ADVERTISEMENT

‘ರಾಯಬರೇಲಿ: ಬಿಜೆಪಿ ಮಲತಾಯಿ ಧೋರಣೆ’-ಸೋನಿಯಾ ಗಾಂಧಿ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2022, 17:53 IST
Last Updated 21 ಫೆಬ್ರುವರಿ 2022, 17:53 IST
ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ
ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ   

ರಾಯಬರೇಲಿ: ಬಿಜೆಪಿಯು ರಾಯಬರೇಲಿ ಬಗ್ಗೆ ಮಲತಾಯಿ ಧೋರಣೆ ಹೊಂದಿದೆ ಎಂದು ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಸೋಮವಾರ ಆರೋಪಿಸಿದರು.ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಗಳಿಗೇ ಮತ ನೀಡಿ ಎಂದು ಜನರಲ್ಲಿ ಅವರು ಮನವಿ ಮಾಡಿದರು.

ನಾಲ್ಕನೇ ಹಂತದ ಮತದಾನದ ಪ್ರಚಾರದ ಕೊನೆಯ ದಿನ ತಮ್ಮ ಲೋಕಸಭೆ ಕ್ಷೇತ್ರ ರಾಯಬರೇಲಿಯ ಜನರನ್ನು ಕುರಿತು ವರ್ಚುವಲ್‌ ಆಗಿ ಮಾತನಾಡಿದರು. ‘ಇದು ಅತ್ಯಂತ ಮುಖ್ಯವಾದ ಚುನಾವಣೆ ಆಗಿದೆ. ಕಳೆದ ಐದು ವರ್ಷಗಳಿಂದ ಇರುವ ಸರ್ಕಾರ ಜನರನ್ನು ಒಡೆಯುವ ಕೆಲಸ ಬಿಟ್ಟರೆ ಬೇರೆ ಏನನ್ನೂ ಮಾಡಿಲ್ಲ’ ಎಂದು ಹೇಳಿದರು.

ವಿಧಾನಸಭೆ ಚುನಾವಣೆ ಪ್ರಕ್ರಿಯೆ ಆರಂಭವಾದಾಗಿನಿಂದ ಇದೇ ಮೊದಲ ಬಾರಿಗೆ ಸೋನಿಯಾ ಅವರು ಚುನಾವಣಾ ಪ್ರಚಾರದಲ್ಲಿ ಭಾಗಿ ಆಗಿದ್ದಾರೆ.

ADVERTISEMENT

ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ವಿರುದ್ಧ ವಾಗ್ದಾಳಿ ನಡೆಸಿದ ಸೋನಿಯಾ, ‘ನಿಮಗಾಗಿ ನಾವು ಹಲವಾರು ಯೋಜನೆಗಳನ್ನು ತಂದಿದ್ದೆವು. ಆದರೆ ಮೋದಿ–ಯೋಗಿ ಅವುಗಳನ್ನೆಲ್ಲಾನಿಷೇಧಿಸಿದರು. ಜೊತೆಗೆ, ಕೋವಿಡ್‌–19 ಸಾಂಕ್ರಾಮಿಕವನ್ನು ನಿರ್ವಹಿಸುವಲ್ಲಿ ಅವರಿಬ್ಬರೂ ವಿಫಲರಾಗಿದ್ದಾರೆ’ ಎಂದು ಹೇಳಿದರು.

‘ಕಾಂಗ್ರೆಸ್‌ ರಾಜಕೀಯವನ್ನು ನೀವು ನೋಡಿದ್ದೀರಿ. ಕಾಂಗ್ರೆಸ್‌ನದ್ದು ಸೇವೆ ಆಧಾರಿತ ಮತ್ತು ಜನರಿಗೆ ಹಕ್ಕುಗಳನ್ನು ನೀಡುವ ರಾಜಕೀಯವಾಗಿದೆ. ಕಳೆದ ಐದು ವರ್ಷಗಳಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ಉತ್ತರ ಪ್ರದೇಶದಲ್ಲಿ ಬಹಳ ಶ್ರಮವಹಿಸಿದ್ದಾರೆ. ಜನರ ಹಕ್ಕಿಗಾಗಿ ಹೋರಾಡುತ್ತಿದ್ದ ಕಾಂಗ್ರೆಸ್‌ನ 8,000 ಕಾರ್ಯಕರ್ತರನ್ನು ಬಂಧಿಸಲಾಗಿದೆ’ ಎಂದು ಹೇಳಿದರು.

‘ಹಗಲು, ರಾತ್ರಿ ನಿಮಗಾಗಿ ಕೆಲಸ ಮಾಡುವ ಶಾಸಕರನ್ನು ನೀಡಲು ಮತ್ತು ನಿಮ್ಮ ಜೀವನವನ್ನು ಉತ್ತಮಪಡಿಸುವಂಥ ನೀತಿಗಳನ್ನು ತರಲು ನಾವು ಬದ್ಧರಾಗಿದ್ದೇವೆ. ಈ ಚುನಾವಣೆಯಲ್ಲಿ ಕೈಯನ್ನು (ಕಾಂಗ್ರೆಸ್‌ ಚಿಹ್ನೆ) ಬಲಪಡಿಸಿ. ರಾಯಬರೇಲಿಯಲ್ಲಿ ಸ್ಪರ್ಧಿಸುತ್ತಿರುವ ಕಾಂಗ್ರೆಸ್‌ನ ಎಲ್ಲಾ ಅಭ್ಯರ್ಥಿಗಳನ್ನೂ ಭಾರಿ ಬಹುಮತದೊಂದಿಗೆ ಗೆಲ್ಲಿಸಿ’ ಎಂದು ಮನವಿ ಮಾಡಿದರು.

‘ರೈತರು ಸಾಲದ ಹೊರೆಯಲ್ಲಿದ್ದಾರೆ. ಬೀಡಾಡಿ ಜಾನುವಾರುಗಳು ಅವರ ಬೆಳೆಯನ್ನು ಹಾನಿಗೀಡು ಮಾಡುತ್ತಿವೆ. ಯುವಜನರು ಕೂಡ ಸಂಕಷ್ಟದಲ್ಲಿದ್ದಾರೆ. ಕಷ್ಟಪಟ್ಟು ಶಿಕ್ಷಣ ಪಡೆದ ಅವರನ್ನು ಮನೆಯಲ್ಲೇ ಇರುವಂತೆಮೋದಿ ನೇತೃತ್ವದ ಸರ್ಕಾರವು ಮಾಡಿದೆ. ರಾಜ್ಯದಲ್ಲಿ 12 ಲಕ್ಷ ಉದ್ಯೋಗಗಳು ಖಾಲಿ ಇವೆ. ಆದರೆ ಅವನ್ನು ಭರ್ತಿ ಮಾಡಲಾಗುತ್ತಿಲ್ಲ. ಬೆಲೆ ಏರಿಕೆಯಿಂದಾಗಿ ಮನೆ ನಡೆಸುವುದು ಜನರಿಗೆ ಕಷ್ಟವಾಗಿದೆ’ ಎಂದರು.

ಜನರ ಹೊರೆಯನ್ನು ಇಳಿಸುವ ಬದಲು ಸರ್ಕಾರವು ತನ್ನ ಸ್ನೇಹಿತರಿಗೆ ಹಲವಾರು ಸಂಸ್ಥೆಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದೆ ಎಂದು ಟೀಕಿಸಿದರು.

* ನಿಮ್ಮೆಲ್ಲರ ಕುಟುಂಬದ ಅವಿಭಾಜ್ಯ ಭಾಗ ನಾನು ಎಂದು ಪರಿಗಣಿಸುತ್ತೇನೆ. ನಿಮ್ಮ ಜೀವನವನ್ನು ಬದಲಿಸುವಂಥ ರಾಜಕೀಯ ಮಾಡಲು ಕಾಂಗ್ರೆಸ್‌ ಬದ್ಧವಾಗಿದೆ.

-ಸೋನಿಯಾ ಗಾಂಧಿ, ಕಾಂಗ್ರೆಸ್‌ ಅಧ್ಯಕ್ಷೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.