ADVERTISEMENT

ಶಿವಾಜಿ ಪ್ರತಿಮೆ ಕುಸಿತ: ಫಡಣವೀಸ್ ಸುಳ್ಳು ಹರಡುತ್ತಿದ್ದಾರೆ; ಪವನ್‌ ಖೇರಾ

ಪಿಟಿಐ
Published 1 ಸೆಪ್ಟೆಂಬರ್ 2024, 14:11 IST
Last Updated 1 ಸೆಪ್ಟೆಂಬರ್ 2024, 14:11 IST
<div class="paragraphs"><p>ಪವನ್‌ ಖೇರಾ</p></div>

ಪವನ್‌ ಖೇರಾ

   

ಮುಂಬೈ: ಮಹಾರಾಷ್ಟ್ರದ ಸಿಂಧುದುರ್ಗ ಜಿಲ್ಲೆಯಲ್ಲಿ ಸಂಭವಿಸಿದ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ಕುಸಿತ ಪ್ರಕರಣದ ಕುರಿತು ಉಪಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ಅವರು ಸುಳ್ಳು ಹೇಳಿಕೆಗಳನ್ನು ಹರಡುತ್ತಿದ್ದಾರೆ ಎಂದು ಕಾಂಗ್ರೆಸ್‌ ವಕ್ತಾರ ಪವನ್‌ ಖೇರಾ ಆರೋಪಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಶಿವಾಜಿ ಮಹಾರಾಜರ ಪ್ರತಿಮೆ ಕುಸಿತದಿಂದ ಅವರನ್ನು ಸ್ಫೂರ್ತಿಯಾಗಿ ನೋಡುತ್ತಿದ್ದ ದೇಶದ ಜನರ ಮನಸ್ಸಿಗೆ ಘಾಸಿಯಾಗಿದೆ. ಮೊಘಲರಿಗೆ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ಭಿನ್ನಗೊಳಿಸಲು ಸಾಧ್ಯವಾಗಲಿಲ್ಲ. ಮೊಘಲರು ಮಾಡಲಾಗದ್ದನ್ನು ಈ ಭ್ರಷ್ಟ ಸರ್ಕಾರ ಮಾಡಿದೆ ಎಂದು ಹೇಳಿದ್ದಾರೆ.

ADVERTISEMENT

ಜವಾಹರಲಾಲ್‌ ನೆಹರೂ ಅವರು ತಮ್ಮ ‘ದಿ ಡಿಸ್ಕವರಿ ಆಫ್‌ ಇಂಡಿಯಾ’ ಪುಸ್ತಕದಲ್ಲಿ ಶಿವಾಜಿ ಮಹಾರಾಜ ಕುರಿತು ಹೆಚ್ಚಿನ ಪ್ರಾಮುಖ್ಯತೆ ನೀಡಿಲ್ಲ ಎಂದು ಹೇಳಿಕೆ ನೀಡಿದ್ದ ದೇವೇಂದ್ರ ಫಡಣವೀಸ್‌ ವಿರುದ್ಧ ವಾಗ್ದಾಳಿ ನಡೆಸಿರುವ ಖೇರಾ, ‘ಸುಳ್ಳು ಹೇಳಿಕೆಗಳನ್ನು ಹರಡುವುದನ್ನು ಬಿಜೆಪಿ ನಾಯಕರು ನಿಲ್ಲಿಸಬೇಕು’ ಎಂದು ಆಗ್ರಹಿಸಿದ್ದಾರೆ.

ರಾಮ ದೇವರು ಎಲ್ಲರಿಗೂ ಸೇರಿದಂತೆಯೇ, ಛತ್ರಪತಿ ಶಿವಾಜಿ ಮಹಾರಾಜರು ಕೂಡ ಇಡೀ ದೇಶಕ್ಕೆ ಸೇರಿದವರು. ಪ್ರಸಿದ್ಧ ಕಲಾವಿದ ನಾನಾಸಾಹೇಬ್‌ ಕರ್ಮಾಕರ್‌ ಅವರು ಶಿವಾಜಿ ಅವರ ಪ್ರತಿಮೆಯನ್ನು ಕೆತ್ತಲು ಏಳು ವರ್ಷಗಳನ್ನು ತೆಗೆದುಕೊಂಡಿದ್ದರು. ಅವರ ಆ ಕಾರ್ಯಕ್ಕಾಗಿ ಜವಹರ್‌ಲಾಲ್‌ ನೆಹರೂ ಅವರು ನಾನಾಸಾಹೇಬ್‌ ಅವರಿಗೆ ಪದ್ಮಶ್ರೀ ನೀಡಿ ಗೌರವಿಸಿದ್ದರು ಎಂದು ಖೇರಾ ತಿಳಿಸಿದ್ದಾರೆ.

ಪ್ರತಿಮೆ ಕುಸಿತದ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರ ಕ್ಷಮೆಯಾಚನೆ ಉಲ್ಲೇಖಿಸಿದ ಖೇರಾ, ‘ಅಹಂಕಾರದಿಂದ ಮಾಡಿದ ಪ್ರಧಾನಿ ಮೋದಿ ಅವರ ಕ್ಷಮೆಯಾಚನೆಯನ್ನು ದೇಶ ತಿರಸ್ಕರಿಸುತ್ತದೆ. ತಪ್ಪಿತಸ್ಥರ ವಿರುದ್ಧ ಏನು ಕ್ರಮ ತೆಗೆದುಕೊಳ್ಳಲಾಗಿದೆ ಎಂಬುದನ್ನು ತಿಳಿಸಲಿ’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.