ADVERTISEMENT

ಕೋಚಿಂಗ್ ಸೆಂಟರ್‌ನಲ್ಲೇ ಐಎಎಸ್ ಆಕಾಂಕ್ಷಿಗಳ ದುರಂತ ಅಂತ್ಯ! ಘಟನೆ ಹೇಗಾಯಿತು?

ಉತ್ತರ ಪ್ರದೇಶದ ಶ್ರೇಯಾ ಯಾದವ್, ತೆಲಂಗಾಣದ ತಾನ್ಯಾ ಸೋನಿ ಹಾಗೂ ಕೇರಳದ ನವೀನ್ ದಾಲವೀನ್ ಮೃತರು.

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 28 ಜುಲೈ 2024, 13:50 IST
Last Updated 28 ಜುಲೈ 2024, 13:50 IST
<div class="paragraphs"><p>ಮೃತ ಶ್ರೇಯಾ ಹಾಗೂ ನವೀನ್</p></div>

ಮೃತ ಶ್ರೇಯಾ ಹಾಗೂ ನವೀನ್

   

ನವದೆಹಲಿ: ದೆಹಲಿಯ ಓಲ್ಡ್ ರಾಜಿಂದರ್ ನಗರದಲ್ಲಿರುವ ಐಎಎಸ್​ ತರಬೇತಿ ಕೇಂದ್ರಕ್ಕೆ ನೀರು ನುಗ್ಗಿ ಮೂವರು ವಿದ್ಯಾರ್ಥಿಗಳು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಘಟನೆ ಹೇಗಾಯಿತು? ಎಂಬುದನ್ನು ಪ್ರತ್ಯಕ್ಷದರ್ಶಿಗಳು ಮಾಧ್ಯಮಗಳ ಜೊತೆ ಮಾಹಿತಿ ಹಂಚಿಕೊಂಡಿದ್ದಾರೆ.

ಉತ್ತರ ಪ್ರದೇಶದ ಶ್ರೇಯಾ ಯಾದವ್, ತೆಲಂಗಾಣದ ತಾನ್ಯಾ ಸೋನಿ ಹಾಗೂ ಕೇರಳದ ನವೀನ್ ದಾಲವೀನ್ ಮೃತರು.

ADVERTISEMENT

ಶನಿವಾರ ಸಂಜೆ ದೆಹಲಿಯಲ್ಲಿ ಭಾರಿ ಮಳೆ ಸುರಿದಿತ್ತು. ಈ ವೇಳೆ ಓಲ್ಡ್ ರಾಜಿಂದರ್ ನಗರದ ರಾವುಸ್ ಐಎಎಸ್ ಕೋಚಿಂಗ್ ಸೆಂಟರ್‌ನ ನೆಲಮಹಡಿಗೆ ನೀರು ನುಗ್ಗಿತ್ತು. ಇದೇ ವೇಳೆ ಸೆಂಟರ್‌ನ ಗೇಟ್ ಕೂಡ ಕುಸಿದು ಬಿದ್ದಿತ್ತು.

ದುರಾದೃಷ್ಟವಶಾತ್ ಇದೇ ವೇಳೆ ಕೋಚಿಂಗ್ ಸೆಂಟರ್‌ಗೆ ವಿದ್ಯುತ್ ಸಂಪರ್ಕವೂ ಕಡಿತಗೊಂಡಿತ್ತು. ಆಗ ಗ್ರಂಥಾಲಯದಲ್ಲಿ ಇದ್ದ ನತದೃಷ್ಟರು ಹೊರಗೆ ಬರಲು ಪ್ರಯತ್ನ‍ಪಟ್ಟಿದ್ದಾರೆ. ಆದರೆ, ಗ್ರಂಥಾಲಯದ ಆಗಮನ, ನಿರ್ಗಮನಕ್ಕೆ ಬಯೋಮೆಟ್ರಿಕ್ ಇರುವುದರಿಂದ ವಿದ್ಯುತ್ ಇಲ್ಲದೇ ತಕ್ಷಣ ತೆರೆದುಕೊಂಡಿರಲಿಲ್ಲ. ಅವರು ಹೊರಗೆ ಬರುವಷ್ಟರಲ್ಲಿ ನೆಲಮಹಡಿಯಲ್ಲಿ ಭಾರಿ ನೀರು ತುಂಬಿಕೊಂಡಿದ್ದರಿಂದ ನೀರಿಗೆ ಇಳಿದು ಹೊರಬರುವಾಗ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಶವಗಳನ್ನು ಮರಣೋತ್ತರ ಪರೀಕ್ಷೆಗೆ ದೆಹಲಿಯ ರಾಮಮನೋಹರ ಲೂಹಿಯಾ ಆಸ್ಪತ್ರೆಗೆ ಸಾಗಿಸಲಾಗಿದ್ದು ಮೃತದೇಹಗಳನ್ನು ನೋಡಲು ಬಿಡುತ್ತಿಲ್ಲ ಎಂದು ಕುಟುಂಬದವರು ಆರೋಪಿಸಿದ್ದಾರೆ.

ಪ್ರಕರಣ ಸಂಬಂಧ ತರಬೇತಿ ಕೇಂದ್ರದ ಮಾಲೀಕ ಮತ್ತು ಸಮನ್ವಯಕಾರನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿರುವುದಾಗಿ ‘ಪಿಟಿಐ’ ವರದಿ ಮಾಡಿದೆ.

ದೆಹಲಿ ಮಹಾನಗರ ಪಾಲಿಕೆಯ (ಎಂಸಿಡಿ) ಮೇಯರ್‌ ಶೆಲ್ಲಿ ಒಬೆರಾಯ್ ಅವರು ದೆಹಲಿಯಾದ್ಯಂತ ಪಾಲಿಕೆ ವ್ಯಾಪ್ತಿಯಲ್ಲಿ ನೆಲಮಾಳಿಗೆಗಳಲ್ಲಿ ವಾಣಿಜ್ಯ ಚಟುವಟಿಕೆಗಳನ್ನು ನಡೆಸುತ್ತಿರುವ ಕೋಚಿಂಗ್ ಸೆಂಟರ್‌ಗಳ ಮಾಲೀಕರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಕಮಿಷನರ್‌ಗೆ ನಿರ್ದೇಶನ ನೀಡಿದ್ದಾರೆ.

ವಿದ್ಯಾರ್ಥಿಗಳ ಪ್ರತಿಭಟನೆ: ಘಟನೆ ನಡೆದ ಕೂಡಲೇ ಐಎಎಸ್​ ತರಬೇತಿ ಪಡೆಯುತ್ತಿದ್ದ ಆಕಾಂಕ್ಷಿಗಳ ಸಾವು ಖಂಡಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಎಎಪಿ ರಾಜ್ಯಸಭಾ ಸಂಸದೆ ಸ್ವಾತಿ ಮಾಲಿವಾಲ್ ಹಾಗೂ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದ್ದಾರೆ.

ತನಿಖೆಗೆ ಆದೇಶ: ಘಟನೆಯ ಕುರಿತು ತನಿಖೆ ಆರಂಭಿಸಿ 24 ಗಂಟೆಯೊಳಗೆ ವರದಿ ಸಲ್ಲಿಸುವಂತೆ ಸಚಿವೆ ಅತಿಶಿ ಮುಖ್ಯ ಕಾರ್ಯದರ್ಶಿ ನರೇಶ್ ಕುಮಾರ್ ಅವರಿಗೆ ಸೂಚಿಸಿದ್ದಾರೆ. ಈ ಘಟನೆ ಹೇಗೆ ಸಂಭವಿಸಿತು ಎಂಬುದರ ಕುರಿತು ತನಿಖೆ ನಡೆಸಲು ಮ್ಯಾಜಿಸ್ಟ್ರೇಟ್ ತನಿಖೆಗೆ ಆದೇಶಿಸಲಾಗಿದೆ ಎಂದು ಅತಿಶಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ರಾಹುಲ್ ಕಿಡಿ: ದೆಹಲಿಯ ಓಲ್ಡ್ ರಾಜಿಂದರ್ ನಗರ ಪ್ರದೇಶದಲ್ಲಿರುವ ಐಎಎಸ್​ ತರಬೇತಿ ಕೇಂದ್ರಕ್ಕೆ ನೀರು ನುಗ್ಗಿ ಮೂವರು ವಿದ್ಯಾರ್ಥಿಗಳು ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಸಂತಾಪ ಸೂಚಿಸಿದ್ದು, ಅಮಾಯಕರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಹೇಳಿದ್ದಾರೆ.

ಈ ಸಂಬಂಧ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಹಂಚಿಕೊಂಡಿರುವ ರಾಹುಲ್‌, ಸಂಸ್ಥೆಗಳ ಬೇಜವಾಬ್ದಾರಿತನದಿಂದಾಗಿ ಪ್ರತಿ ಹಂತದಲ್ಲೂ ಅಸುರಕ್ಷಿತ ನಿರ್ಮಾಣ, ಕಳಪೆ ನಗರ ಯೋಜನೆ ಪರಿಣಾಮ ಸಾಮಾನ್ಯರು, ಅಮಾಯಕರು ಜೀವ ಕಳೆದುಕೊಳ್ಳುತ್ತಿದ್ದಾರೆ ಎಂದು ಒತ್ತಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.