ADVERTISEMENT

ಮಲೇಷ್ಯಾಗೆ ತೆರಳಲು ಸೆಟಲ್ವಾಡ್‌ಗೆ ಸುಪ್ರೀಂ ಕೋರ್ಟ್‌ ಒಪ್ಪಿಗೆ

ಪಿಟಿಐ
Published 20 ಆಗಸ್ಟ್ 2024, 16:17 IST
Last Updated 20 ಆಗಸ್ಟ್ 2024, 16:17 IST
ತೀಸ್ತಾ ಸೆಟಲ್ವಾಡ್‌ 
ತೀಸ್ತಾ ಸೆಟಲ್ವಾಡ್‌    

ನವದೆಹಲಿ: ಮಲೇಷ್ಯಾದಲ್ಲಿ ಆಗಸ್ಟ್‌ 31ರಿಂದ ನಡೆಯಲಿರುವ ಸಮ್ಮೇಳನದಲ್ಲಿ ಭಾಗವಹಿಸಲು ಸಾಮಾಜಿಕ ಹೋ‌ರಾಟಗಾರ್ತಿ ತೀಸ್ತಾ ಸೆಟಲ್ವಾಡ್ ಅವರಿಗೆ ಸುಪ್ರೀಂ ಕೋರ್ಟ್‌ ಅನುಮತಿ ನೀಡಿದೆ. ಈ ಸಂಬಂಧ ನಿಗದಿತ ದಿನಾಂಕದೊಳಗೆ ಭಾರತಕ್ಕೆ ಹಿಂತಿರುಗುವುದಾಗಿ ಮುಚ್ಚಳಿಕೆ ಬರೆದುಕೊಡುವಂತೆಯೂ ಸೆಟಲ್ವಾಡ್‌ ಅವರಿಗೆ ಸೂಚಿಸಿದೆ.

2002ರ ಗೋಧ್ರಾ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಅಮಾಯಕರನ್ನು ಬಂಧಿಸಲು ದಾಖಲೆಗಳನ್ನು ತಿರುಚಿದ್ದ ಪ್ರಕರಣ ಸಂಬಂಧ ಸುಪ್ರೀಂ ಕೋರ್ಟ್‌ 2023ರ ಜುಲೈನಲ್ಲಿ ಸೆಟಲ್ವಾಡ್‌ ಅವರಿಗೆ ಜಾಮೀನು ನೀಡಿತ್ತು. ಆದರೆ, ಪಾಸ್‌ಪೋರ್ಟ್‌ಅನ್ನು ಸೆಷನ್ಸ್‌ ಕೋರ್ಟ್‌ನ ವಶದಲ್ಲಿಯೇ ಉಳಿಸಿಕೊಳ್ಳುವಂತೆ ಸೂಚಿಸಿತ್ತು. ಹೀಗಾಗಿ, ಸೆಟಲ್ವಾಡ್‌ ಅವರು ಮಲೇಷ್ಯಾಗೆ ತೆರಳಲು ಅನುಮತಿ ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ನ್ಯಾಯಮೂರ್ತಿಗಳಾದ ಬಿ.ಆರ್‌. ಗವಾಯಿ ಹಾಗೂ ಕೆ.ವಿ. ವಿಶ್ವನಾಥನ್‌ ಅವರಿದ್ದ ಪೀಠವು ವಿಚಾರಣೆ ನಡೆಸಿತು.

ADVERTISEMENT

ವಿಚಾರಣೆಗೆ ಹಾಜರಾಗಲು ಸೆಟಲ್ವಾಡ್‌ ಅವರು ಮರಳಿ ಬರುವುದನ್ನು ಖಾತ್ರಿ ಪಡಿಸಿಕೊಳ್ಳಲು ಮುಚ್ಚಳಿಕೆ ಬರೆಸಿಕೊಳ್ಳಬೇಕಾದ ಅಗತ್ಯವಿದೆ ಎಂದು ಗುಜರಾತ್‌ ಸರ್ಕಾರದ ಪರವಾಗಿ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಕೋರಿದರು. ಅದಕ್ಕೆ ಸಮ್ಮತಿಸಿದ ಪೀಠ, ಸೆಷನ್ಸ್‌ ಕೋರ್ಟ್‌ನಲ್ಲಿ ₹10 ಲಕ್ಷ ಭದ್ರತಾ ಹಣ ಠೇವಣಿ ಇಟ್ಟು, ಮುಚ್ಚಳಿಕೆ ಬರೆದುಕೊಡುವಂತೆ ಸೂಚಿಸಿತು. ಪ್ರವಾಸದಿಂದ ಮರಳಿದ ಬಳಿಕ ಪಾಸ್‌ಪೋರ್ಟ್‌ ಅನ್ನು ಕೋರ್ಟ್‌ ವಶಕ್ಕೆ ನೀಡುವಂತೆ ಸೂಚನೆ ನೀಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.