ಅಗರ್ತಲಾ: ತ್ರಿಪುರಾದ ಸುಮಾರು 4.15 ಲಕ್ಷ ಕುಟುಂಬಗಳಿಗೆ ತಲಾ ₹5 ಲಕ್ಷ ಆರೋಗ್ಯ ವಿಮೆ ಒದಗಿಸುವ ‘ಸಾರ್ವತ್ರಿಕ ಆರೋಗ್ಯ ವಿಮಾ ಯೋಜನೆ’ಗೆ ರಾಜ್ಯದ ಮುಖ್ಯಮಂತ್ರಿ ಮಾಣಿಕ್ ಸಾಹಾ ಅವರು ಗುರುವಾರ ಚಾಲನೆ ನೀಡಿದರು.
ಮುಖ್ಯಮಂತ್ರಿ ಜನ ಆರೋಗ್ಯ ಯೋಜನೆ (ಸಿಎಂ–ಜಯ್) ಅಡಿ ಈ ಸೌಲಭ್ಯವನ್ನು ನೀಡಲಾಗಿದೆ. ಸರ್ಕಾರಿ ನೌಕರರಿಗೂ ಈ ಯೋಜನೆಯನ್ನು ವಿಸ್ತರಿಸಲಾಗಿದೆ.
‘ಆರೋಗ್ಯ ತುರ್ತು ಪರಿಸ್ಥಿತಿ ಉಂಟಾದರೆ ಜನರು ಅಸಹಾಯಕರಾಗುತ್ತಾರೆ. ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ (ಪಿಎಂ–ಜಯ್) ಅಡಿ ಹಲವರು ವಿಮೆ ಸೌಲಭ್ಯ ಹೊಂದಿಲ್ಲ. ಅಂಥವರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಪಿಎಂ– ಜಯ್ಗೆ ಪರ್ಯಾಯವಾಗಿ ರಾಜ್ಯದಲ್ಲಿ ಸಿಎಂ– ಜಯ್ ಜಾರಿ ಮಾಡಲಾಗಿದೆ’ ಎಂದು ಸಾಹಾ ತಿಳಿಸಿದರು.
ಖಾಸಗಿ ಅಥವಾ ಸರ್ಕಾರಿ ಆಸ್ಪತ್ರೆಗೆ ದಾಖಲಾಗುವ ರೋಗಿಗೆ 15 ದಿನಗಳ ವರೆಗೆ ಉಚಿತ ಔಷಧ ನೀಡಲಾಗುವುದು. ರೋಗಿ ಆಸ್ಪತ್ರೆಯಿಂದ ಬಿಡುಗಡೆಯಾದ ಬಳಿಕವೂ ಉಚಿತ ಔಷಧ ಒದಗಿಸಲಾಗುವುದು. ಚಿಕಿತ್ಸೆಯ ಸಂಪೂರ್ಣ ಪ್ರಕ್ರಿಯೆಯು ನಗದುರಹಿತವಾಗಿರಲಿದೆ ಎಂದು ಸಾಹಾ ವಿವರಿಸಿದರು.
ಯೋಜನೆ ಜಾರಿಗೊಂಡ ಕೆಲದಿನಗಳು ಸಮಸ್ಯೆಗಳು ತಲೆದೂರಬಹುದು. ಆದರೆ, ಅವುಗಳನ್ನು ಸರಿಪಡಿಸಿ ಫಲಾನುಭವಿಗಳಿಗೆ ಯೋಜನೆ ತಲುಪುವಂತೆ ಮಾಡಲಾಗುವುದು ಎಂದರು.
ಸಾರ್ವತ್ರಿಕ ಆರೋಗ್ಯ ವಿಮಾ ಯೋಜನೆ ಪರಿಚಯಿಸಿರುವ ಮೊದಲ ರಾಜ್ಯ ‘ತ್ರಿಪುರಾ’ ಎಂದು ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರದ ಹೆಚ್ಚುವರಿ ಮುಖ್ಯ ಕಾರ್ಯಕಾರಿ ಅಧಿಕಾರಿ ಬಸಂತ್ ಗರ್ಗ್ ಅವರು ಈ ವೇಳೆ ಹೇಳಿದರು.
ಈ ಯೋಜನೆಗಾಗಿ ರಾಜ್ಯ ಬಜೆಟ್ನಲ್ಲಿ ₹69 ಕೋಟಿ ಅನುದಾನ ನೀಡಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.