ಮುಂಬೈ: ನೀಟ್ ಪರೀಕ್ಷೆ ಸೇರಿದಂತೆ ಇತರ ಪರೀಕ್ಷೆಗಳಲ್ಲಿ ನಡೆದ ಅಕ್ರಮಗಳ ತನಿಖೆ ನಡೆಸಲು ವಿಶೇಷ ತನಿಖಾ ತಂಡ(ಎಸ್ಐಟಿ) ರಚಿಸುವಂತೆ ಎನ್ಸಿಪಿ(ಎಸ್ಪಿ) ನಾಯಕಿ ಸುಪ್ರಿಯಾ ಸುಳೆ ಒತ್ತಾಯಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ತಂತ್ರಜ್ಞಾನದಲ್ಲಿ ಸುಧಾರಣೆ ಕಾಣುತ್ತಿದ್ದರೂ ರಾಷ್ಟ್ರೀಯ ಅರ್ಹತೆ ಪರೀಕ್ಷೆಗಳಂತಹ ಹಲವಾರು ಪರೀಕ್ಷೆಗಳ ನಿರ್ವಹಣೆಯಲ್ಲಿ ಸಮಸ್ಯೆಗಳು ಹೆಚ್ಚಾಗುತ್ತಿವೆ’ ಎಂದು ಹೇಳಿದರು.
‘ಕೇಂದ್ರ ಸರ್ಕಾರವು ರೈತರು, ಮಹಿಳೆಯರು ಮತ್ತು ವಿದ್ಯಾರ್ಥಿಗಳ ವಿಷಯದಲ್ಲಿ ನಿರ್ಲಕ್ಷ್ಯತೆ ತೋರಿಸುತ್ತಿದೆ. ನೀಟ್ ಪರೀಕ್ಷೆ, ತಲತಿ ಪರೀಕ್ಷೆ, ಇದೀಗ ಯುಜಿಸಿ–ನೆಟ್ ಪರೀಕ್ಷೆಗಳಲ್ಲಿ ಅಕ್ರಮಗಳು ನಡೆದಿರುವುದು ಬೆಳಕಿಗೆ ಬಂದಿದೆ. ತಂತ್ರಜ್ಞಾನ ಇಷ್ಟು ಮುಂದುವರಿದಿದ್ದರೂ ಪರೀಕ್ಷೆಗಳ ವಿಷಯದಲ್ಲಿ ದೋಷಗಳು ಕಂಡುಬರುತ್ತಿರುವುದು ಯಾಕೆ? ಎಸ್ಐಟಿ ರಚಿಸುವುದು ಅನಿವಾರ್ಯವಾಗಿದೆ’ ಎಂದು ಹೇಳಿದರು.
‘ಹಿಂದೆಲ್ಲ ಅಪರೂಪಕ್ಕೆ ಕೇಳುತ್ತಿದ್ದ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳು ಈಗೀಗ ಸಾಮಾನ್ಯವೆಂಬಂತೆ ತೋರುತ್ತಿದೆ’ ಎಂದು ಕಿಡಿಕಾರಿದರು.
‘ಸರ್ಕಾರ ವಿರುದ್ಧ ಬರುತ್ತಿರುವ ಹೆಚ್ಚಿನ ದೂರುಗಳಲ್ಲಿ ಗೃಹ ಇಲಾಖೆಗೆ ಏಕೆ ಸಂಬಂಧಿಸಿದ ದೂರುಗಳ ಸಂಖ್ಯೆ ಹೆಚ್ಚಾಗಿದೆ. ಇದು ಏಕೆ ಹೀಗೆ ಎಂದು ರಾಜ್ಯದ ಗೃಹಸಚಿವರಲ್ಲಿ ಕೇಳ ಬಯಸುತ್ತೇನೆ. ಹಿಟ್ ಆ್ಯಂಡ್ ರನ್ ಮತ್ತು ಮಹಿಳೆಯರ ವಿರುದ್ಧದ ದೂರುಗಳು ಹೆಚ್ಚುತ್ತಿವೆ. ಪೊಲೀಸರ ಬಗ್ಗೆ ಜನರಿಗೆ ಭಯವಿಲ್ಲವಾಗಿದೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.