ರಾಯಪುರ: ಇತ್ತೀಚಿನ ಅಮೆರಿಕ ಪ್ರವಾಸದ ವೇಳೆ ತಮ್ಮ ಹೇಳಿಕೆ ಮೂಲಕ ಸಿಖ್ ಸಮುದಾಯಗಳ ಧಾರ್ಮಿಕ ಭಾವನೆಗೆ ಧಕ್ಕೆ ತಂದ ಆರೋಪದಡಿ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ಛತ್ತೀಸಗಢದಲ್ಲಿ ಮೂರು ಎಫ್ಐಆರ್ ದಾಖಲಾಗಿದೆ.
ರಾಜಧಾನಿ ರಾಯಪುರದ ಸಿವಿಲ್ ಲೈನ್ಸ್ ಪೊಲೀಸ್ ಠಾಣೆಯಲ್ಲಿ ಒಂದು ಎಫ್ಐಆರ್, ಬಿಲಾಸಪುರ ಜಿಲ್ಲೆಯ ಬಿಲಾಸಪುರ ಸಿವಿಲ್ ಲೈನ್ಸ್ ಪೊಲೀಸ್ ಠಾಣೆಯಲ್ಲಿ ಮತ್ತೊಂದು ಪ್ರಕರಣ ದಾಖಲಾಗಿದೆ. ಮೂರನೇ ಪ್ರಕರಣ ದುರ್ಗ್ ಜಿಲ್ಲೆಯ ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಬಿಜೆಪಿ ನಾಯಕರು ನೀಡಿರುವ ದೂರುಗಳ ಅನ್ವಯ ಎಫ್ಐಆರ್ ದಾಖಲಾಗಿವೆ.
ಈ ಎಲ್ಲವುದರಲ್ಲೂ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 299 (ಧಾರ್ಮಿಕ ನಂಬಿಕೆಗಳನ್ನು ಅವಮಾನಿಸುವ ದುರುದ್ದೇಶಪೂರಿತ ಕೃತ್ಯ) ಮತ್ತು 302 (ಉದ್ದೇಶಪೂರ್ವಕವಾಗಿ ಪದಗಳು, ಶಬ್ದಗಳು, ಸನ್ನೆಗಳು ಅಥವಾ ವಸ್ತುಗಳಿಂದ ಬೇರೊಬ್ಬರ ಧಾರ್ಮಿಕ ಭಾವನೆಗಳನ್ನು ನೋಯಿಸುವುದು) ಅಡಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಭಾರತದಲ್ಲಿ ಗುರುದ್ವಾರಗಳಿಗೆ ತೆರಳುವಾಗ ಸಿಖ್ಖರು ಟರ್ಬನ್ ಧರಿಸಲು ಅವಕಾಶ ನೀಡಲಾಗುತ್ತದೆಯೇ ಎಂದು ರಾಹುಲ್ ಪ್ರಶ್ನಿಸಿದ್ದರು. ರಾಹುಲ್ ಹೇಳಿಕೆಯು ಭಾರತದ ಸಿಖ್ಖರ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದೆ. ಎಂದು ರಾಯಪುರದಲ್ಲಿ ಬಿಜೆಪಿ ವಕ್ತಾರ ಅಮರಜಿತ್ ಸಿಂಗ್ ಛಾಬ್ರಾ ನೀಡಿರುವ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
‘ಇಡೀ ಜಗತ್ತಿನಲ್ಲಿ, ಭಾರತದಲ್ಲೂ ಸಿಖ್ಖರು ಗುರುದ್ವಾರಕ್ಕೆ ತೆರಳುವಾಗ ಟರ್ಬನ್ ಧರಿಸಿರುತ್ತಾರೆ. ಅವರಿಗೆ ಯಾವುದೇ ನಿರ್ಬಂಧ ವಿಧಿಸಿಲ್ಲ. ಪ್ರಧಾನಿ ಸಹ ಗುರುದ್ವಾರಕ್ಕೆ ತೆರಳುವಾಗ ಟರ್ಬನ್ ಧರಿಸುತ್ತಾರೆ. ರಾಹುಲ್ ಗಾಂಧಿಯವರ ಹೇಳಿಕೆ ಧಾರ್ಮಿಕ ಭಾವನೆಗೆ ಧಕ್ಕೆ ತರುವ ದುರುದ್ದೇಶದಿಂದ ಕೂಡಿದೆ’ಎಂದೂ ಅವರು ದೂರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.