ಚೆನ್ನೈ: ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯಿಂದ(ನೀಟ್) ರಾಜ್ಯಕ್ಕೆ ವಿನಾಯಿತಿ ನೀಡುವಂತೆ ಕೇಂದ್ರವನ್ನು ಒತ್ತಾಯಿಸುವ ನಿರ್ಣಯವನ್ನು ತಮಿಳುನಾಡು ವಿಧಾನಸಭೆಯಲ್ಲಿ ಸರ್ವಾನುಮತದಿಂದ ಅಂಗೀಕರಿಸಲಾಗಿದೆ.
ಪ್ಲಸ್–2 ಪರೀಕ್ಷೆ ಅಂಕಗಳ ಆಧಾರದ ಮೇಲೆಯೇ ವಿದ್ಯಾರ್ಥಿಗಳಿಗೆ ಮೆಡಿಕಲ್ ಕೋರ್ಸ್ಗಳಿಗೆ ಪ್ರವೇಶ ನೀಡಬೇಕೆಂದು ನಿರ್ಣಯದಲ್ಲಿ ಒತ್ತಾಯಿಸಲಾಗಿದೆ.
ಬಿಜೆಪಿ ಸದಸ್ಯರ ವಿರೋಧ ಮತ್ತು ಸಭಾತ್ಯಾಗದ ನಡುವೆ ರಾಷ್ಟ್ರೀಯ ವೈದ್ಯಕೀಯ ಆಯೋಗದ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಪ್ರಶ್ನೆಪತ್ರಿಕೆ ಸೋರಿಕೆ ಅಕ್ರಮ ಕೇಳಿಬಂದಿರುವ ನೀಟ್ ಪರೀಕ್ಷೆಯನ್ನು ರದ್ದು ಮಾಡಬೇಕು ಎಂದು ಒತ್ತಾಯಿಸಲಾಗಿದೆ.
ಸಿಎಂ ಎಂ.ಕೆ. ಸ್ಟಾಲಿನ್ ಮಂಡಿಸಿದ ನಿರ್ಣಯವನ್ನು ಬಿಜೆಪಿಯ ಮಿತ್ರ ಪಕ್ಷ ಪಿಎಂಕೆ ಬೆಂಬಲಿಸಿದೆ.
ಈ ಪರೀಕ್ಷೆಯು ತಾರತಮ್ಯದಿಂದ ಕೂಡಿದ್ದು, ಗ್ರಾಮೀಣ ಮತ್ತು ಬಡ ವಿದ್ಯಾರ್ಥಿಗಳನ್ನು ವೈದ್ಯಕೀಯ ವಿದ್ಯಾಭ್ಯಾಸದಿಂದ ವಂಚಿತರನ್ನಾಗಿ ಮಾಡುತ್ತದೆ. ಅಲ್ಲದೆ, ಪ್ಲಸ್–2 ಅಂಕಗಳ ಆಧಾರದ ಮೇಲೆ ವೈದ್ಯಕೀಯ ಕೋರ್ಸ್ಗೆ ಪ್ರವೇಶ ಕೊಡುವ ರಾಜ್ಯಗಳ ಹಕ್ಕನ್ನು ಉಲ್ಲಂಘಿಸುತ್ತದೆ ಎಂದು ಸ್ಟಾಲಿನ್ ವಾದಿಸಿದ್ದಾರೆ.
ನೀಟ್ ಪರೀಕ್ಷೆಯಿಂದ ಹಲವು ಅನುಕೂಲವಿದ್ದು, ಅದು ರಾಜ್ಯಕ್ಕೆ ಅತ್ಯವಶ್ಯಕ ಎಂದು ಬಿಜೆಪಿ ನಾಯಕ ನೈನರ್ ನಾಗೇಂದ್ರನ್ ತಿಳಿಸಿದ್ದಾರೆ.
‘ನೀಟ್ ಅತ್ಯಂತ ಅವಶ್ಯಕ. ನೀಟ್ ವಿರುದ್ಧದ ವಿಧಾನಸಭೆಯ ನಿರ್ಣಯವು ಸ್ವೀಕಾರಾರ್ಹವಲ್ಲ. ನಾವು ಸಭಾತ್ಯಾಗ ಮಾಡುತ್ತೇವೆ’ ಎಂದು ಹೇಳಿದ ನಾಗೇಂದ್ರನ್ ಸದನದಿಂದ ಹೊರನಡೆದಿದ್ದಾರೆ.
ವಿರೋಧ ಪಕ್ಷ ಎಐಎಡಿಎಂಕೆಯ ಯಾವೊಬ್ಬ ಸದಸ್ಯರೂ ಸದನದಲ್ಲಿ ಹಾಜರಿರಲಿಲ್ಲ. ವಿಷಯುಕ್ತ ಮದ್ಯ ಸೇವನೆ ಪ್ರಕರಣಕ್ಕೆ ಸಂಬಮಧಿಸಿದಂತೆ ಸದನದಲ್ಲಿ ಗದ್ದಲ ಎಬ್ಬಿಸಿದ್ದರಿಂದ ಎಐಎಡಿಎಂಕೆಯ ಎಲ್ಲ ಸದಸ್ಯರನ್ನು ಅಮಾನತು ಮಾಡಲಾಗಿದೆ.
ಬಡವರು ಮತ್ತು ಗ್ರಾಮೀಣ ವಿದ್ಯಾರ್ಥಿಗಳಿಗೆ ವೈದ್ಯಕೀಯ ಶಿಕ್ಷಣಕ್ಕೆ ಪ್ರವೇಶ ನಿರಾಕರಿಸಿರುವ ಮೂಲಕ ನೀಟ್, ಗ್ರಾಮೀಣ ಮತ್ತು ಹಿಂದುಳಿದ ಪ್ರದೇಶಗಳಲ್ಲಿ ವೈದ್ಯಕೀಯ ಸೇವೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ ಎಂದು ಸ್ಟಾಲಿನ್ ಹೇಳಿದ್ದಾರೆ.
‘2017ರಲ್ಲಿ ನೀಟ್ ಪರೀಕ್ಷೆ ಕಡ್ಡಾಯ ಮಾಡಿದಾಗಿನಿಂದ ಡಿಎಂಕೆ ಇದನ್ನು ವಿರೋಧಿಸುತ್ತಿದೆ. ನೀಟ್ ರದ್ಧತಿಗೆ ಕೋರಿ ಬೃಹತ್ ಸಹಿ ಸಂಗ್ರಹ ಅಭಿಯಾನವನ್ನೂ ಹಮ್ಮಿಕೊಂಡಿದ್ದೆವು’ಎಂದೂ ಅವರು ಹೇಳಿದ್ದಾರೆ.
ನೀಟ್ ಪರೀಕ್ಷೆಯಲ್ಲಿ ಅಕ್ರಮ ನಡೆದಿದ್ದು, ಹಲವು ರಾಜ್ಯಗಳಲ್ಲಿ ಹಗರಣದ ಬಗ್ಗೆ ಕೇಳಿಬಂದಿದ್ದು, ಕೆಲವೆಡೆ ಕೃಪಾಂಕ ನೀಡಿ ಬಳಿಕ ಹಿಂಪಡೆಯಲಾಗಿದೆ. ಈ ಸಂಬಂಧ ಸಿಬಿಐ ತನಿಖೆಗೆ ಸಹ ಆದೇಶಿಸಲಾಗಿದೆ. ಹೀಗಾಗಿ, ಹಲವು ರಾಜ್ಯಗಳು ನೀಟ್ ಪರೀಕ್ಷೆಯನ್ನು ವಿರೋಧಿಸುತ್ತಿವೆ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.