ವೈದ್ಯರು ತಿಳಿಸಿದ್ದಾರೆ. ‘ಈ ಸಂದರ್ಭದಲ್ಲಿ ತುರ್ತು ಸೇವೆಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ’ ಎಂದು ಸ್ಪಷ್ಟಪಡಿಸಿದ್ದಾರೆ. ‘ಸರ್ಕಾರಿ ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವೈದ್ಯರು ನಡೆಸುತ್ತಿರುವ ಪ್ರತಿಭಟನೆ ಕುರಿತಂತೆ ಪಶ್ಚಿಮ ಬಂಗಾಳ ಸರ್ಕಾರವು ಧನಾತ್ಮಕ ಹೆಜ್ಜೆ ಇಡುತ್ತಿಲ್ಲ. ಈಗಿನ ಪರಿಸ್ಥಿತಿ ಕುರಿತಂತೆ ಇಡೀ ವೈದ್ಯ ಸಮೂಹವು ಚಿಂತಿತರಾಗಿದ್ದು ಆತಂಕದಲ್ಲಿದ್ದಾರೆ. ಅವರ ಪ್ರತಿಭಟನೆಯಲ್ಲಿ ಒಗ್ಗಟ್ಟು ಪ್ರದರ್ಶಿಸುವ ನಿಟ್ಟಿನಲ್ಲಿ ಸೇವೆ ಭಾಗಶಃ ಸ್ಥಗಿತಗೊಳಿಸುತ್ತಿದ್ದೇವೆ’ ಎಂದು ತಿಳಿಸಿದ್ದಾರೆ. ‘ಅ.14ರ ಬೆಳಿಗ್ಗೆ 6 ಗಂಟೆಯಿಂದಲೇ ಬೆಳಿಗ್ಗೆ 6ರಿಂದಲೇ ಸೇವೆ ಸ್ಥಗಿತಗೊಳಿಸಲಿದ್ದು ರಾಜ್ಯ ಸರ್ಕಾರದಿಂದ ಸೂಕ್ತ ನಿರ್ಧಾರ ಹೊರಬರದಿದ್ದರೆ ಹೋರಾಟ ಮುಂದುವರಿಸಲಾಗುವುದು’ ಎಂದು ವೈದ್ಯರು ಎಚ್ಚರಿಕೆ ನೀಡಿದ್ದಾರೆ. 

ಸಾಮೂಹಿಕ ರಾಜೀನಾಮೆ ಸ್ವೀಕಾರಾರ್ಹವಲ್ಲ: ಸರ್ಕಾರ

‘ಸರ್ಕಾರಿ ಸ್ವಾಮ್ಯದ ಆಸ್ಪತ್ರೆಯ ವೈದ್ಯರು ಸರ್ಕಾರಕ್ಕೆ ಕಳುಹಿಸಿರುವ ಸಾಮೂಹಿಕ ರಾಜೀನಾಮೆ ಸ್ವೀಕಾರಾರ್ಹವಲ್ಲ ಸೇವಾ ನಿಯಮಗಳಂತೆ ವೈಯಕ್ತಿಕವಾಗಿ ಸಲ್ಲಿಸಬೇಕು’ ಎಂದು ಪಶ್ಚಿಮ ಬಂಗಾಳ ಸರ್ಕಾರ ತಿಳಿಸಿದೆ. ಕಿರಿಯ ವೈದ್ಯರ ಉಪವಾಸ ಬೆಂಬಲಿಸಿ ರಾಜ್ಯದ ವಿವಿಧ ಸರ್ಕಾರಿ ಆಸ್ಪತ್ರೆಗಳ ಹಲವು ವೈದ್ಯರು ಸಾಮೂಹಿಕ ರಾಜೀನಾಮೆ ಪತ್ರ ಸಲ್ಲಿಸಿದ್ದರು. ‘ಸೇವಾ ನಿಯಮಗಳಂತೆ ಯಾವುದೇ ಸಿಬ್ಬಂದಿ ವೈಯಕ್ತಿಕವಾಗಿ ಕೆಲಸಕ್ಕೆ ರಾಜೀನಾಮೆ ಪತ್ರ ಸಲ್ಲಿಸಬೇಕು. ಈಗ ಕಳುಹಿಸಿರುವುದು ಯಾವುದೂ ರಾಜೀನಾಮೆ ಪತ್ರವಲ್ಲ’ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಮುಖ್ಯ ಸಲಹೆಗಾರ ಅಲ್ಪನ್‌ ಬಂಡೋಪಾಧ್ಯಾಯ್‌ ತಿಳಿಸಿದ್ದಾರೆ. ‘ನಿರ್ದಿಷ್ಟವಾಗಿ ಯಾವುದೇ ವಿಚಾರವನ್ನು ಪ್ರಸ್ತಾಪಿಸದೇ ವೈದ್ಯರು ಸಾಮೂಹಿಕ ರಾಜೀನಾಮೆ ಪತ್ರಗಳನ್ನು ಸರ್ಕಾರಕ್ಕೆ ಕಳುಹಿಸಿದ್ದಾರೆ. ಗೊಂದಲವನ್ನು ಬಗೆಹರಿಸಲು ಸರ್ಕಾರ ಪ್ರಯತ್ನಿಸುತ್ತಿದೆ’ ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.