ಗಡ್ಚಿರೋಲಿ: ತಮ್ಮ ತಲೆಗೆ ಒಟ್ಟು ₹16 ಲಕ್ಷ ಬಹುಮಾನ ಘೋಷಣೆಯಾಗಿದ್ದ ಇಬ್ಬರು ಮಹಿಳಾ ನಕ್ಸಲರು ಮಹಾರಾಷ್ಟ್ರದ ಗಡ್ಚಿರೋಲಿ ಜಿಲ್ಲೆಯಲ್ಲಿ ಪೊಲೀಸರಿಗೆ ಶರಣಾಗಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಶರಣಾದ ನಕ್ಸಲರನ್ನು ಬಾಲಿ ಅಲಿಯಾಸ್ ರಾಮಬಟ್ಟಿ ಅಲಿಯಾಸ್ ಝರೀನಾ ನರೋಟೆ(28), ಶಶಿಕಲಾ ಅಲಿಯಾಸ್ ಚಂದ್ರಕಲಾ ಅಲಿಯಾಸ್ ಮನಿಶಾ ಉಯಿಕೆ(29) ಎಂದು ಗುರುತಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಶರಣಾದ ಇಬ್ಬರು ಸಹ ಸಿಪಿಐ(ಮಾವೋವಾದಿ) ಸಂಘಟನೆಗೆ ಸೇರಿದವರು. ಇಬ್ಬರ ತಲೆಗೆ ತಲಾ ₹8 ಲಕ್ಷ ಬಹುಮಾನ ಘೋಷಿಸಲಾಗಿತ್ತು.
ಜಿಲ್ಲೆಯ ಕುಖ್ಯಾತ ನಕ್ಸಲ್ ಗಿರಿಧರ್ ಮತ್ತು ಅವರ ಪತ್ನಿ ಸಂಗೀತಾ ಉಸೆಂಡಿ ಪೊಲೀಸರಿಗೆ ಶರಣಾದ ಒಂದು ವಾರದ ಬೆನ್ನಲ್ಲೇ ಮತ್ತಿಬ್ಬರು ನಕ್ಸಲರು ಶರಣಾಗಿದ್ದಾರೆ.
‘ಒಂದು ಬೆಂಕಿ ಹಚ್ಚಿದ್ದ ಪ್ರಕರಣ, ಮತ್ತೊಂದು ಅಪಹರಣ ಪ್ರಕರಣ ಮತ್ತು 9 ಇತರೆ ಅಪರಾಧ ಪ್ರಕರಣಗಳು ಸೇರಿ ನರೋಟೆ ವಿರುದ್ಧ ಒಟ್ಟು 21 ಪ್ರಕರಣಗಳಿದ್ದರೆ, ಉಯಿಕೆ ವಿರುದ್ಧ 8 ಪ್ರಕರಣಗಳಿವೆ. ಇದರಲ್ಲಿ 6 ಎನ್ಕೌಂಟರ್ಗೆ ಸಂಬಂಧಿಸಿದ್ದವುಗಳಾಗಿವೆ’ಎಂದು ಅಧಿಕಾರಿಗಳು ತಿಳಿಸಿದ್ದಾರೆ.
2005ರಿಂದ ಜಾರಿಯಲ್ಲಿರುವ ಶರಣಾಗತಿ ಮತ್ತು ಪುನರ್ವಸತಿ ನೀತಿ ಅನ್ವಯ ಇಬ್ಬರಿಗೂ ತಲಾ ₹5 ಲಕ್ಷ ಸಿಗಲಿದೆ. ಹಿಂಸಾಚಾರ ಬಿಟ್ಟು ಶರಣಾಗುವ ಎಲ್ಲರಿಗೂ ನೆರವು ಸಿಗಲಿದೆ ಎಂದೂ ಎಸ್ಪಿ ತಿಳಿಸಿದ್ದಾರೆ.
ನಕ್ಸಲ್ ನಿಗ್ರಹ ಕಾರ್ಯಾಚರಣೆ ತೀವ್ರಗೊಳಿಸಿರುವ ಹಿನ್ನೆಲೆಯಲ್ಲಿ 2022ರಲ್ಲಿ 19 ಮಂದಿ ಕುಖ್ಯಾತ ನಕ್ಸಲರು ಶರಣಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.