ನವದೆಹಲಿ: ಸುಪ್ರೀಂ ಕೋರ್ಟ್ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ಅವರನ್ನು ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದರಲ್ಲಿ (ಪಿಐಎಲ್) ಪ್ರತಿವಾದಿಯನ್ನಾಗಿಸಿದ್ದಕ್ಕೆ ಹಾಗೂ ಸೇವಾ ತಕರಾರಿಗೆ ಸಂಬಂಧಿಸಿದ ಅರ್ಜಿಯೊಂದನ್ನು ವಜಾಗೊಳಿಸಿದ್ದಕ್ಕಾಗಿ ಅವರ ವಿರುದ್ಧ ಆಂತರಿಕ ವಿಚಾರಣೆಗೆ ಆದೇಶಿಸುವಂತೆ ಕೋರಿದ್ದಕ್ಕಾಗಿ ಸುಪ್ರೀಂ ಕೋರ್ಟ್ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
‘ನ್ಯಾಯಮೂರ್ತಿಯೊಬ್ಬರನ್ನು ಪ್ರತಿವಾದಿಯನ್ನಾಗಿಸಿ ನೀವು ಪಿಐಎಲ್ ಸಲ್ಲಿಸಿದ್ದು ಹೇಗೆ? ತುಸುವಾದರೂ ಘನತೆ ಇರಬೇಕು. ನ್ಯಾಯಮೂರ್ತಿಯೊಬ್ಬರ ವಿರುದ್ಧ ಆಂತರಿಕ ವಿಚಾರಣೆ ಆಗಬೇಕು ಎಂದು ಹೀಗೇ ಸುಮ್ಮನೆ ಹೇಳಲು ಅವಕಾಶವಿಲ್ಲ. ಗೊಗೊಯಿ ಅವರು ಸುಪ್ರೀಂ ಕೋರ್ಟ್ನ ನ್ಯಾಯಮೂರ್ತಿ ಆಗಿದ್ದವರು’ ಎಂದು ಸಿಜೆಐ ಡಿ.ವೈ. ಚಂದ್ರಚೂಡ್ ನೇತೃತ್ವದ ಪೀಠವು ಪುಣೆ ಮೂಲದ ಅರ್ಜಿದಾರರಿಗೆ ಹೇಳಿದೆ.
‘ಗೊಗೊಯಿ ಅವರು ನಿವೃತ್ತ ಸಿಜೆಐ. ನ್ಯಾಯಪೀಠದ ಎದುರು ನಿಮಗೆ ಜಯ ಸಿಗಲಿಲ್ಲ ಎಂಬ ಕಾರಣಕ್ಕೆ ನ್ಯಾಯಮೂರ್ತಿಯೊಬ್ಬರ ವಿರುದ್ಧ ಆಂತರಿಕ ವಿಚಾರಣೆ ನಡೆಯಬೇಕು ಎಂದು ಹೇಳಲು ಅವಕಾಶ ಇಲ್ಲ. ಇದನ್ನು ನಾವು ಸಹಿಸುವುದಿಲ್ಲ’ ಎಂದು ಪೀಠವು ಹೇಳಿದೆ.
ತಮ್ಮನ್ನು ಸೇವೆಯಿಂದ ತೆಗೆದ ಕ್ರಮವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಗೊಗೊಯಿ ನೇತೃತ್ವದ ಪೀಠವು ಈ ಹಿಂದೆ ವಜಾಗೊಳಿಸಿತ್ತು. ಇದಾದ ನಂತರ ಅರ್ಜಿದಾರರು ಪಿಐಎಲ್ ಸಲ್ಲಿಸಿದ್ದರು. ಗೊಗೊಯಿ ಅವರು ಈಗ ರಾಜ್ಯಸಭಾ ಸದಸ್ಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.