ADVERTISEMENT

ಗುಜರಾತ್‌: ಅಕ್ರಮ ಕಲ್ಲಿದ್ದಲು ಗಣಿಯಲ್ಲಿ ಉಸಿರುಗಟ್ಟಿ ಮೂವರು ಕಾರ್ಮಿಕರು ಸಾವು

ಪಿಟಿಐ
Published 14 ಜುಲೈ 2024, 12:45 IST
Last Updated 14 ಜುಲೈ 2024, 12:45 IST
   

ಸುರೇಂದ್ರನಗರ: ಗುಜರಾತ್‌ನ ಸುರೇಂದ್ರನಗರಲ್ಲಿರುವ ಅನಧಿಕೃತ ಕಲ್ಲಿದ್ದಲು ಗಣಿಯಲ್ಲಿ ಮೂವರು ಕಾರ್ಮಿಕರು ಉಸಿರುಗಟ್ಟಿ ಸಾವಿಗೀಡಾಗಿದ್ದಾರೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.

ಘಟನೆ ಸಂಬಂಧ ನಾಲ್ವರ ಮೇಲೆ ಉದ್ದೇಶಪೂರ್ವಕವಲ್ಲದ ಕೊಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಅವರ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಲಕ್ಷ್ಮಣ್ ದಭಿ (35), ಖೋಡಾಭಾಯ್ ಮಕ್ವನಾ (32) ಹಾಗೂ ವೀರಮ್ ಕೆರಾಲಿಯ (35) ಮೃತರು. ಸುರೇಂದ್ರನಗರ ಜಿಲ್ಲೆಯ ತಾನಾಗಢ ತಾಲ್ಲೂಕಿನ ಭೆಟ್ ಗ್ರಾಮದಲ್ಲಿರುವ ಗಣಿಯಲ್ಲಿ ಇವರು ಕೆಲಸ ಮಾಡುತ್ತಿದ್ದರು. ಶನಿವಾರ ಉಸಿರುಗಟ್ಟಿ ಮೃತಪಟ್ಟಿದ್ದಾರೆ ಎಂದು ಮುಲಿ ಮುಲಿ ಪೊಲೀಸ್ ಠಾಣೆ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ADVERTISEMENT

ಕೆಲಸದ ವೇಳೆ ಈ ಮೂವರು ಹೆಲ್ಮೆಟ್, ಮಾಸ್ಕ್ ಅಥವಾ ಇನ್ನಾವುದೇ ರಕ್ಷಣಾ ಪರಿಕರಗಳನ್ನು ಬಳಸಿರಲಿಲ್ಲ ಎಂದು ಅವರು ಹೇಳಿದ್ದಾರೆ.

ಗಣಿಯಲ್ಲಿ ಗುಂಡಿ ತೋಡುವ ವೇಳೆ ಅವರಿಗೆ ಯಾವುದೇ ರಕ್ಷಣಾ ಸಾಧನಗಳನ್ನು ನೀಡಲಾಗಿರಲಿಲ್ಲ. ಗುಂಡಿಯಲ್ಲಿ ಉತ್ಪತ್ತಿಯಾಗಿದ್ದ ಅನಿಲ ಸೇವಿಸಿ ಸಾವಿಗೀಡಾಗಿದ್ದಾರೆ ಎಂದು ಎಫ್‌ಐಆರ್‌ನಲ್ಲಿ ಹೇಳಲಾಗಿದೆ.

ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಸಾಗಿಸಲಾಗಿದೆ. ಜಶಾಭಾಯ್ ಕೆರಾಲಿಯಾ, ಜನಕ್ ಅನಿಯಾರಿಯಾ, ಕಿಮ್‌ಜೀ ಭಾಯ್‌ ಸರಾದಿಯಾ ಹಾಗೂ ಕಲ್ಪೇಶ್ ಪಾರ್ಮರ್ ಎಂಬವರ ಮೇಲೆ ದೂರು ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.