ADVERTISEMENT

ಯೂಟ್ಯೂಬರ್–ಪತ್ರಕರ್ತನ ಬಿಡುಗಡೆಗೆ ಸುಪ್ರೀಂ ಕೋರ್ಟ್ ಸೂಚನೆ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2024, 14:18 IST
Last Updated 25 ಸೆಪ್ಟೆಂಬರ್ 2024, 14:18 IST
supreme-court-
supreme-court-   

ನವದೆಹಲಿ: ಡಿಎಂಕೆ ಟೀಕಾಕಾರ ಹಾಗೂ ಯೂಟ್ಯೂಬರ್–ಪತ್ರಕರ್ತ ಶಂಕರ್ ಅಲಿಯಾಸ್ ಸವುಕ್ಕು ಶಂಕರ್ ಅವರನ್ನು ತಕ್ಷಣವೇ ಬಿಡುಗಡೆ ಮಾಡಬೇಕು ಎಂದು ತಮಿಳುನಾಡು ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಬುಧವಾರ ಸೂಚನೆ ನೀಡಿದೆ.

ಅವರನ್ನು ಈ ಹಿಂದೆ ಬಂಧಿಸಿದ್ದ ಕ್ರಮವನ್ನು ರದ್ದುಗೊಳಿಸಿದ್ದ ಕೆಲವೇ ದಿನಗಳಲ್ಲಿ ಅವರನ್ನು ಗೂಂಡಾ ಕಾಯ್ದೆಯ ಅಡಿಯಲ್ಲಿ ಮತ್ತೆ ಬಂಧಿಸಲಾಗಿತ್ತು.

ಬಂಧನ ಆದೇಶವನ್ನು ಹಿಂಪಡೆಯಬೇಕು ಎಂದು ಸಲಹಾ ಮಂಡಳಿಯು ಅಭಿಪ್ರಾಯ ನೀಡಿದೆ ಎಂದು ಹಿರಿಯ ವಕೀಲರಾದ ಮುಕುಲ್ ರೋಹಟಗಿ ಮತ್ತು ಸಿದ್ಧಾರ್ಥ ಲೂಥ್ರಾ ಅವರು ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದೀವಾಲಾ ಹಾಗೂ ಮನೋಜ್ ಮಿಶ್ರಾ ಅವರು ಇದ್ದ ವಿಭಾಗೀಯ ಪೀಠಕ್ಕೆ ಮಾಹಿತಿ ನೀಡಿದರು. ಇದಾದ ನಂತರ ‍ಪೀಠವು ಅವರ ಬಿಡುಗಡೆಗೆ ಆದೇಶಿಸಿತು.

ADVERTISEMENT

‘ಬೇರೆ ಯಾವುದೇ ಪ್ರಕರಣದಲ್ಲಿ ಅವರು ಬೇಕಾದವರಲ್ಲ ಎಂದಾದರೆ, ಅವರನ್ನು ತಕ್ಷಣವೇ ಬಿಡುಗಡೆ ಮಾಡಬೇಕು’ ಎಂದು ಪೀಠವು ಹೇಳಿದೆ. ‘ಸಲಹಾ ಮಂಡಳಿಯ ಅಭಿಪ್ರಾಯ ಆಧರಿಸಿ ರಾಜ್ಯ ಸರ್ಕಾರವು ಬಂಧನ ಆದೇಶವನ್ನು ಇಂದು (ಬುಧವಾರ) ರದ್ದುಪಡಿಸಿದೆ’ ಎಂದು ಪೀಠವು ಹೇಳಿತು.

ಹಿಂದೆ ಶಂಕರ್ ಅವರ ಬಂಧನಕ್ಕೆ ಹೊರಡಿಸಿದ್ದ ಆದೇಶವನ್ನು ಮದ್ರಾಸ್ ಹೈಕೋರ್ಟ್ ರದ್ದುಪಡಿಸಿದ ಕೆಲವೇ ದಿನಗಳಲ್ಲಿ ಅವರ ಬಂಧನಕ್ಕೆ ಹೊರಡಿಸಿದ್ದ ಮತ್ತೊಂದು ಆದೇಶವನ್ನು ತಾಯಿ ಎ. ಕಮಲಾ ಅವರು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.

ರಾಜ್ಯ ಸರ್ಕಾರವು ಭಿನ್ನ ಅಭಿಪ್ರಾಯ ದಾಖಲಿಸಿದವರನ್ನು ಹುಡುಕಿ ಬಂಧಿಸುವ ಕ್ರಮದ ಭಾಗವಾಗಿ ಶಂಕರ್ ಅವರ ವಿರುದ್ಧ ಕ್ರಮ ಕೈಗೊಂಡಿದೆ. ಶಂಕರ್ ಅವರಿಗೆ ಕಿರುಕುಳ ನೀಡಲು, ಅವರನ್ನು ಜೈಲಿನಲ್ಲಿಯೇ ಇರಿಸಲು ಈ ರೀತಿ ಮಾಡಿದೆ. ಅದರಲ್ಲೂ, ಅವರಿಗೆ ಬಹುತೇಕ ಪ್ರಕರಣಗಳಲ್ಲಿ ಜಾಮೀನು ಸಿಕ್ಕಿರುವಾಗ, ಗೂಂಡಾ ಕಾಯ್ದೆಯ ಅಡಿಯಲ್ಲಿ ಮೊದಲು ಬಂಧಿಸಿದ್ದ ಕ್ರಮ ರದ್ದಾಗಿರುವಾಗಲೂ ಹೀಗೆ ಮಾಡಲಾಗಿದೆ ಎಂದು ಕಮಲಾ ಅವರು ಹೇಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.