ಮುಂಬೈ: ನಾಲ್ಕು ದಿನಗಳ ಹಿಂದೆ ಬಾರ್ಬಾಡೋಸ್ನಲ್ಲಿ ಟಿ20 ವಿಶ್ವಕಪ್ ಜಯಿಸಿದ್ದ ಭಾರತ ತಂಡವನ್ನು ಅಭಿನಂದಿಸಲು ದೇಶದ ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ಭರದ ಸಿದ್ಧತೆ ನಡೆಯುತ್ತಿದೆ.
ಗುರುವಾರ ಇಲ್ಲಿಗೆ ಬಂದಿಳಿಯಲಿ ರುವ ತಂಡದ ಅಟಗಾರರನ್ನು ತೆರೆದ ಬಸ್ನಲ್ಲಿ ಮೆರವಣಿಗೆ ಮಾಡಲಾಗು ವುದು. ವಾಂಖೆಡೆ ಕ್ರೀಡಾಂಗಣದಲ್ಲಿ ಸನ್ಮಾನಿಸಲಾಗುವುದು. ಅದಕ್ಕಾಗಿ ಎಲ್ಲ ಸಿದ್ಧತೆಗಳೂ ಪೂರ್ಣಗೊಂಡಿವೆ.
ಬುಧವಾರ ಬೆಳಗಿನ ಜಾವ (4.50ಕ್ಕೆ) ಬಾರ್ಬಾಡೋಸ್ನ ಗ್ರ್ಯಾಂಟ್ಲಿ ಆ್ಯಡಮ್ಸ್ ವಿಮಾನ ನಿಲ್ದಾಣದಿಂದ ‘ಎಐಸಿ24ಡಬ್ಲ್ಯುಸಿ– ಏರ್ ಇಂಡಿಯಾ ಚಾಂಪಿಯನ್ಸ್ 24 ವರ್ಲ್ಡ್ಕಪ್’ ಎಂದು ಇಂಗ್ಲಿಷ್ ಫಲಕ ಹೊಂದಿದ ವಿಶೇಷ ವಿಮಾನದಲ್ಲಿ ಭಾರತ ತಂಡವು ಪ್ರಯಾಣ ಮಾಡಿತು. ಗುರುವಾರ ಬೆಳಿಗ್ಗೆ (6.20) ದೆಹಲಿಗೆ ಬಂದಿಳಿಯಲಿದೆ.
ಜೂನ್ 29ರಂದು ಫೈನಲ್ ಪಂದ್ಯ ವು ಮುಗಿದಿತ್ತು. ಆದರೆ, ಕೆರೀಬಿಯನ್ ದ್ವೀಪಗಳಲ್ಲಿ ಬೆರಿಲ್ ಚಂಡಮಾರುತದಿಂದಾಗಿ ಭಾರತ ತಂಡದ ಪ್ರಯಾಣವು ವಿಳಂಬವಾಗಿತ್ತು. ಆಟಗಾರರು, ನೆರವು ಸಿಬ್ಬಂದಿ, ಬಿಸಿಸಿಐ ಅಧಿಕಾರಿಗಳು ಮತ್ತು ಭಾರತದಿಂದ ಟೂರ್ನಿಯ ವರದಿಗೆ ತೆರಳಿದ್ದ ಮಾಧ್ಯಮ ಪ್ರತಿನಿಧಿಗಳು ಅಲ್ಲಿಯೇ ಉಳಿಯಬೇಕಾಯಿತು. ಚಂಡಮಾರುತದಿಂದಾಗಿ ಬಾರ್ಬಾಡೋಸ್ ವಿಮಾನ ನಿಲ್ದಾಣವನ್ನು ಮುಚ್ಚಲಾಗಿತ್ತು. ಹವಾಮಾನ ಸುಧಾರಿಸಿದ ನಂತರ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯು (ಬಿಸಿಸಿಐ) ಚಾರ್ಟರ್ ವಿಮಾನ ವ್ಯವಸ್ಥೆ ಮಾಡಿತು.
‘ಏರ್ ಇಂಡಿಯಾದ ವಿಶೇಷ ವಿಮಾನವನ್ನು ಬಿಸಿಸಿಐ ಬಾಡಿಗೆಗೆ ಪಡೆ ದಿದೆ. ಬಾರ್ಬಾಡೋಸ್ನಲ್ಲಿದ್ದ ಭಾರತ ತಂಡ, ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ, ಕಾರ್ಯದರ್ಶಿ ಜಯ್ ಶಾ ಹಾಗೂ ಮಾಧ್ಯಮ ಪ್ರತಿನಿಧಿಗಳನ್ನು ಈ ವಿಮಾನದ ಮೂಲಕ ಭಾರತಕ್ಕೆ ಕರೆತರಲಾಗುತ್ತಿದೆ. ಗುರುವಾರ ಬೆಳಿಗ್ಗೆ 6 ಗಂಟೆಗೆ ದೆಹಲಿಗೆ ವಿಮಾನ ತಲುಪುವುದು. 11 ಗಂಟೆಗೆ ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವಕಪ್ ವಿಜೇತ ತಂಡದ ಆಟಗಾರರನ್ನು ಸತ್ಕರಿಸುವರು. ಅದರ ನಂತರ ತಂಡವು ಮುಂಬೈಗೆ ವಿಮಾನ ಮೂಲಕ ಪ್ರಯಾಣಿಸಲಿದೆ’ ಎಂದು ಬಿಸಿಸಿಐ ಉಪಾಧ್ಯಕ್ಷ ರಾಜೀವ ಶುಕ್ಲಾ ತಿಳಿಸಿದ್ದಾರೆ.
‘ಮುಂಬೈನ ನರೀಮನ್ ಪಾಯಿಂಟ್ನಿಂದ ರೋಡ್ ಶೋ ಆರಂಭವಾಗಲಿದೆ. ಅದಾದ ಮೇಲೆ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಆಟಗಾರ ರನ್ನು ಸನ್ಮಾನಿಸಿ, ₹125 ಕೋಟಿ ಬಹುಮಾನ ಕೂಡ ಪ್ರದಾನ ಮಾಡ ಲಾಗುವುದು’ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.