ನವದೆಹಲಿ: ‘ಜಾಗತಿಕ ಹವಾಮಾನ ಬದಲಾವಣೆ ಎದುರಿಸಲು ಸರ್ಕಾರ ರೂಪಿಸುವ ಯೋಜನೆಗಳ ಯಶಸ್ಸು ಸಾರ್ವಜನಿಕರ ಬೆಂಬಲವನ್ನು ಅವಲಂಬಿಸಿರುತ್ತದೆ. ಈ ವಿಚಾರದಲ್ಲಿ ಕಠಿಣ ನಿರ್ಧಾರ ತೆಗೆದುಕೊಳ್ಳುವುದು ಪ್ರಜಾಪ್ರಭುತ್ವದಲ್ಲಿ ಪ್ರಾಯೋಗಿಕವಲ್ಲ’ ಎಂದು ಕೇಂದ್ರ ಪರಿಸರ ಖಾತೆ ರಾಜ್ಯ ಸಚಿವ ಕೀರ್ತಿವರ್ಧನ್ ಸಿಂಗ್ ಅವರು ಗುರುವಾರ ತಿಳಿಸಿದರು.
ಭಾರತೀಯ ವಾಣಿಜ್ಯೋದ್ಯಮ ಮಹಾಸಂಘದ (ಅಸೋಚಾಂ)ದಿಂದ ಏರ್ಪಡಿಸಿದ್ದ ಪರಿಸರ ಹಾಗೂ ಇಂಗಾಲ ಕಾರ್ಯಾಗಾರದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
‘ತಾವು ಪ್ರತಿನಿಧಿಸುವ ಉತ್ತರಪ್ರದೇಶದಲ್ಲಿ ರೈತರು ಸಾಕಷ್ಟು ಸಂತುಷ್ಟರಾಗಿದ್ದಾರೆ ಎಂದು ಉದಾಹರಿಸಿದ ಅವರು, ಮೋಟರ್ ಪಂಪ್ ಮೂಲಕ ರೈತರು ಬೇಕಾದಷ್ಟು ನೀರು ಪಡೆದುಕೊಳ್ಳುತ್ತಿದ್ದಾರೆ’ ಎಂದರು.
‘ಇತ್ತೀಚೆಗಿನ ಚುನಾವಣೆಗಳಲ್ಲಿ ‘ಹವಾಮಾನ ಬದಲಾವಣೆ’ಗೆ ಸಂಬಂಧಿಸಿದಂತೆ ಮತ ಪಡೆಯುವ ಉದ್ದೇಶದಿಂದ ಸಕಾರಾತ್ಮಕವಾಗಿ ಮಾತನಾಡುತ್ತಿದ್ದೇವೆ. ಈಗಂತೂ ಸಾಕಷ್ಟು ಪ್ರಮಾಣದಲ್ಲಿ ನೀರಾವರಿ ವ್ಯವಸ್ಥೆ ಲಭ್ಯವಿದ್ದು, ರೈತರು ಮೋಟರ್ ಪಂಪ್ ಚಾಲೂ ಮಾಡಿ, ಮನೆಗೆ ಹೋಗಿ ಮಲಗುತ್ತಾರೆ. ಬೆಳಿಗ್ಗೆ ಎದ್ದು ಬರುವ ವೇಳೆಗೆ ಅವರ ಜಮೀನಿಗೆ ನೀರು ಹಾಯಿಸುವುದು ಮಾತ್ರವಲ್ಲದೇ, ಪಕ್ಕದ ಜಮೀನಿಗೂ ನೀರು ಹರಿದುಹೋಗಿರುತ್ತದೆ. ವಾಸ್ತವದಲ್ಲಿ, ನಮ್ಮ ಜಲಸಂಪನ್ಮೂಲಗಳು ವ್ಯರ್ಥವಾಗಿ ಹಾಳಾಗುತ್ತಿರುವ ವೇಳೆ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವುದನ್ನು ಪ್ರೋತ್ಸಾಹಿಸಬೇಕು’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.