ADVERTISEMENT

ಕೊಲೆ ಪ್ರಕರಣ– ಅಜಯ್‌ ಮಿಶ್ರಾ ಖುಲಾಸೆ ಎತ್ತಿಹಿಡಿದ ಸುಪ್ರೀಂ ಕೋರ್ಟ್

ಪಿಟಿಐ
Published 10 ಜನವರಿ 2024, 15:19 IST
Last Updated 10 ಜನವರಿ 2024, 15:19 IST
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್   

ನವದೆಹಲಿ: ಕೊಲೆ ಪ್ರಕರಣವೊಂದರಲ್ಲಿ ಕೇಂದ್ರ ಸಚಿವ ಅಜಯ್‌ ಮಿಶ್ರಾ ಅವರನ್ನು ಖುಲಾಸೆಗೊಳಿಸಿ ಅಲಹಾಬಾದ್‌ ಹೈಕೋರ್ಟ್‌ ನೀಡಿದ್ದ ಆದೇಶವನ್ನು ಸುಪ್ರೀಂ ಕೋರ್ಟ್‌ ಈಚೆಗೆ ಎತ್ತಿಹಿಡಿದಿದೆ.

ಉತ್ತರ ಪ್ರದೇಶ ಲಖೀಂಪುರ ಖೇರಿ ಜಿಲ್ಲೆಯಲ್ಲಿ ಪ್ರಭಾತ್‌ ಗುಪ್ತಾ ಎಂಬುವವರ ಹತ್ಯೆಯು 2000 ಇಸವಿಯಲ್ಲಿ ನಡೆದಿತ್ತು. ಅಜಯ್‌ ಮಿಶ್ರಾ ಅವರು ಈ ಪ್ರಕರಣದ ಆರೋಪಿಯಾಗಿದ್ದರು. ಪ್ರಕರಣದ ವಿಚಾರಣೆ ನಡೆಸಿದ್ದ ವಿಚಾರಣಾ ನ್ಯಾಯಾಲಯವೊಂದು ಸಾಕ್ಷ್ಯಗಳ ಕೊರತೆ ಕಾರಣಕ್ಕಾಗಿ ಮಿಶ್ರಾ ಮತ್ತು ಇನ್ನಿತರ ಆರೋಪಿಗಳನ್ನು 2004ರಲ್ಲಿ ದೋಷಮುಕ್ತಗೊಳಿಸಿತ್ತು.

ನ್ಯಾಯಾಲಯದ ನಿರ್ಧಾರವನ್ನು ಅಂದಿನ ರಾಜ್ಯ ಸರ್ಕಾರವು ಹೈಕೋರ್ಟ್‌ನಲ್ಲಿ ಪ್ರಶ್ನಿಸಿ ಅರ್ಜಿ ಸಲ್ಲಿಸಿತ್ತು. 2023ರ ಮೇನಲ್ಲಿ ಈ ಅರ್ಜಿ ಕುರಿತು ಆದೇಶ ಹೊರಡಿಸಿದ ಅಲಹಾಬಾದ್‌ ಹೈಕೋರ್ಟ್‌ನ ಲಖನೌ ಪೀಠವು, ವಿಚಾರಣಾ ನ್ಯಾಯಾಲಯದ ತೀರ್ಪನ್ನು ಎತ್ತಿಹಿಡಿದಿತ್ತು. 

ADVERTISEMENT

ಆ ಬಳಿಕ, ರಾಜೀವ್‌ ಗುಪ್ತಾ ಎಂಬುವವರು ಹೈಕೋರ್ಟ್‌ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದರು. ನ್ಯಾಯಮೂರ್ತಿಗಳಾದ ಬೇಲಾ ಎಂ. ತ್ರಿವೇದಿ ಮತ್ತು ಪಂಕಜ್‌ ಮಿತ್ತಲ್‌ ಅವರಿದ್ದ ನ್ಯಾಯಪೀಠವು ಅರ್ಜಿ ವಿಚಾರಣೆ ನಡೆಸಿದೆ. ಹೈಕೋರ್ಟ್‌ ಮತ್ತು ವಿಚಾರಣಾ ನ್ಯಾಯಾಲಯ ದಾಖಲಿಸಿರುವ ವಾಸ್ತವಾಂಶಗಳ ವಿಚಾರದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದು ನ್ಯಾಯಪೀಠವು ಅರ್ಜಿದಾರರ ಪರ ವಕೀಲ ಕಪಿಲ್ ಸಿಬಲ್‌ ಅವರಿಗೆ ಹೇಳಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.