ಚೆನ್ನೈ: ಕನ್ನಡ ಭಾಷೆಗೆ ಅನುವಾದಗೊಂಡ ತಮಿಳಿನ ‘ವೈಕಂ ಪೊರಾಟಮ್’ ಪುಸ್ತಕವನ್ನು ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಬಿಡುಗೊಳಿಸಿದ್ದಾರೆ.
ಶತಮಾನದ ಹಿಂದೆ ಕೇರಳದಲ್ಲಿ ಆಚರಣೆಯಲ್ಲಿದ್ದ ಅಸ್ಪೃಶ್ಯತೆ ಮತ್ತು ಜಾತಿ ಆಧಾರಿತ ತಾರತಮ್ಯದ ವಿರುದ್ಧ ನಡೆದ ಐತಿಹಾಸಿಕ ಹೋರಾಟದ ಬಗ್ಗೆ ಈ ಪುಸ್ತಕ ಬೆಳಕು ಚೆಲ್ಲುತ್ತದೆ. ಖ್ಯಾತ ಬರಹಗಾರ ಪಝಾ ಅಥಿಯಮಾನ್ ಅವರು ತಮಿಳಿನಲ್ಲಿ ಬರೆದ ಈ ಕೃತಿಯನ್ನು ಪ್ರೊಫೆಸರ್ ಶ್ರೀಧರ ಅವರ ಮಾರ್ಗದರ್ಶನದಲ್ಲಿ ಸೆಲ್ವಕುಮಾರ್ ಅವರು ಕನ್ನಡ ಭಾಷೆಗೆ ಅನುವಾದ ಮಾಡಿದ್ದಾರೆ.
ಶಾಲಾ ಶಿಕ್ಷಣ ಸಚಿವ ಅನ್ಬಿಲ್ ಮಹೇಶ್ ಪೊಯ್ಯಮೊಳಿ ಮತ್ತು ಮುಖ್ಯ ಕಾರ್ಯದರ್ಶಿ ಶಿವದಾಸ್ ಮೀನಾ ಅವರ ಸಮ್ಮುಖದಲ್ಲಿ ‘ದ್ರಾವಿಡರ್ ಕಳಗಂ’ ಮುಖ್ಯಸ್ಥ ಕೆ. ವೀರಮಣಿ ಅವರು ಸ್ಟಾಲಿನ್ ಅವರಿಂದ ಕನ್ನಡ ಪುಸ್ತಕದ ಮೊದಲ ಪ್ರತಿಯನ್ನು ಸ್ವೀಕರಿಸಿದ್ದಾರೆ.
ವೈಕಂ ಹೋರಾಟದ ನೆನಪಿಗಾಗಿ ವರ್ಷವಿಡಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವ ತಮಿಳುನಾಡು ಸರ್ಕಾರ, ಇದರ ಭಾಗವಾಗಿ ಕನ್ನಡ ಅನುವಾದ ಪುಸ್ತಕವನ್ನು ಇಂದು (ನೆ.29) ಬಿಡುಗಡೆ ಮಾಡಿದೆ.
ವೈಕಂ ಹೋರಾಟ ಮತ್ತು ಪೆರಿಯಾರ್
ಅಸ್ಪಶ್ಯತೆ ಮತ್ತು ಜಾತಿ ತಾರತಮ್ಯದ ವಿರುದ್ಧ ಹೋರಾಟಕ್ಕೀಳಿದ ಕೇರಳದ ನಾಯಕರು, ವೈಕಂ ಸತ್ಯಾಗ್ರಹದಲ್ಲಿ ಭಾಗವಹಿಸುವಂತೆ ಪೆರಿಯಾರ್ ರಾಮಸ್ವಾಮಿ ಅವರಿಗೆ ಆಹ್ವಾನವಿತ್ತಿದ್ದರು ಎಂದು ತಮಿಳುನಾಡು ಸರ್ಕಾರ ಹೇಳಿದೆ.
ನವೆಂಬರ್ 29, 1925ರಂದು ತಾರತಮ್ಯದ ವಿರುದ್ಧದ ಚಳವಳಿ ಯಶಸ್ಸು ಕಂಡಿದ್ದು, ಈ ಐತಿಹಾಸಿಕ ದಿನವನ್ನು ಗುರುತಿಸುವ ಸಲುವಾಗಿ ವೈಕಂನಲ್ಲಿ ಪೆರಿಯಾರ್ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮವನ್ನು ನಡೆಸಲಾಗಿತ್ತು ಎಂದು ಅದು ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.