ADVERTISEMENT

ಪ್ರಯಾಗರಾಜ್‌: ಸೋದರ ಸಂಬಂಧಿ ಮೇಲಿನ ದೌರ್ಜನ್ಯ ತಡೆಯಲೆತ್ನಿಸಿದ ಬಾಲಕನ ಹತ್ಯೆ?

ಪಿಟಿಐ
Published 29 ಆಗಸ್ಟ್ 2023, 16:07 IST
Last Updated 29 ಆಗಸ್ಟ್ 2023, 16:07 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಪ್ರಯಾಗರಾಜ್‌: ಉತ್ತರ ಪ್ರದೇಶದ ಪ್ರಯಾಗರಾಜ್‌ನ ಖೇರಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ 15 ವರ್ಷದ ಬಾಲಕನೊಬ್ಬನನ್ನು ದೊಣ್ಣೆಯಿಂದ ಹೊಡೆದು ಕೊಲೆ ಮಾಡಲಾಗಿದೆ. ಸೋದರ ಸಂಬಂಧಿಯ ಮೇಲಿನ ಲೈಂಗಿಕ ದೌರ್ಜನ್ಯ ತಡೆಯಲು ಯತ್ನಿಸಿದ ಕಾರಣಕ್ಕೆ ಬಾಲಕನ ಮೇಲೆ ದಾಳಿ ನಡೆದಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಬಾಲಕನ ಹತ್ಯೆ ಹಿನ್ನೆಲೆಯಲ್ಲಿ ಕುಟುಂಬಸ್ಥರು ಗ್ರಾಮದಲ್ಲಿ ಪ್ರತಿಭಟಿಸಿ, ರಸ್ತೆ ತಡೆ ನಡೆಸಿದರು. ಘಟನೆ ಕೋಮು ಬಣ್ಣ ಪಡೆದುಕೊಳ್ಳುವ ಸೂಚನೆ ಅರಿತ ಅಧಿಕಾರಿಗಳು ಸ್ಥಳದಲ್ಲಿ ಪೊಲೀಸ್‌ ಪಡೆಯನ್ನು ನಿಯೋಜಿಸಿದ್ದಾರೆ.

ಕುಟುಂಬಸ್ಥರ ದೂರಿನ ಆಧಾರದಲ್ಲಿ ಗ್ರಾಮದ ಮುಖ್ಯಸ್ಥ ಯೂಸುಫ್ ಮತ್ತು ಶಾಲಾ ವಿದ್ಯಾರ್ಥಿ ಮೊಹ್ಸಿನ್ ಸೇರಿದಂತೆ ಐವರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಆಯುಕ್ತ ರಮಿತ್ ಶರ್ಮಾ ತಿಳಿಸಿದ್ದಾರೆ. ಜತೆಗೆ ಖೇರಿ ಠಾಣಾಧಿಕಾರಿ ನವೀನ್ ಕುಮಾರ್ ಸಿಂಗ್ ಸೇರಿದಂತೆ ಇಬ್ಬರನ್ನು ಅಮಾನತು ಮಾಡಲಾಗಿದೆ ಎಂದು ಅವರು ಹೇಳಿದರು.

ADVERTISEMENT

ಘಟನೆಯ ಬಗ್ಗೆ ಈ ಹಿಂದೆ ಮಾತನಾಡಿದ್ದ ಖೇರಿ ಠಾಣಾಧಿಕಾರಿ ಸಿಂಗ್‌, ‘ಶಾಲೆಯಿಂದ ಹಿಂತಿರುಗುತ್ತಿದ್ದಾಗ ಕೆಲವು ಯುವಕರು 10ನೇ ತರಗತಿ ವಿದ್ಯಾರ್ಥಿಯೂ ಆದ ಬಾಲಕನ ಸೋದರಸಂಬಂಧಿಗೆ ಕಿರುಕುಳ ನೀಡಿದ್ದರು. ಇದನ್ನು ತಡೆಯಲು ಪ್ರಯತ್ನಿಸಿದಾಗ ಆತನ ಮೇಲೆ ಹಲ್ಲೆ ನಡೆದಿದೆ ಎಂದು ಕುಟುಂಬ ಸದಸ್ಯರು ಆರೋಪಿಸಿದ್ದಾರೆ. ಘಟನೆಯಲ್ಲಿ ಗಂಭೀರಗೊಂಡಿದ್ದ ವಿದ್ಯಾರ್ಥಿಯನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಆತ ಅದಾಗಲೇ ಮೃತಪಟ್ಟಿದ್ದ‘ ಎಂದು ಹೇಳಿದ್ದರು.

ಆದರೆ, ಯಮುನಾ ನಗರ ಪೊಲೀಸ್‌ ಉಪ ಆಯುಕ್ತ ಸಂತೋಷ್ ಕುಮಾರ್ ಮೀನಾ ಬೇರೆಯದ್ದೇ ಕಾರಣ ನೀಡಿದ್ದು, ಶಾಲೆಯಲ್ಲಿ ಮಕ್ಕಳ ನಡುವೆ ನಡೆದಿದ್ದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ ಎಂದಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.