ADVERTISEMENT

ಕೇಜ್ರಿವಾಲ್ ಮುಕ್ತ ಭೇಟಿಗಿಲ್ಲ ಅವಕಾಶ: ಸಂಜಯ್‌ ಸಿಂಗ್ ಕಿಡಿ

ಪಿಟಿಐ
Published 13 ಏಪ್ರಿಲ್ 2024, 9:33 IST
Last Updated 13 ಏಪ್ರಿಲ್ 2024, 9:33 IST
ಸಂಜಯ್ ಸಿಂಗ್
ಸಂಜಯ್ ಸಿಂಗ್   

ನವದೆಹಲಿ: ‘ತಿಹಾರ್‌ ಜೈಲಿನಲ್ಲಿರುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರಿಗೆ ತಮ್ಮ ಕುಟುಂಬದ ಸದಸ್ಯರ ಜತೆ ಮುಕ್ತ ಭೇಟಿಗೂ ಅವಕಾಶ ನೀಡುತ್ತಿಲ್ಲ’ ಎಂದು ಎಎಪಿ ನಾಯಕ ಹಾಗೂ ರಾಜ್ಯಸಭಾ ಸಂಸದ ಸಂಜಯ್ ಸಿಂಗ್‌ ಶನಿವಾರ ಕಿಡಿಕಾರಿದ್ದಾರೆ.

‘ಕೇಜ್ರಿವಾಲರ ನೈತಿಕತೆಯನ್ನು ಕುಗ್ಗಿಸುವ ಯತ್ನ ಇದಾಗಿದೆ. ಅವರ ಹಕ್ಕುಗಳನ್ನು ಕಸಿದುಕೊಳ್ಳಲಾಗಿದೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ಅವರು ದೂರಿದರು.

‘ಜೈಲಿನೊಳಗಿರುವ ಕೊಠಡಿಯೊಂದಕ್ಕೆ ಅಳವಡಿಸಿರುವ ಕಬ್ಬಿಣದ ಬಲೆಯ ಹಿಂಬದಿಯಿಂದ ಕೇಜ್ರಿವಾಲ್ ತಮ್ಮ ಕುಟುಂಬದವರನ್ನು ಭೇಟಿಯಾಗಬೇಕಿದೆ. ಮೂರು ಬಾರಿ ಮುಖ್ಯಮಂತ್ರಿಯಾದವರನ್ನು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಆಜ್ಞೆಯಂತೆ ಅವಮಾನಿಸಲಾಗುತ್ತಿದೆ. ಇದು ಅಮಾನವೀಯ. ಆದರೆ ಇಲ್ಲಿಯೇ ಇರುವ ಕ್ರಿಮಿನಲ್‌ ಆರೋಪಿಗಳಿಗೆ ಮುಕ್ತ ಭೇಟಿಯ ಅವಕಾಶ ಕೊಡಲಾಗಿದೆ’ ಎಂದು ಸಂಜಯ್‌ ಆರೋಪಿಸಿದರು.

ADVERTISEMENT

‘ಕೇಜ್ರಿವಾಲ್ ಭೇಟಿಗಾಗಿ ನನಗೆ ಟೋಕನ್ ನೀಡಿದ್ದ ಜೈಲು ಆಡಳಿತವು, ನಂತರ ಭದ್ರತೆಯ ಕಾರಣ ನೀಡಿ ರದ್ದುಗೊಳಿಸಿದೆ’ ಎಂದೂ ಹೇಳಿದರು.

ಈ ಆರೋಪಕ್ಕೆ ಸಂಬಂಧಿಸಿದಂತೆ ತಿಹಾರ್ ಜೈಲು ಆಡಳಿತ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಸಂಜಯ್ ಸಿಂಗ್ ಆರೋಪಕ್ಕೆ ತಿರುಗೇಟು ನೀಡಿರುವ ದೆಹಲಿ ಬಿಜೆಪಿ ಘಟಕದ ಅಧ್ಯಕ್ಷ ವೀರೇಂದ್ರ ಸಚದೇವ್‌, ‘ಕೆಲ ತಿಂಗಳು ಜೈಲಿನಲ್ಲಿದ್ದವರು, ಜೈಲಿನ ಕೈಪಿಡಿ ಬಗ್ಗೆ ತಿಳಿವಳಿಕೆ ಹೊಂದಿರಬೇಕು’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.