ಲಖನೌ: ಆರ್ಎಸ್ಎಸ್ ತನ್ನ ಶತಮಾನೋತ್ಸವದ (2025ರಲ್ಲಿ) ವೇಳೆಗೆ ದೇಶದ ಎಲ್ಲ ಗ್ರಾಮಗಳು ಮತ್ತು ಸಮಾಜದ ಪ್ರತಿಯೊಂದು ವರ್ಗವನ್ನು ತಲುಪಿ ಅಲ್ಲಿ ‘ಶಾಖೆ’ (ತರಬೇತಿ ಕಾರ್ಯಕ್ರಮ) ಆಯೋಜಿಸುವಂತಾಗಬೇಕು ಎಂದು ಸಂಘದ ಸರಸಂಘಚಾಲಕ ಮೋಹನ್ ಭಾಗವತ್ ಹೇಳಿದರು.
ಉತ್ತರಪ್ರದೇಶದ ಗೋರಖ್ಪುರದ ಮಾನೀರಾಮ್ ಎಂಬಲ್ಲಿ ಶುಕ್ರವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅವರು ಸಂಘದ ಸ್ವಯಂಸೇವಕರನ್ನುದ್ದೇಶಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ವಿವಿಧ ಜಿಲ್ಲೆಗಳ 250ಕ್ಕೂ ಅಧಿಕ ಸ್ವಯಂಸೇವಕರು ಪಾಲ್ಗೊಂಡಿದ್ದಾರೆ.
‘ನಾವು 2025ರಲ್ಲಿ ಶತಮಾನೋತ್ಸವಕ್ಕೆ ಕಾಲಿಡಲಿದ್ದೇವೆ. ಆ ವೇಳೆಗೆ ಏನಾದರೂ ದೊಡ್ಡ ಸಾಧನೆ ಮಾಡಬೇಕು. ಸಂಘವನ್ನು ದೊಡ್ಡ ಮಟ್ಟದಲ್ಲಿ ವಿಸ್ತರಿಸುವ ಜವಾಬ್ದಾರಿ ಸ್ವಯಂಸೇವಕರ ಮೇಲಿದೆ’ ಎಂದರು.
ಭಾಗವತ್ ಅವರು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರನ್ನು ಭೇಟಿಯಾಗುವ ಸಾಧ್ಯತೆಯಿದೆ. ಇಬ್ಬರ ನಡುವಣ ಮಾತುಕತೆಯ ವೇಳೆ, ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಹಿನ್ನಡೆ ಉಂಟಾಗಿರುವ ವಿಷಯವೂ ಚರ್ಚೆಯಾಗಬಹುದು ಎಂದು ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.