ADVERTISEMENT

ಕೈದಿಗಳಿಗೂ ಘನತೆಯಿಂದ ಬದುಕುವ ಹಕ್ಕಿದೆ: ಸುಪ್ರೀಂ ಕೋರ್ಟ್‌

ಜಾತಿ ಆಧಾರಿತ ತಾರತಮ್ಯ ನಿಷೇಧಿಸಿ ತೀರ್ಪು ನೀಡಿರುವ ‘ಸುಪ್ರೀಂ’

ಪಿಟಿಐ
Published 4 ಅಕ್ಟೋಬರ್ 2024, 23:30 IST
Last Updated 4 ಅಕ್ಟೋಬರ್ 2024, 23:30 IST
–
   

ನವದೆಹಲಿ: ‘ಸೆರೆವಾಸ ಅನುಭವಿಸುತ್ತಿರುವವರೂ ಘನತೆಯಿಂದ ಬದುಕುವ ಹಕ್ಕು ಹೊಂದಿದ್ದಾರೆ. ಕೈದಿಗಳಿಗೆ ಇಂತಹ ಹಕ್ಕನ್ನು ನಿರಾಕರಿಸುವುದು ವಸಾಹತುಶಾಹಿಗಳ ಮತ್ತು ವಸಾಹತುಶಾಹಿ ಪೂರ್ವದಲ್ಲಿದ್ದ ವ್ಯವಸ್ಥೆಯ ಪಳೆಯುಳಿಕೆಯನ್ನೇ ಮುಂದುವರಿಸಿದಂತಾಗಲಿದೆ’ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ. ಜೈಲುಗಳಲ್ಲಿ ಜಾತಿ ಆಧಾರಿತ ತಾರತಮ್ಯ ನಿಷೇಧಿಸಿ ಗುರುವಾರ ನೀಡಿರುವ ಮಹತ್ವದ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್‌ನ ನ್ಯಾಯಪೀಠವೊಂದು ಈ ಮಾತು ಹೇಳಿದೆ.

ಕಾರಾಗೃಹಗಳಲ್ಲಿ ಕೈದಿಗಳಿಗೆ ಕೆಲಸದ ಹಂಚಿಕೆ ಮತ್ತು ಅವರನ್ನು ಯಾವ ಕೊಠಡಿಯಲ್ಲಿ ಇರಿಸಬೇಕು ಎಂಬುದನ್ನು ಜಾತಿಯ ಆಧಾರದಲ್ಲಿ ನಿರ್ಧರಿಸುವುದನ್ನು ಒಪ್ಪಲಾಗದು ಎಂದೂ ಪೀಠವು ಹೇಳಿದೆ. ಮುಖ್ಯನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್, ನ್ಯಾಯಮೂರ್ತಿಗಳಾದ ಜೆ.ಬಿ.ಪಾರ್ದೀವಾಲಾ ಮತ್ತು ಮನೋಜ್ ಮಿಶ್ರಾ ಅವರಿದ್ದ ನ್ಯಾಯಪೀಠ ಈ ಅಭಿಪ್ರಾಯಗಳನ್ನು ತನ್ನ ತೀರ್ಪಿನಲ್ಲಿ ಹೇಳಿದೆ.

ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಮಧ್ಯಪ್ರದೇಶ, ಆಂಧ್ರಪ್ರದೇಶ, ಒಡಿಶಾ, ಕೇರಳ, ಮಹಾರಾಷ್ಟ್ರ, ಕರ್ನಾಟಕ ಮತ್ತು ಹಿಮಾಚಲ ಪ್ರದೇಶ ಸೇರಿದಂತೆ 10 ರಾಜ್ಯಗಳಲ್ಲಿ ಅನುಸರಿಸುತ್ತಿರುವ ಜೈಲು ಕೈಪಿಡಿಯಲ್ಲಿನ ಕೆಲ ನಿಯಮಗಳು ಅಸಾಂವಿಧಾನಿಕ ಎಂದು 148 ಪುಟಗಳ ತೀರ್ಪಿನಲ್ಲಿ ಸ್ಪಷ್ಟಪಡಿಸಿದೆ.

ADVERTISEMENT
ಸಂವಿಧಾನ ಜಾರಿಗೆ ಬರುವುದಕ್ಕೂ ಮುನ್ನ ಅಸ್ತಿತ್ವದಲ್ಲಿದ್ದ ತಾರತಮ್ಯದ ಕಾನೂನುಗಳನ್ನು ಪರಾಮರ್ಶಿಸಬೇಕು ಹಾಗೂ ಅವುಗಳನ್ನು ತೆಗೆದುಹಾಕಬೇಕು
ಡಿ.ವೈ.ಚಂದ್ರಚೂಡ್‌ ಸುಪ್ರೀಂ ಕೋರ್ಟ್‌ ಮುಖ್ಯನ್ಯಾಯಮೂರ್ತಿ

ತೀರ್ಪಿನಲ್ಲಿನ ಪ್ರಮುಖಾಂಶಗಳು

  •  ಸಂವಿಧಾನ ಆಧಾರಿತ ಆಡಳಿತ ಜಾರಿಗೂ ಮುಂಚಿನ ಅವಧಿಯಲ್ಲಿ ಕೈದಿಗಳನ್ನು ಕೂಡಿಹಾಕಲಾಗುತ್ತಿತ್ತು.  

  • ಸಮಾನತೆಯು ಸಂವಿಧಾನದಡಿ ಪ್ರತಿಯೊಬ್ಬರು ಹೊಂದಿರುವ ಮಹತ್ವದ ಹಕ್ಕು. ಇದನ್ನು ಸಂವಿಧಾನದ 14ನೇ ವಿಧಿಯಲ್ಲಿ ಸ್ಪಷ್ಟಪಡಿಸಲಾಗಿದೆ. ಹೀಗಾಗಿ, ಕಾನೂನಿನ ಮುಂದೆ ಎಲ್ಲರೂ ಸಮಾನರು ಅಥವಾ ಎಲ್ಲರಿಗೂ ಸಮಾನ ರಕ್ಷಣೆ ಇದೆ ಎಂಬುದನ್ನು ನಿರಾಕರಿಸುವಂತಿಲ್ಲ

  • ಸಂವಿಧಾನದ 15 ವಿಧಿಯು ಜಾತಿ, ಜನಾಂಗ, ಧರ್ಮ, ಪ್ರಾದೇಶಿಕತೆ ಹಾಗೂ ಭಾಷೆ ಆಧಾರದಲ್ಲಿ ತಾರತಮ್ಯ ಮಾಡುವುದನ್ನು ನಿಷೇಧಿಸುತ್ತದೆ. ಯಾವುದೇ ಆಧಾರದಲ್ಲಿ ಒಂದು ವೇಳೆ ಸರ್ಕಾರವೇ ತಾರತಮ್ಯ ಮಾಡಿದಲ್ಲಿ, ಅದು ತಾರತಮ್ಯದ ಪರಮಾವಧಿ ಎನಿಸುವುದು

  • ಯಾವುದೇ ರೀತಿಯ ತಾರತಮ್ಯವನ್ನು ಸರ್ಕಾರ ತಡೆಗಟ್ಟಬೇಕೇ ಹೊರತು ಅದನ್ನು ಮುಂದುವರಿಸಿಕೊಂಡು ಹೋಗಬಾರದು. ಇದನ್ನು ಸಂವಿಧಾನದಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ.

  • * ತಾರತಮ್ಯವೆಂಬುದು ಇರಲೇಬಾರದು. ಇದು ಶ್ರೇಷ್ಠತೆ ಅಥವಾ ಕೀಳರಿಮೆ ಭಾವನೆ ಮೂಡಿಸುತ್ತದೆ. ಒಬ್ಬ ವ್ಯಕ್ತಿ ಅಥವಾ ಗುಂಪೊಂದರ ಅವಹೇಳನ ದ್ವೇಷಿಸುವುದಕ್ಕೆ ಕಾರಣವಾಗುತ್ತದೆ .

  • ಈ ರೀತಿಯ ತಾರತಮ್ಯ/ಪಕ್ಷಪಾತದ ಭಾವನೆಗಳು ಕೆಲ ಸಮುದಾಯಗಳ ಸಾಮೂಹಿಕ ಹತ್ಯೆಗೆ ಕಾರಣವಾಗಿದ್ದಕ್ಕೆ ಇತಿಹಾಸ ಸಾಕ್ಷಿಯಾಗಿದೆ.

  • ತಾರತಮ್ಯವು ವ್ಯಕ್ತಿಯ ಆತ್ಮಗೌರವ ಕುಸಿಯುವಂತೆ ಮಾಡುತ್ತದೆ. ಇದರಿಂದ ವ್ಯಕ್ತಿ ಹಲವು ಅವಕಾಶಗಳಿಂದ ವಂಚಿತನಾಗುವಂತೆ/ವಂಚಿತಳಾಗುವಂತೆ ಮಾಡುತ್ತದೆ. ಕೆಲವೊಮ್ಮೆ ಕೆಲ ವ್ಯಕ್ತಿಗಳ ವಿರುದ್ಧ ಹಿಂಸೆಗೆ ಕಾರಣವಾಗುತ್ತದೆ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.