ಎಟವಾ(ಉತ್ತರ ಪ್ರದೇಶ): ಕಾಂಗ್ರೆಸ್ನೊಂದಿಗಿನ ಮೈತ್ರಿ ಮುಂದುವರಿಯಲಿದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಗುರುವಾರ ಹೇಳಿದ್ದಾರೆ.
ತಂದೆ ಹಾಗೂ ಪಕ್ಷದ ಸಂಸ್ಥಾಪಕ ಮುಲಾಯಂ ಸಿಂಗ್ ಯಾದವ್ ಅವರ ಪುಣ್ಯತಿಥಿ ಅಂಗವಾಗಿ ಗೌರವ ಸಲ್ಲಿಸುವುದಕ್ಕಾಗಿ ಎಟಾವಕ್ಕೆ ಭೇಟಿ ನೀಡಿದ್ದ ವೇಳೆ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ವರ್ಷಾಂತ್ಯಕ್ಕೆ ರಾಜ್ಯದ 6 ವಿಧಾನಸಭಾ ಕ್ಷೇತ್ರಗಳಿಗೆ ನಡೆಯಲಿರುವ ಉಪಚುನಾವಣೆಗೆ ಬುಧವಾರವಷ್ಟೆ ಪಕ್ಷದ ಅಭ್ಯರ್ಥಿಗಳನ್ನು ಘೋಷಿಸಿದ್ದ ಅಖಿಲೇಶ್ ಯಾದವ್, ಈಗ ಈ ಮಾತು ಹೇಳಿದ್ದಾರೆ.
ಉಪಚುನಾವಣೆಗಾಗಿ ಪಕ್ಷದ ಟಿಕೆಟ್ ಹಂಚಿಕೆಯಾಗಿರುವ ಕುರಿತಂತೆ ಪತ್ರಕರ್ತರ ಪ್ರಶ್ನೆಗೆ,‘ಇಂಡಿಯಾ’ ಮೈತ್ರಿಕೂಟ ಇರಲಿದೆ ಎಂದಷ್ಟೆ ನಾನು ಹೇಳಬಲ್ಲೆ. ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್ ಮೈತ್ರಿಯೂ ಗಟ್ಟಿಯಾಗಿಯೇ ಇರಲಿದೆ’ ಎಂದು ಉತ್ತರಿಸಿದರು.
ಹರಿಯಾಣ ವಿಧಾನಸಭೆ ಚುನಾವಣೆ ಫಲಿತಾಂಶ ಕುರಿತ ಮತ್ತೊಂದು ಪ್ರಶ್ನೆಗೆ,‘ರಾಜಕೀಯದ ಬಗ್ಗೆ ಚರ್ಚಿಸಲು ಇದು ಸರಿಯಾದ ಸಮಯವಲ್ಲ. ಈ ಕುರಿತು ನಾವು ಮತ್ತೊಮ್ಮೆ ಸಭೆ ಸೇರಿದಾಗ ಚರ್ಚಿಸುತ್ತೇವೆ’ ಎಂದು ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.