ADVERTISEMENT

ಒಳಗೊಳ್ಳುವಿಕೆ ಭಾರತದ ಸಂಸ್ಕೃತಿಯಲ್ಲಿ ಬೇರುಬಿಟ್ಟಿದೆ: ಮುರ್ಮು

ಪಿಟಿಐ
Published 20 ಜೂನ್ 2024, 15:16 IST
Last Updated 20 ಜೂನ್ 2024, 15:16 IST
ಜನ್ಮದಿನದ ಅಂಗವಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ದೆಹಲಿಯ ಜಗನ್ನಾಥ ದೇವಾಲಯದಲ್ಲಿ ಗುರುವಾರ ವಿಶೇಷ ಪೂಜೆ ಕೈಗೊಂಡರು  –ಪಿಟಿಐ ಚಿತ್ರ
ಜನ್ಮದಿನದ ಅಂಗವಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ದೆಹಲಿಯ ಜಗನ್ನಾಥ ದೇವಾಲಯದಲ್ಲಿ ಗುರುವಾರ ವಿಶೇಷ ಪೂಜೆ ಕೈಗೊಂಡರು  –ಪಿಟಿಐ ಚಿತ್ರ   

ನವದೆಹಲಿ: ‘ಸೂಕ್ಷ್ಮತೆ ಮತ್ತು ಒಳಗೊಳ್ಳುವಿಕೆ ಭಾರತೀಯ ಸಂಸ್ಕೃತಿ ಮತ್ತು ನಾಗರಿಕತೆಯಲ್ಲಿ ಮಿಳಿತಗೊಂಡಿರುವ ಎರಡು ಪ್ರಮುಖ ಮೌಲ್ಯಗಳು. ಸಮಾಜದ ಉನ್ನತಿಯನ್ನು ಅಳೆಯಲು ಇವು ಸಾಧನವಾಗಿವೆ’ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಗುರುವಾರ ಹೇಳಿದರು. 

ಪಂಡಿತ್‌ ದೀನದಯಾಳ್‌ ಉಪಾಧ್ಯಾಯ ಅಂಗವಿಕಲ ಜನರ ರಾಷ್ಟ್ರೀಯ ಕೇಂದ್ರಕ್ಕೆ ಭೇಟಿ ನೀಡಿದ್ದ ವೇಳೆ ಮುರ್ಮು ಅವರು ಹೀಗೆ ಹೇಳಿದರು.

ಪ್ರೋಸ್ಥೆಸಿಸ್‌ ಮತ್ತು ಆರ್ಥೋಸಿಸ್‌ (ಕೃತಕ ಅಂಗಾಗ ಜೋಡಣೆ) ಕೇಂದ್ರಕ್ಕು ಅವರು ಭೇಟಿ ನೀಡಿ ಅಲ್ಲಿಯ ರೋಗಿಗಳ ಜೊತೆ ಚರ್ಚೆ ನಡೆಸಿದರು. ದೈಹಕ ವಿಕಲತೆ ಹೊಂದಿರುವವರ ಜೀವನ ಉತ್ತಮಪಡಿಸುವ ಸಲುವಾಗಿ ಅಭಿವೃದ್ಧಿಪಡಿಸಲಾಗಿರುವ ತಂತ್ರಜ್ಞಾನ ಕುರಿತು ಮಾಹಿತಿ ಪಡೆದರು.

ADVERTISEMENT

ಮುರ್ಮು ಜನ್ಮದಿನ– ಮೋದಿ ಶುಭಹಾರೈಕೆ

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಗುರುವಾರ 66ನೇ ವಸಂತಕ್ಕೆ ಕಾಲಿಟ್ಟರು. ಅಂಗವಿಕಲ ವ್ಯಕ್ತಿಗಳ ಸಬಲೀಕರಣಕ್ಕಾಗಿ ಆರಂಭಿಸಿರುವ ‘ಮಿಟ್ಟಿ ಕೆಫೆ’ಯ ರಾಷ್ಟ್ರಪತಿ ಭವನದ ಮಳಿಗೆಯನ್ನು ಉದ್ಘಾಟಿಸುವ ಮೂಲಕ ಜನ್ಮದಿನ ಆಚರಿಸಿಕೊಂಡರು. 

ಅದಕ್ಕೂ ಮೊದಲು ಅವರು ದೆಹಲಿಯ ಜಗನ್ನಾಥ ದೇವಾಲಯಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದರು.

ಪ್ರಧಾನಿ ನರೇಂದ್ರ ಮೋದಿ, ಉಪಾಧ್ಯಕ್ಷ ಜಗದೀಪ್‌ ಧನಕರ್‌ ಮೊದಲಾದ ಗಣ್ಯರು ಮುರ್ಮು ಅವರಿಗೆ ಶುಭ ಹಾರೈಸಿದ್ದಾರೆ.

‘ರಾಷ್ಟ್ರಪತಿ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು. ಅವರ ದೇಶಸೇವಾ ಮತ್ತು ಸಮರ್ಪಣಾ ಮನೋಭಾವ ನಮಗೆ ಸ್ಫೂರ್ತಿಯಾಗಿದೆ. ಅವರ ಜ್ಞಾನ ಮತ್ತು ಬಡವರು, ವಂಚಿತರಿಗಾಗಿ ಅವರು ಕೈಗೊಳ್ಳುವ ಸೇವೆಯು ನಮಗೆ ಮಾರ್ಗಸೂಚಿಯಾಗಿದೆ’ ಎಂದು ಪ್ರಧಾನಿ ಮೋದಿ ಅವರು ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.