ADVERTISEMENT

ಎಸ್‌ಸಿ ಒಳವರ್ಗೀಕರಣ | ರಾಜ್ಯಕ್ಕಿದೆ ಅಧಿಕಾರ: ಸುಪ್ರೀಂ ಕೋರ್ಟ್‌

ಪಿಟಿಐ
Published 1 ಆಗಸ್ಟ್ 2024, 7:58 IST
Last Updated 1 ಆಗಸ್ಟ್ 2024, 7:58 IST
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್   

ನವದೆಹಲಿ: ಪರಿಶಿಷ್ಟ ಜಾತಿಗಳಲ್ಲಿ (ಎಸ್‌ಸಿ) ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಹೆಚ್ಚು ಹಿಂದುಳಿದಿರುವ ಜಾತಿಗಳ ಅಭಿವೃದ್ಧಿಯ ಉದ್ದೇಶದಿಂದ ಆ ಜಾತಿಗಳಿಗೆ ಸೇರಿದವರಿಗೆ ಮೀಸಲಾತಿ ಕಲ್ಪಿಸಲು, ಒಳವರ್ಗೀಕರಣ ಮಾಡುವ ಸಾಂವಿಧಾನಿಕ ಅಧಿಕಾರ ರಾಜ್ಯಗಳಿಗೆ ಇದೆ ಎಂದು ಸುಪ್ರೀಂ ಕೋರ್ಟ್‌ ಗುರುವಾರ ಸಾರಿದೆ.

ಪರಿಶಿಷ್ಟ ಜಾತಿಗಳು ಸಾಮಾಜಿಕವಾಗಿ ಏಕರೂಪಿಯಾಗಿಲ್ಲ ಎಂದು ಏಳು ನ್ಯಾಯಮೂರ್ತಿಗಳ ಸಂವಿಧಾನ ಪೀಠವು ಹೇಳಿದೆ. ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ.ವೈ. ಚಂದ್ರಚೂಡ್ ಅವರು ಈ ಪೀಠದ ನೇತೃತ್ವ ವಹಿಸಿದ್ದರು. ಪೀಠವು 6:1ರ ಬಹುಮತದ ತೀರ್ಪು ನೀಡಿದೆ.

ಇ.ವಿ. ಚಿನ್ನಯ್ಯ ಮತ್ತು ಆಂಧ್ರಪ್ರದೇಶ ಸರ್ಕಾರದ ನಡುವಿನ ಪ್ರಕರಣದಲ್ಲಿ, ‘ಪರಿಶಿಷ್ಟ ಜಾತಿಗಳ ಒಳವರ್ಗೀಕರಣಕ್ಕೆ ಅವಕಾಶ ಇಲ್ಲ, ಏಕೆಂದರೆ ಪರಿಶಿಷ್ಟ ಜಾತಿ ಎಂಬುದೇ ಒಂದು ಏಕರೂಪಿ ವರ್ಗ’ ಎಂದು ಸುಪ್ರೀಂ ಕೋರ್ಟ್‌ನ ಐವರು ನ್ಯಾಯಮೂರ್ತಿಗಳ ಸಂವಿಧಾನ ಪೀಠ 2014ರಲ್ಲಿ ನೀಡಿದ್ದ ತೀರ್ಪನ್ನು ಏಳು ನ್ಯಾಯಮೂರ್ತಿಗಳ ಪೀಠವು ರದ್ದುಪಡಿಸಿದೆ.

ADVERTISEMENT

‘ಸಂವಿಧಾನದ 15ನೆಯ ಹಾಗೂ 16ನೆಯ ವಿಧಿಗಳ ಅಡಿಯಲ್ಲಿ ಇರುವ ಅಧಿಕಾರವನ್ನು ಬಳಸಿ ರಾಜ್ಯ ಸರ್ಕಾರಗಳು ಸಾಮಾಜಿಕ ಹಿಂದುಳಿದಿರುವಿಕೆಯ ಭಿನ್ನ ಮಟ್ಟವನ್ನು ಗುರುತಿಸಲು ಹಾಗೂ ಮೀಸಲಾತಿಯಂತಹ ವಿಶೇಷ ಅವಕಾಶಗಳನ್ನು ಕಲ್ಪಿಸಲು ಮುಕ್ತವಾಗಿವೆ’ ಎಂದು ಸಿಜೆಐ ಚಂದ್ರಚೂಡ್ ಅವರು ತೀರ್ಪಿನಲ್ಲಿ ಹೇಳಿದ್ದಾರೆ.

‘ಪರಿಶಿಷ್ಟ ಜಾತಿಗಳು ಏಕರೂಪಿ ಸಮುದಾಯ ಅಲ್ಲ ಎಂಬುದನ್ನು ಐತಿಹಾಸಿಕ ಹಾಗೂ ಅನುಭವಗಮ್ಯ ಸಾಕ್ಷ್ಯಗಳು ಹೇಳುತ್ತವೆ. ಹೀಗಾಗಿ, ರಾಜ್ಯಗಳು ಸಂವಿಧಾನದ 15(4) ಹಾಗೂ 16(4)ನೆಯ ವಿಧಿಯ ಅಡಿಯಲ್ಲಿ ಇರುವ ಅಧಿಕಾರವನ್ನು ಬಳಸಿ, ಪರಿಶಿಷ್ಟ ಜಾತಿಗಳನ್ನು ಒಳವರ್ಗೀಕರಿಸಬಹುದು. ಆದರೆ ಹಾಗೆ ಪ್ರತ್ಯೇಕಗೊಳಿಸುವುದಕ್ಕೆ ಸಕಾರಣ ಇರಬೇಕು’ ಎಂದು ಅವರು ವಿವರಿಸಿದ್ದಾರೆ.

ಪೀಠವು ಒಟ್ಟು 565 ಪುಟಗಳ ತೀರ್ಪುಗಳನ್ನು ನೀಡಿದೆ. ಸಿಜೆಐ ಚಂದ್ರಚೂಡ್ ಅವರು ನ್ಯಾಯಮೂರ್ತಿ ಮಿಶ್ರಾ ಅವರ ಪರವಾಗಿ ತಾವೇ ತೀರ್ಪು ಬರೆದಿದ್ದಾರೆ. ನಾಲ್ವರು ನ್ಯಾಯಮೂರ್ತಿಗಳು ಇದಕ್ಕೆ ಸಹಮತದ ತೀರ್ಪು ಬರೆದಿದ್ದಾರೆ. ನ್ಯಾಯಮೂರ್ತಿ ತ್ರಿವೇದಿ ಅವರು ಭಿನ್ನಮತದ ತೀರ್ಪು ಬರೆದಿದ್ದಾರೆ.

ಪರಿಶಿಷ್ಟ ಜಾತಿಗಳ ಒಳವರ್ಗೀಕರಣ ಹಾಗೂ ಯಾವುದೇ ಒಂದು ವರ್ಗಕ್ಕೆ ಹೆಚ್ಚಿನ ಮೀಸಲಾತಿ ಸೌಲಭ್ಯ ಕಲ್ಪಿಸುವ ತೀರ್ಮಾನವನ್ನು ನ್ಯಾಯಾಂಗವು ಪರಿಶೀಲನೆಗೆ ಒಳಪಡಿಸಲು ಅವಕಾಶ ಇದೆ ಎಂದು ಸಿಜೆಐ ಸ್ಪಷ್ಟಪಡಿಸಿದ್ದಾರೆ.

ಮೀಸಲಾತಿ ವಿಚಾರವಾಗಿ ಮಂಡಲ್‌ ತೀರ್ಪಿನಲ್ಲಿ ಹೇಳಿರುವ ಮಾತುಗಳನ್ನು ಉಲ್ಲೇಖಿಸಿರುವ ಪೀಠವು, ಒಳವರ್ಗೀಕರಣವು ಇತರೆ ಹಿಂದುಳಿದ ವರ್ಗಗಳಿಗೆ (ಒಬಿಸಿ) ಮಾತ್ರ ಸೀಮಿತವಾಗಿಲ್ಲ ಎಂಬುದನ್ನು ಸ್ಪಷ್ಟಪಡಿಸಿದೆ.

ಭಿನ್ನಮತದ ತೀರ್ಪು ಬರೆದಿರುವ ನ್ಯಾಯಮೂರ್ತಿ ತ್ರಿವೇದಿ ಅವರು ಸಂವಿಧಾನದ 341ನೆಯ ವಿಧಿಯ ಅಡಿಯಲ್ಲಿ ಅಧಿಸೂಚಿತವಾಗಿರುವ ಪರಿಶಿಷ್ಟ ಜಾತಿಗಳ ಪಟ್ಟಿಯಲ್ಲಿ ಬದಲಾವಣೆ ತರುವ ಅಧಿಕಾರವು ರಾಜ್ಯಗಳಿಗೆ ಇಲ್ಲ ಎಂದು ಹೇಳಿದ್ದಾರೆ. ರಾಜ್ಯಗಳು ಜಾರಿಗೆ ತರುವ ಸದಾಶಯದ ಕ್ರಮಗಳು ಸಂವಿಧಾನ ವಿಧಿಸಿರುವ ಚೌಕಟ್ಟನ್ನು ಮೀರುವಂತೆ ಇಲ್ಲ ಎಂದು ಅವರು ಹೇಳಿದ್ದಾರೆ.

ಪರಿಶಿಷ್ಟ ಜಾತಿಗಳ ಪಟ್ಟಿಯಲ್ಲಿ ಜಾತಿಯೊಂದರ ಹೆಸರನ್ನು ಸೇರಿಸುವ ಅಥವಾ ಆ ಪಟ್ಟಿಯಿಂದ ಜಾತಿಯೊಂದರ ಹೆಸರನ್ನು ಹೊರಗೆ ತರುವ ಅಧಿಕಾರ ಇರುವುದು ಸಂಸತ್ತಿಗೆ ಮಾತ್ರ ಎಂದು ತ್ರಿವೇದಿ ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.