ನವದೆಹಲಿ: ಅಖಿಲ ಭಾರತ ಪ್ರವಾಸಿ ಪರವಾನಗಿ (ಎಐಟಿಪಿ) ಹೊಂದಿರುವ ವಾಹನಗಳಿಗೆ ರಾಜ್ಯದ ಮೂಲಕ ಹಾದುಹೋಗಲು ಯಾವುದೇ ಅಡ್ಡಿ ಉಂಟುಮಾಡುವಂತಿಲ್ಲ ಎಂದು ತಮಿಳುನಾಡು ಸರ್ಕಾರಕ್ಕೆ, ಸುಪ್ರೀಂ ಕೋರ್ಟ್ ಮಂಗಳವಾರ ಸೂಚನೆ ನೀಡಿದೆ.
ಕೆ.ಆರ್. ಸುರೇಶ್ ಕುಮಾರ್ ಮತ್ತು ಇತರರು ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಬಿ.ವಿ. ನಾಗರತ್ನ ಮತ್ತು ಉಜ್ವಲ್ ಭುಇಯಾಂ ಅವರು ಇದ್ದ ವಿಭಾಗೀಯ ಪೀಠವು, ತಮಿಳುನಾಡು ಸರ್ಕಾರ ಹಾಗೂ ಇತರರಿಗೆ ನೋಟಿಸ್ ಜಾರಿಗೆ ಸೂಚಿಸಿದೆ.
ಬೇರೆ ರಾಜ್ಯಗಳಲ್ಲಿ ನೋಂದಣಿ ಆಗಿರುವ ಬಸ್ಗಳು ತಮಿಳುನಾಡಿನಲ್ಲಿ ಕಾರ್ಯಾಚರಿಸಬೇಕು ಎಂದಾದರೆ ಅವು ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಮೂಲಕ ಕಡ್ಡಾಯವಾಗಿ ನೋಂದಣಿ ಮಾಡಿಸಿಕೊಳ್ಳಬೇಕು ಎಂದು ಹೇಳುವ ತಮಿಳುನಾಡು ಸರ್ಕಾರದ ಸೂಚನೆಯನ್ನು ರದ್ದುಪಡಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ. ಈ ಸೂಚನೆಯನ್ನು ಸರ್ಕಾರವು 2023ರ ನವೆಂಬರ್ 6 ಹಾಗೂ ಜೂನ್ 18ರಂದು ಹೊರಡಿಸಿದೆ. ಅರ್ಜಿದಾರರು ಎಐಟಿಪಿ ಹೊಂದಿದ್ದಾರೆ.
‘ಅರ್ಜಿದಾರರಿಗೆ ಸೇರಿದ, ಎಐಟಿಪಿ ಹೊಂದಿರುವ ವಾಹನಗಳಿಗೆ ತಮಿಳುನಾಡಿನಲ್ಲಿ ಸಂಚರಿಸಲು ಯಾವುದೇ ಅಡ್ಡಿ ಉಂಟುಮಾಡುವಂತಿಲ್ಲ’ ಎಂದು ಪೀಠವು ಮಧ್ಯಂತರ ಆದೇಶದಲ್ಲಿ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.