ನವದೆಹಲಿ: ಉತ್ತರಕಾಶಿಯ ಸುರಂಗದಲ್ಲಿ ಸಿಲುಕಿದ್ದ ಕಾರ್ಮಿಕರ ರಕ್ಷಣಾ ಕಾರ್ಯಾಚರಣೆಯ ವಿಷಯ ಮಂಗಳವಾರ ರಾತ್ರಿ ನಡೆದ ಕೇಂದ್ರದ ಸಚಿವ ಸಂಪುಟ ಸಭೆಯಲ್ಲಿ ಚರ್ಚೆಯಾಯಿತು. ಪ್ರಧಾನಿ ನರೇಂದ್ರ ಮೋದಿಯವರು ಅತ್ಯಂತ ಭಾವುಕರಾಗಿದ್ದರು ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ಹೇಳಿದ್ದಾರೆ.
ಸಂಪುಟ ನಿರ್ಣಯಗಳ ಬಗ್ಗೆ ಮಾಧ್ಯಮಗಳಿಗೆ ವಿವರಿಸಿದ ಅವರು, ಈ ಕಾರ್ಯಾಚರಣೆಗೆ ಸಂಪೂರ್ಣ ಸರ್ಕಾರದ ಪ್ರಯತ್ನ ಇತ್ತು. ಪ್ರತಿಯೊಂದು ಜೀವ ರಕ್ಷಣೆಗೆ ಬೇಕಾದ ಎಲ್ಲ ಪ್ರಯತ್ನ ಮಾಡಲಾಯಿತು ಎಂದು ಹೇಳಿದರು.
ಚುನಾವಣಾ ಪ್ರಚಾರದ ಮಧ್ಯೆಯೂ ಪ್ರಧಾನಿ ಮೋದಿ, ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಸೇರಿದಂತೆ ವಿವಿಧ ಮೂಲಗಳಿಂದ ದಿನಕ್ಕೆ ಎರಡು ಬಾರಿ ರಕ್ಷಣಾ ಕಾರ್ಯಾಚರಣೆಯ ಅಪ್ಡೇಟ್ ಪಡೆಯುತ್ತಿದ್ದರು.
ಉತ್ತರಕಾಶಿಯ ಸಿಲ್ಕ್ಯಾರಾ ಸುರಂಗದಲ್ಲಿ ಸಿಲುಕಿದ್ದ 41 ಕಾರ್ಮಿಕರನ್ನು ಮಂಗಳವಾರ ರಾತ್ರಿ ಯಶಸ್ವಿ ಕಾರ್ಯಾಚರಣೆ ಮೂಲಕ ಹೊರಗೆ ಕರೆತರಲಾಗಿತ್ತು.
ಕಾರ್ಯಾಚರಣೆ ಬಳಿಕ ಸುಧಾರಿಸಿಕೊಂಡ ಕಾರ್ಮಿಕರ ಜೊತೆ ಪ್ರಧಾನಿ ಮೋದಿ ವರ್ಚುವಲ್ ಸಂವಾದ ಸಹ ನಡೆಸಿದ್ದಾರೆ.
ನವೆಂಬರ್ 12ರಂದು ಚಾರ್ ಧಾಮ್ ಮಾರ್ಗದ ಸುರಂಗದ ಒಂದು ಭಾಗ ಕುಸಿದಿದ್ದರಿಂದ ಅಂದಿನಿಂದ 41 ಕಾರ್ಮಿಕರು ಸುರಂಗದಲ್ಲಿ ಸಿಲುಕಿದ್ದರು. 6 ಇಂಚಿನ ಪೈಪ್ ಮೂಲಕ ನೀರು, ಆಹಾರ, ಅಗತ್ಯ ವಸ್ತುಗಳನ್ನು ಸರಬರಾಜು ಮಾಡಲಾಗಿತ್ತು. 17 ದಿನಗಳ ಸತತ ಕಾರ್ಯಾಚರಣೆಯಲ್ಲಿ 60 ಮೀಟರ್ ರಂಧ್ರ ಕೊರೆದು ಪೈಪ್ ಅಳವಡಿಸಿ ಕಾರ್ಮಿಕರನ್ನು ಹೊರಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.