ಹೈದರಾಬಾದ್: ಕೊಲೆ ಪ್ರಕರಣದಲ್ಲಿ ಆರೋಪಿತನಾಗಿ ಜೈಲು ಸೇರಿರುವ ನಟ ದರ್ಶನ್ ಅವರ ಬೆಂಬಲಕ್ಕೆ ತೆಲುಗಿನ ಯುವ ನಟ ನಾಗಶೌರ್ಯ ಅವರು ನಿಂತಿದ್ದಾರೆ. ಇನ್ಸ್ಟಾಗ್ರಾಂನಲ್ಲಿನ ಭಾವನಾತ್ಮಕ ಪೋಸ್ಟ್ನಲ್ಲಿ ದರ್ಶನ್ ಅವರನ್ನು ‘ಅಣ್ಣಾ’ ಎಂದು ಸಂಬೋಧಿಸಿದ್ದಾರೆ. ‘ದರ್ಶನ್ ಪ್ರಾಮಾಣಿಕತೆ ಮತ್ತು ಸಹಾನುಭೂತಿಗೆ ಹೆಸರಾಗಿದ್ದಾರೆ. ಅವರು ನಿರಪರಾಧಿ ಎಂದು ರುಜುವಾತಾಗಲಿದೆ ಮತ್ತು ನಿಜವಾದ ಅಪರಾಧಿಯನ್ನು ನ್ಯಾಯಾಲಯ ಗುರುತಿಸಲಿದೆ ಎಂದು ನಂಬಿಕೆ ಇದೆ‘ ಎಂದು ಹೇಳಿಕೊಂಡಿದ್ದಾರೆ.
‘ದರ್ಶನ್ ಅಣ್ಣಾ ಕನಸಿನಲ್ಲಿಯೂ ಬೇರೆಯವರಿಗೆ ಹಾನಿ ಮಾಡುವವರಲ್ಲ. ಅವರನ್ನು ಚೆನ್ನಾಗಿ ಬಲ್ಲವರು ಅವರ ಹೃದಯ ವೈಶಾಲ್ಯ ಹಾಗೂ ಇತರರಿಗೆ ಸಹಾಯ ಮಾಡುವ ಬದ್ಧತೆಯನ್ನು ಗುರುತಿಸಬಹುದು. ಅಗತ್ಯವಿರುವವರಿಗೆ ಸಹಾಯ ಮಾಡಲು ಸಿದ್ಧವಾಗಿರುತ್ತಾರೆ. ಎಷ್ಟೋ ಜನರಿಗೆ ಆಧಾರ ಸ್ತಂಭವಾಗಿದ್ದಾರೆ ಎಂದು ಶೌರ್ಯ ಅವರು ದರ್ಶನ್ ಭಾವಚಿತ್ರದೊಂದಿಗೆ ಬರೆದುಕೊಂಡಿದ್ದಾರೆ.
ದರ್ಶನ್ ಬೆಂಬಲಕ್ಕೆ ನಾಗಶೌರ್ಯ ಯಾಕೆ ಬಂದರು ಎಂದು ತಿಳಿದಿಲ್ಲ. ಅವರ ಸಾಮಾಜಿಕ ಜಾಲತಾಣದ ಪೋಸ್ಟ್ ಟಾಲಿವುಡ್ನವರನ್ನು ಚಕಿತಗೊಳಿಸಿದೆ. 2011ರಲ್ಲಿ ತೆಲುಗು ಚಿತ್ರರಂಗಕ್ಕೆ ಪದಾರ್ಪಣೆ ಮಾಡಿರುವ ನಾಗಶೌರ್ಯ ಬೆಂಗಳೂರು ಮೂಲದ ಅನುಷಾ ಶೆಟ್ಟಿ ಎಂಬುವವರನ್ನು ವಿವಾಹವಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.