ADVERTISEMENT

ಶಿಮ್ಲಾ ಮಸೀದಿ ವಿವಾದ: ಪ್ರತಿಭಟನಕಾರರಿಂದ ಕಲ್ಲು ತೂರಾಟ

ಪಿಟಿಐ
Published 11 ಸೆಪ್ಟೆಂಬರ್ 2024, 14:31 IST
Last Updated 11 ಸೆಪ್ಟೆಂಬರ್ 2024, 14:31 IST
<div class="paragraphs"><p>ಸಂಜೌಲಿ ಪ್ರದೇಶದಲ್ಲಿ ನೆರೆದಿದ್ದ ಪ್ರತಿಭಟನಕಾರರನ್ನು ಚದುರಿಸಲು&nbsp;ಪೊಲೀಸರು ಜಲಫಿರಂಗಿಗಳನ್ನು ಬಳಸಿದರು </p></div>

ಸಂಜೌಲಿ ಪ್ರದೇಶದಲ್ಲಿ ನೆರೆದಿದ್ದ ಪ್ರತಿಭಟನಕಾರರನ್ನು ಚದುರಿಸಲು ಪೊಲೀಸರು ಜಲಫಿರಂಗಿಗಳನ್ನು ಬಳಸಿದರು

   

ಪಿಟಿಐ ಚಿತ್ರ

ಶಿಮ್ಲಾ: ಶಿಮ್ಲಾದ ಸಂಜೌಲಿ ಪ್ರದೇಶದಲ್ಲಿ ಅನಧಿಕೃತವಾಗಿ ನಿರ್ಮಾಣ ಮಾಡಿರುವ ಮಸೀದಿಯ ಭಾಗವನ್ನು ನೆಲಸಮ ಮಾಡಬೇಕು ಎಂದು ಆಗ್ರಹಿಸಿದ ಪ್ರತಿಭಟನಕಾರರು ಮತ್ತು ಭದ್ರತಾ ಸಿಬ್ಬಂದಿ ನಡುವೆ ಬುಧವಾರ ಘರ್ಷಣೆ ನಡೆಯಿತು.

ADVERTISEMENT

ಉದ್ರಿಕ್ತ ಗುಂಪು ಬ್ಯಾರಿಕೇಡ್‌ಗಳನ್ನು ಕಿತ್ತೊಗೆದು, ಮಸೀದಿ ಮೇಲೆ ಕಲ್ಲು ತೂರಾಟ ನಡೆಸಿತು. ಬಳಿಕ  ಪ್ರತಿಭಟನಕಾರರನ್ನು ಚದುರಿಸಲು ಪೊಲೀಸರು ಜಲಫಿರಂಗಿಗಳನ್ನು ಬಳಸಿದರು.

ಕೆಲ ಹಿಂದೂ ಸಂಘಟನೆಗಳು ಕರೆ ನೀಡಿದ್ದ ಪ್ರತಿಭಟನೆಗೆ ಓಗೊಟ್ಟು ಸಬರ್ಜಿ ಮಂಡಿ ಧಾಲಿ ಬಳಿ ನೆರೆದ ನೂರಾರು ಜನರು ‘ಜೈ ಶ್ರೀರಾಮ್‌’ ಮತ್ತು ‘ಹಿಂದು ಏಕ್ತಾ ಜಿಂದಾಬಾದ್‌’ ಎಂದು ಘೋಷಣೆ ಕೂಗಿದರು.

ನಿರ್ಬಂಧಗಳನ್ನು ಮೀರಿ ಧಾಲಿ ಸುರಂಗದ ಸಮೀಪ ಹಾಕಿದ್ದ ಬ್ಯಾರಿಕೇಡ್‌ಗಳನ್ನು ಕಿತ್ತೆಸೆದರು. ಪ್ರತಿಭಟನಕಾರರು ಸಂಜೌಲಿ ಪ್ರದೇಶವನ್ನು ಪ್ರವೇಶಿಸಿ ಮಸೀದಿ ಸಮೀಪ ಹಾಕಿದ್ದ ಬ್ಯಾರಿಕೇಡ್‌ಗಳನ್ನೂ ಕಿತ್ತೆಸೆಯುತ್ತಿದ್ದಂತೆಯೇ ಪೊಲೀಸರು ಲಾಠಿ ಚಾರ್ಜ್‌ ಆರಂಭಿಸಿದರು. ನಂತರ ಜಲಫಿರಂಗಿ ಮೂಲಕ ಗುಂಪನ್ನು ಚದುರಿಸಲು ಯತ್ನಿಸಿದರು.

ಹಿಂದೂ ಜಾಗರಣ್‌ ಮಂಚ್‌ ಕಾರ್ಯದರ್ಶಿ ಕಮಲ್‌ ಗೌತಮ್‌ ಸೇರಿದಂತೆ ಹಲವರನ್ನು ಪೊಲೀಸರು ವಶಕ್ಕೆ ಪಡೆದರು. ಮತ್ತೆ ಬ್ಯಾರಿಕೇಡ್‌ಗಳನ್ನು ಹಾಕಿದರು. ಆದರೂ ಸ್ಥಳದಿಂದ ಕದಲದ ಪ್ರತಿಭಟನಕಾರರು ಆಡಳಿತದ ವಿರುದ್ಧ ಘೋಷಣೆ ಕೂಗಿದರು.

ಘರ್ಷಣೆ ಮತ್ತು ಕಲ್ಲು ತೂರಾಟದ ಪರಿಣಾಮ ಕನಿಷ್ಠ ಇಬ್ಬರು ಪೊಲೀಸ್‌ ಸಿಬ್ಬಂದಿ ಗಾಯಗೊಂಡಿದ್ದಾರೆ. ಪೊಲೀಸರು ಕೈಗೊಂಡ ಕ್ರಮದಿಂದಾಗಿ ಪ್ರತಿಭಟನಕಾರರೂ ಗಾಯಗೊಂಡಿದ್ದಾರೆ ಎಂದು ಹೇಳಲಾಗಿದೆ.

ಮಕ್ಕಳು ಶಾಲೆಗಳಲ್ಲಿ ಅತಂತ್ರ:

ಸಂಘರ್ಷ ಭುಗಿಲೆದ್ದ ಕಾರಣ ಸಂಜೌಲಿ, ಧಾಲಿ ಮತ್ತಿತರ ಪ್ರದೇಶಗಳ ವಿದ್ಯಾರ್ಥಿಗಳು ಶಾಲೆಯಲ್ಲಿಯೇ ಸಿಲುಕಿದರು. ಪ್ರತಿಭಟನೆ ಹಮ್ಮಿಕೊಂಡ ಬಗ್ಗೆ ಮಾಹಿತಿ ಇದ್ದರೂ ಶಾಲೆಗೆ ರಜೆ ನೀಡದೆ ನಿರ್ಲಕ್ಷ್ಯ ವಹಿಸಲಾಗಿದೆ ಎಂದು ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.

ಮಾತುಕತೆ ಮೂಲಕ ಪರಿಸ್ಥಿತಿ ನಿಯಂತ್ರಣಕ್ಕೆ ತರುವ ಪ್ರಯತ್ನ ನಡೆಯುತ್ತಿದೆ. ಆದರೆ ಇಲ್ಲಿ ಯಾರೂ ನಾಯಕರಿಲ್ಲ. ಗುಂಪು ನಮ್ಮ ಮಾತು ಕೇಳಿಸಿಕೊಳ್ಳಲು ಸಿದ್ಧವಿಲ್ಲ
- ಸಂಜೀವ್‌ ಕುಮಾರ್‌ ಗಾಂಧಿ ಶಿಮ್ಲಾ ಪೊಲೀಸ್‌ ವರಿಷ್ಠಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.