ADVERTISEMENT

ಸೂರತ್ ಕಟ್ಟಡ ಕುಸಿತ | ಸಾವಿನ ಸಂಖ್ಯೆ 7ಕ್ಕೆ ಏರಿಕೆ: ಮಾಲೀಕರ ವಿರುದ್ಧ ಎಫ್‌ಐಆರ್‌

ಸೂರತ್‌ನಲ್ಲಿ 6 ಅಂತಸ್ತಿನ ಕಟ್ಟಡ ಕುಸಿದ ಪ್ರಕರಣ

ಪಿಟಿಐ
Published 7 ಜುಲೈ 2024, 12:57 IST
Last Updated 7 ಜುಲೈ 2024, 12:57 IST
<div class="paragraphs"><p>ಸೂರತ್‌ನಲ್ಲಿ ಶನಿವಾರ ಕುಸಿತಗೊಂಡ ಕಟ್ಟಡದಲ್ಲಿ ಭಾನುವಾರ ಬೆಳಿಗ್ಗೆಯವರೆಗೂ ರಕ್ಷಣಾ ಕಾರ್ಯಾಚರಣೆ ನಡೆಯಿತು</p></div>

ಸೂರತ್‌ನಲ್ಲಿ ಶನಿವಾರ ಕುಸಿತಗೊಂಡ ಕಟ್ಟಡದಲ್ಲಿ ಭಾನುವಾರ ಬೆಳಿಗ್ಗೆಯವರೆಗೂ ರಕ್ಷಣಾ ಕಾರ್ಯಾಚರಣೆ ನಡೆಯಿತು

   

–ಪಿಟಿಐ ಚಿತ್ರ

ಸೂರತ್‌: ಗುಜರಾತ್‌ನ ಸೂರತ್‌ನಲ್ಲಿ ಕುಸಿದ ಆರು ಅಂತಸ್ತಿನ ಕಟ್ಟಡದ ಅವಶೇಷಗಳ ಅಡಿಯಲ್ಲಿ ಶನಿವಾರ ರಾತ್ರಿಯಿಡೀ  ಕಾರ್ಯಾಚರಣೆ ನಡೆಸಿ ಆರು ಮೃತದೇಹಗಳನ್ನು ಹೊರತೆಗೆದಿದ್ದು, ಸಾವಿನ ಸಂಖ್ಯೆ ಏಳಕ್ಕೆ ಏರಿಕೆಯಾಗಿದೆ ಎಂದು ಪೊಲೀಸರು  ತಿಳಿಸಿದರು.

ADVERTISEMENT

‘ಕಟ್ಟಡದಲ್ಲಿ ವಾಸಿಸುತ್ತಿದ್ದವರಿಂದ ಬಾಡಿಗೆ ಸಂಗ್ರಹಿಸುತ್ತಿದ್ದ ವ್ಯಕ್ತಿಯನ್ನು ಬಂಧಿಸಲಾಗಿದೆ. ಅಲ್ಲದೇ, ಆತ ಸೇರಿದಂತೆ ಕಟ್ಟಡದ ಇಬ್ಬರು ಮಾಲೀಕರ ವಿರುದ್ಧ ‘ಉದ್ದೇಶಪೂರ್ವಕವಲ್ಲದ ನರಹತ್ಯೆ’ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ’ ಎಂದರು.

ಇಲ್ಲಿನ ಪಾಲ್‌ ಪ್ರದೇಶದ ಅತ್ಯಂತ ಶಿಥಿಲಾವಸ್ಥೆಯಲ್ಲಿದ್ದ ಕಟ್ಟಡವು ಶನಿವಾರ ಮಧ್ಯಾಹ್ನ 2.45ಕ್ಕೆ ಕುಸಿದಿತ್ತು. ತಕ್ಷಣವೇ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್‌) ಹಾಗೂ ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್‌ಡಿಆರ್‌ಎಫ್‌), ಪೊಲೀಸರು, ಆಗ್ನಿಶಾಮಕ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ಆಂಭಿಸಿದ್ದರು.

ಮೂರು ತಾಸುಗಳ ಕಾರ್ಯಾಚರಣೆ ಬಳಿಕ ಕಾಶೀಶ್‌ ಶರ್ಮಾ (20) ಎಂಬ ಮಹಿಳೆಯನ್ನು ರಕ್ಷಿಸಿ, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಶನಿವಾರ ರಾತ್ರಿ ಒಬ್ಬರ ಮೃತದೇಹವನ್ನು ಹೊರತೆಗೆಯಲಾಗಿತ್ತು. ರಕ್ಷಣಾ ತಂಡವು ರಾತ್ರಿಯಿಡೀ ನಡೆಸಿದ ಕಾರ್ಯಾಚರಣೆಯಲ್ಲಿ ಮತ್ತೆ ಆರು ಮಂದಿಯ ಮೃತದೇಹವನ್ನು ಹೊರತೆಗೆದಿದ್ದು, ಒಟ್ಟು ಏಳು ಮಂದಿಯ ಮೃತದೇಹವನ್ನು ಹೊರತೆಗೆಯಲಾಗಿದೆ ಎಂದು ಇನ್‌ಸ್ಪೆಕ್ಟರ್‌ ಜಿಗ್ನೇಶ್‌ ಚೌಧರಿ ತಿಳಿಸಿದರು.

ಮೃತರೆಲ್ಲರೂ ಟೆಕ್ಸ್‌ಟೈಲ್ಸ್‌ನ ಕಾರ್ಮಿಕರಾಗಿದ್ದು, ಮಧ್ಯಪ್ರದೇಶ, ಉತ್ತರ ಪ್ರದೇಶಕ್ಕೆ ಸೇರಿದವರಾಗಿದ್ದಾರೆ. 

ಎಫ್‌ಐಆರ್‌ ದಾಖಲು: ಪ್ರಕರಣಕ್ಕೆ ಸಂಬಂಧಿಸಿದಂತೆ ‘ಭಾರತೀಯ ನ್ಯಾಯ ಸಂಹಿತೆ’ ಅಡಿಯಲ್ಲಿ ಕಟ್ಟಡದ ಮಾಲೀಕ ರಾಕ್‌ ಕಾಕಡಿಯಾ, ಇವರ ತಾಯಿ ರಾಮಿಲಾಬೆನ್ ಕಾಕಡಿಯಾ, ಬಾಡಿಗೆ ಸಂಗ್ರಹಿಸುತ್ತಿದ್ದ ಅಶ್ವಿನ್‌ ವೆಕರಿಯಾ ವಿರುದ್ಧ ‘ಉದ್ದೇಶಪೂರ್ವಕವಲ್ಲದ ನರಹತ್ಯೆ’ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ’ ಎಂದು ಇನ್‌ಸ್ಪೆಕ್ಟರ್‌ ಚೌಧರಿ ತಿಳಿಸಿದರು.

‘ಅಶ್ವಿನ್ ವೆಕಾರಿಯಾನನ್ನು ಈಗಾಗಲೇ ಬಂಧಿಸಲಾಗಿದ್ದು, ಇನ್ನಿಬ್ಬರ ಬಂಧನಕ್ಕೆ ಶೋಧ ಕಾರ್ಯ ಮುಂದುವರಿದಿದೆ. ರಾಜ್‌ ಕಾಕಡಿಯಾ ಅಮೆರಿಕದಲ್ಲಿದ್ದಾರೆ’ ಎಂದರು.

‘ಕಟ್ಟಡವು ಶಿಥಿಲಾವಸ್ಥೆಯಲ್ಲಿದ್ದ ಕಾರಣ ಬಾಡಿಗೆಗೆ ಇದ್ದ ಬಹುತೇಕ ಕುಟುಂಬದವರು ಖಾಲಿ ಮಾಡಿದ್ದರು. ಆದರೂ, ಕೆಲವರು ಬಾಡಿಗೆ ನೀಡಿ ಇದೇ ಕಟ್ಟಡದಲ್ಲಿ ವಾಸಿಸುತ್ತಿದ್ದರು. ಕಟ್ಟಡದಲ್ಲಿದ್ದ ಎಲ್ಲ ನಿವಾಸಿಗಳನ್ನು ತೆರವುಗೊಳಿಸುವಂತೆ ಇದೇ ಏಪ್ರಿಲ್‌ 26ರಂದು ಸೂರತ್‌ ಮಹಾನಗರ ಪಾಲಿಕೆ ಅಧಿಕಾರಿಗಳು ನೋಟಿಸ್‌ ಜಾರಿಗೊಳಿಸಿದ್ದರು’ ಎಂದು ಎಫ್‌ಐಆರ್‌ನಲ್ಲಿ ತಿಳಿಸಲಾಗಿದೆ.

2016–2017ರಲ್ಲಿ ಈ ಕಟ್ಟಡವನ್ನು ನಿರ್ಮಿಸಲಾಗಿತ್ತು ಎಂದು ಸೂರತ್‌ ನಗರ ಪೊಲೀಸ್‌ ಆಯುಕ್ತ ಅನುಪ‍ಮ್‌ ಸಿಂಗ್‌ ಗೆಹಲೋತ್‌ ಶನಿವಾರ ತಿಳಿಸಿದ್ದರು.

‘ಕಟ್ಟಡಕ್ಕೆ ಹಾನಿಯಾಗಿದ್ದರಿಂದ ತಕ್ಷಣವೇ ದುರಸ್ತಿ ಮಾಡಿಸುವಂತೆ ವೆಕಾರಿಯಾನಿಗೆ ಬಾಡಿಗೆದಾರರು ಮನವಿ ಮಾಡಿದ್ದರು. ಆದರೆ, ಮುಂದಿನ ವರ್ಷ ಮಾಡಿಸುತ್ತೇನೆ ಎಂದು ಕಟ್ಟಡದ ಮಾಲೀಕರು ತಿಳಿಸಿದ್ದರು. ನಗರದ ವಿವಿಧ ಕಾರ್ಖಾನೆಗಳಲ್ಲಿ ಕೆಲಸ ಮಾಡುತ್ತಿದ್ದ ನೌಕರರು ಐದು ಫ್ಲ್ಯಾಟ್‌ಗಳಲ್ಲಿ ವಾಸವಿದ್ದರು’ ಎಂದರು.

ಶನಿವಾರ ಮಧ್ಯಾಹ್ನ ಆರಂಭವಾದ ರಕ್ಷಣಾ ಕಾರ್ಯಾಚರಣೆಯು ಭಾನುವಾರ ಬೆಳಿಗ್ಗೆ 9 ಗಂಟೆಗೆ ಮುಕ್ತಾಯಗೊಂಡಿತು ಎಂದು ಎನ್‌ಡಿಆರ್‌ಎಫ್‌ ಅಧಿಕಾರಿಗಳು ತಿಳಿಸಿದರು.

ಸೂರತ್‌ನಲ್ಲಿ ಕುಸಿತಗೊಂಡ ಕಟ್ಟಡದಲ್ಲಿ ಒಳಗಡೆ ಸಿಲುಕಿದವರಿಗಾಗಿ ಅಧಿಕಾರಿಗಳು ರಕ್ಷಣಾ ತಂಡದ ಸದಸ್ಯರು ಕಾರ್ಯಾಚರಣೆ ನಡೆಸಿದರು

ಸೂರತ್‌ನಲ್ಲಿ ಶನಿವಾರ ಕುಸಿತಗೊಂಡ ಕಟ್ಟಡದಲ್ಲಿ ಒಳಗಡೆ ಸಿಲುಕಿದವರಿಗಾಗಿ ಅಧಿಕಾರಿಗಳು ರಕ್ಷಣಾ ತಂಡದ ಸದಸ್ಯರು ಕಾರ್ಯಾಚರಣೆ ನಡೆಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.