ಹೈದರಾಬಾದ್: ಕೃಷಿ ಸಾಲ ಮನ್ನಾ ಯೋಜನೆಗೆ ಅನುಮೋದನೆ ನೀಡಿರುವ ತೆಲಂಗಾಣ ಸಚಿವ ಸಂಪುಟ, ‘ರೈತು ಭರೋಸಾ’ ಯೋಜನೆ ಅನುಷ್ಠಾನದಲ್ಲಿ ಪಾರದರ್ಶಕತೆ ಖಾತ್ರಿಪಡಿಸುವ ಸಲುವಾಗಿ ಸಂಪುಟ ಉಪಸಮಿತಿ ನೇಮಕ ಮಾಡಲು ಶುಕ್ರವಾರ ನಿರ್ಧರಿಸಿದೆ.
ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಮುಖ್ಯಮಂತ್ರಿ ಎ.ರೇವಂತ ರೆಡ್ಡಿ, ‘ವಿಧಾನಸಭೆ ಚುನಾವಣೆಗೂ ಮುನ್ನ ವರಂಗಲ್ನಲ್ಲಿ ಪ್ರಕಟಿಸಿದ ‘ರೈತ ಘೋಷಣೆ’ಯಲ್ಲಿ ಹೇಳಿರುವಂತೆ ಕೃಷಿ ಸಾಲ ಮನ್ನಾ ಯೋಜನೆಯನ್ನು ಅನುಷ್ಠಾನಗೊಳಿಸಲು ತೀರ್ಮಾನಿಸಲಾಗಿದೆ’ ಎಂದರು.
‘2018ರ ಡಿಸೆಂಬರ್ 12ರಿಂದ 2023ರ ಡಿಸೆಂಬರ್ 9ರ ವರೆಗಿನ ಅವಧಿಯಲ್ಲಿ ರೈತರು ತೆಗೆದುಕೊಂಡಿರುವ ಕೃಷಿ ಸಾಲವನ್ನು ಮನ್ನಾ ಮಾಡಲು ಸರ್ಕಾರ ನಿರ್ಧರಿಸಿದೆ. ಇದಕ್ಕಾಗಿ ₹31 ಸಾವಿರ ಕೋಟಿ ಅಗತ್ಯವಿದೆ ಎಂದು ಅಂದಾಜಿಸಲಾಗಿದೆ’ ಎಂದರು.
‘ರೈತು ಭರೋಸಾ’ ಯೋಜನೆ ಅನುಷ್ಠಾನದಲ್ಲಿ ಪಾರದರ್ಶಕತೆ ಕಾಪಾಡುವುದಕ್ಕಾಗಿ ರಚಿಸಿರುವ ಸಂಪುಟ ಉಪಸಮಿತಿ ನೇತೃತ್ವವನ್ನು ಉಪಮುಖ್ಯಮಂತ್ರಿ ಭಟ್ಟಿ ವಿಕ್ರಮಾರ್ಕ ವಹಿಸುವರು. ಈ ಉಪಸಮಿತಿಯು ಜುಲೈ 15ರ ಒಳಗಾಗಿ ತನ್ನ ವರದಿ ಸಲ್ಲಿಸಲಿದೆ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.