ADVERTISEMENT

ಜಮೀನು ಸ್ವಾಧೀನ: ತ್ವರಿತವಾಗಿ ಪರಿಹಾರ ನೀಡುವುದು ಸರ್ಕಾರದ ಹೊಣೆ– ಸುಪ್ರೀಂ ಕೋರ್ಟ್

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2024, 16:29 IST
Last Updated 22 ಸೆಪ್ಟೆಂಬರ್ 2024, 16:29 IST
<div class="paragraphs"><p>supreme-court-</p></div>

supreme-court-

   

ನವದೆಹಲಿ: ಮಾಲೀಕರ ಇಚ್ಛೆಗೆ ವಿರುದ್ಧವಾಗಿ ಜಮೀನನ್ನು ಸಾರ್ವಜನಿಕ ಉದ್ದೇಶಕ್ಕಾಗಿ ಸ್ವಾಧೀನಪಡಿಸಿಕೊಂಡಾಗ, ಪರಿಹಾರ ಮೊತ್ತವನ್ನು ಸಾಧ್ಯವಾದಷ್ಟು ಬೇಗ ನೀಡಬೇಕಾದ ಹೊಣೆಯು ಸರ್ಕಾರದ ಮೇಲೆ ಇರುತ್ತದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದೀವಾಲಾ ಮತ್ತು ಮನೋಜ್ ಮಿಶ್ರಾ ಅವರು ಇದ್ದ ವಿಭಾಗೀಯ ಪೀಠವು, ಜಮೀನನ್ನು ಸ್ವಾಧೀನಕ್ಕೆ ತೆಗೆದುಕೊಳ್ಳುವ ಮೊದಲೇ ಪರಿಹಾರ ನೀಡದೆ ಇರುವುದು ‘ನ್ಯಾಯಸಮ್ಮತ ಪರಿಹಾರ ಮತ್ತು ಜಮೀನು ಸ್ವಾಧೀನ, ಪುನರ್ವಸತಿಯಲ್ಲಿ ಪಾರದರ್ಶಕತೆ ಕಾಯ್ದೆ’ಯ ಸೆಕ್ಷನ್ 38(1)ರ ಉಲ್ಲಂಘನೆ ಆಗುತ್ತದೆ ಎಂದು ಹೇಳಿದೆ.

ADVERTISEMENT

ಜಮೀನು ಮಾಲೀಕರಿಂದ ಜಮೀನನ್ನು ಸ್ವಾಧೀನಕ್ಕೆ ಪಡೆಯುವ ಮೊದಲು ಪರಿಹಾರ ಮೊತ್ತವನ್ನು ಪೂರ್ಣ ಪ್ರಮಾಣದಲ್ಲಿ ನೀಡಬೇಕು ಎಂಬುದನ್ನು ಕಾಯ್ದೆಯ ಸೆಕ್ಷನ್ 38 ಹೇಳುತ್ತದೆ ಎಂದು ಪೀಠವು ನೆನಪಿಸಿದೆ.

ಜಮೀನು ಸ್ವಾಧೀನ ಪ್ರಕ್ರಿಯೆಯನ್ನು ಆರಂಭಿಸುವುದು ಮಾತ್ರ ತನ್ನ ಕೆಲಸ ಎಂಬ ಕಾರಣ ನೀಡಿ ಸರ್ಕಾರಗಳು ತಮ್ಮ ಸಾಂವಿಧಾನಿಕ ಹಾಗೂ ಶಾಸನಾತ್ಮಕ ಹೊಣೆಯಿಂದ ತಪ್ಪಿಸಿಕೊಳ್ಳುವಂತಿಲ್ಲ ಎಂದು ಪೀಠವು ಹೇಳಿದೆ. 

ಹಿಮಾಚಲ ಪ್ರದೇಶದಲ್ಲಿನ ಜಮೀನು ಸ್ವಾಧೀನ, ಪೂರಕ ಪರಿಹಾರ ನೀಡುವುದಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಪೀಠವು, ‘ಹಿಮಾಚಲ ಪ್ರದೇಶ ಸರ್ಕಾರವು ಜಮೀನು ಸ್ವಾಧೀನ ಮಾಡಿಕೊಳ್ಳುವ ಮೊದಲು ಜಮೀನು ಮಾಲೀಕರಿಗೆ ಪರಿಹಾರ ಮೊತ್ತ ಸಿಗುವಂತೆ ಖಾತರಿಪಡಿಸದೆ ಇರುವುದು ವಿಷಾದಕರ’ ಎಂದು ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.