ತಿರುವನಂತಪುರ: ಇಸ್ಲಾಮಿಕ್ ಸ್ಟೇಟ್ನ (ಐಎಸ್) ನೇಮಕಾತಿ ಪ್ರಕರಣದಲ್ಲಿ ಮೂವರನ್ನು ತಪ್ಪಿತಸ್ಥರೆಂದು ಕೊಚ್ಚಿಯ ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್ಐಎ) ವಿಶೇಷ ನ್ಯಾಯಾಲಯವು ಮಂಗಳವಾರ ತೀರ್ಪು ನೀಡಿದೆ.
ಉತ್ತರ ಕೇರಳದ ಕಣ್ಣೂರು ಜಿಲ್ಲೆಯವರಾದ ಮಿಧಿಲಾಜ್, ಅಬ್ದುಲ್ ರಜಾಕ್ ಮತ್ತು ಯು.ಕೆ. ಹಮ್ಜಾ ಅವರು ಕಾನೂನುಬಾಹಿರ ಚಟುವಟಿಕೆಗಳ ತಡೆಕಾಯ್ದೆ ಮತ್ತು ಭಾರತೀಯ ದಂಡ ಸಂಹಿತೆಯ ಅಡಿಯಲ್ಲಿ ತಪ್ಪಿತಸ್ಥರೆಂದು ಸಾಬೀತಾಗಿದೆ. ತಪ್ಪಿತಸ್ಥರಿಗೆ ಶುಕ್ರವಾರ ಶಿಕ್ಷೆ ಪ್ರಕಟವಾಗಲಿದೆ.
2017ರಲ್ಲಿ ಕಣ್ಣೂರಿನ ವಳಪಟ್ಟಣಂನಲ್ಲಿ ಎಸ್ಗೆ ನೇಮಕಾತಿ ನಡೆದಿದ್ದು, ಕಣ್ಣೂರಿನ ವಿವಿಧ ಭಾಗಗಳಿಂದ ಸುಮಾರು 15 ಮಂದಿಯನ್ನು ನೇಮಕ ಮಾಡಲಾಗಿತ್ತು ಎನ್ನಲಾಗಿದೆ.
ಆರಂಭದಲ್ಲಿ ಸ್ಥಳೀಯ ಪೊಲೀಸರು ಈ ಸಂಬಂಧ ಪ್ರಕರಣವನ್ನು ದಾಖಲಿಸಿಕೊಂಡಿದ್ದರು. ನಂತರ ಎನ್ಐಎ ಪ್ರಕರಣವನ್ನು ಕೈಗೆತ್ತಿಗೊಂಡಿತ್ತು.
ಆರೋಪಿಗಳು ತಾವು ಐಎಸ್ ಸಿದ್ಧಾಂತಗಳನ್ನು ಅನುಸರಿಸುತ್ತಿಲ್ಲ ಹಾಗೂ ಹಲವು ವರ್ಷಗಳಿಂದ ಜೈಲಿನಲ್ಲಿರುವ ಕಾರಣ ಶಿಕ್ಷೆಯಲ್ಲಿ ಸಡಿಲಿಕೆ ನೀಡಬೇಕೆಂದು ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.
ಹಲವು ವರ್ಷಗಳಿಂದ ಕೇರಳದಲ್ಲಿನ 100ಕ್ಕೂ ಹೆಚ್ಚು ಮಹಿಳೆಯರು ಮತ್ತು ಪುರುಷರು ಐಎಸ್ಗೆ ಸೇರಲು ಗಡಿ ದಾಟಿದ್ದ ವರದಿಯಾಗಿದೆ. ಇವರಲ್ಲಿ ಹಲವರು ಎನ್ಕೌಂಟರ್ನಲ್ಲಿ ಸಾವಿಗೀಡಾಗಿದ್ದಾರೆ ಎಂದೂ ವರದಿಗಳು ಹೇಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.