ADVERTISEMENT

ಇ.ಡಿ ನೋಟಿಸ್ ವಿರುದ್ಧ ಅರ್ಜಿ: ತಮಿಳುನಾಡು ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ತರಾಟೆ

ಪಿಟಿಐ
Published 24 ಫೆಬ್ರುವರಿ 2024, 6:30 IST
Last Updated 24 ಫೆಬ್ರುವರಿ 2024, 6:30 IST
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್   

‌ನವದೆಹಲಿ: ಹಣ ಅಕ್ರಮ ವರ್ಗಾವಣೆ ಪ್ರಕರಣವೊಂದರಲ್ಲಿ ಅಧಿಕಾರಿಗಳಿಗೆ ನೋಟಿಸ್‌ ನೀಡಿದ್ದ ಜಾರಿ ನಿರ್ದೇಶನಾಲಯದ ವಿರುದ್ದ ಮದ್ರಾಸ್‌ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದ ತಮಿಳುನಾಡು ಸರ್ಕಾರವನ್ನು ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.

ಮರಳು ಅಕ್ರಮ ಗಾಣಿಗಾರಿಕೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯವು, ವೆಲ್ಲೂರು, ತಿರುಚಿರಾಪಳ್ಳಿ, ಕರೂರ್, ತಾಂಜಾವೂರು ಹಾಗೂ ಅರಿಯಲೂರು ಜಿಲ್ಲಾಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಿತ್ತು.

ಈ ನೋಟಿಸ್‌ ವಿರುದ್ಧ ಮದ್ರಾಸ್‌ ಹೈಕೋರ್ಟ್‌ ಕದ ತಟ್ದಿದ್ದ ರಾಜ್ಯ ಸರ್ಕಾರ ಹಾಗೂ ಅಧಿಕಾರಿಗಳು ತಡೆಯಾಜ್ಞೆ ತಂದಿದ್ದರು. ಇದನ್ನು ಪ್ರಶ್ನಿಸಿ ಜಾರಿ ನಿರ್ದೇಶನಾಲಯವು ಸುಪ್ರೀಂ ಕೋರ್ಟ್ ಮೊರೆಹೋಗಿತ್ತು.

ADVERTISEMENT

‘ರಾಜ್ಯ ಸರ್ಕಾರ ರಿಟ್ ಅರ್ಜಿ ಸಲ್ಲಿಸಲು ಹೇಗೆ ಸಾಧ್ಯ? ಯಾವ ಕಾನೂನಿನಲ್ಲಿ ಇದಕ್ಕೆ ಅವಕಾಶ ಇದೆ? ಜಾರಿ ನಿರ್ದೇಶನಾಲಯದ ವಿರುದ್ಧ ಈ ರಿಟ್ ಅರ್ಜಿಯನ್ನು ಹೇಗೆ ಸಲ್ಲಿಸಬಹುದು ಎನ್ನುವುದನ್ನು ನಮಗೆ ತಿಳಿಸಿ. ಈ ಪ್ರರಣದಲ್ಲಿ ರಾಜ್ಯಕ್ಕೆ ಹೇಗೆ ಸಮಸ್ಯೆಯಾಗಿದೆ?’ ಎಂದು ತಮಿಳುನಾಡು ಸರ್ಕಾರ ಪರ ಹಾಜರಾದ ವಕೀಲರನ್ನು ನ್ಯಾಯಮೂರ್ತಿಗಳಾದ ಬೇಲಾ ಎಂ. ತ್ರಿವೇದಿ ಹಾಗೂ ಪಂಕಜ್ ಮಿತ್ತಲ್ ಅವರ ಪೀಠ ಪ್ರಶ್ನೆ ಮಾಡಿತು.

ಅಲ್ಲದೆ ಅಧಿಕಾರಿಗಳು ಇ.ಡಿ. ಜೊತೆ ಸಹಕರಿಸಬೇಕಿತ್ತು ಎಂದು ಹೇಳಿತು.

‘ತನಿಖಾ ಸಂಸ್ಥೆಯ ಕಾನೂನು ಬಾಹಿರ ವಿಚಾರಣೆಯಿಂದ ಅಧಿಕಾರಿಗಳನ್ನು ರಕ್ಷಿಸುವುದು ರಾಜ್ಯ ಸರ್ಕಾರದ ಜವಾಬ್ದಾರಿ’ ಎಂದು ತಮಿಳುನಾಡು ಸರ್ಕಾರದ ಪರ ಹಾಜರಾದ ಹಿರಿಯ ವಕೀಲ ಮುಕುಲ್ ರೋಹಟಗಿ ಹಾಗೂ ಅಮಿತ್ ಆನಂದ್ ತಿವಾರಿ ವಾದಿಸಿದರು.

‘ಜಿಲ್ಲಾಧಿಕಾರಿಗಳು ಆರೋಪಿಗಳಲ್ಲ. ಸಾಕ್ಷಿಗಳನ್ನಾಗಿಸಲು ಅವರಿಗೆ ನೋಟಿಸ್‌ ನೀಡಲಾಗಿತ್ತು’ ಎಂದು ಜಾರಿ ನಿರ್ದೇಶನಾಲಯದ ಪರ ಹಾಜರಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್‌.ವಿ ರಾಜು ನ್ಯಾಯಾಲಯಕ್ಕೆ ಅರಿಕೆ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.