ADVERTISEMENT

ಮಾನಹಾನಿಕರ ಆರೋಪ: ಅಣ್ಣಾಮಲೈಗೆ ನೋಟಿಸ್‌ ನೀಡಿದ ಉದಯನಿಧಿ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2023, 16:34 IST
Last Updated 19 ಏಪ್ರಿಲ್ 2023, 16:34 IST
ಉದಯನಿಧಿ ಸ್ಟಾಲಿನ್‌
ಉದಯನಿಧಿ ಸ್ಟಾಲಿನ್‌   

ಚೆನ್ನೈ: ತಮಿಳುನಾಡು ಕ್ರೀಡಾ ಸಚಿವ ಮತ್ತು ಡಿಎಂಕೆ ಯುವ ಘಟಕದ ಕಾರ್ಯದರ್ಶಿ ಉದಯನಿಧಿ ಸ್ಟಾಲಿನ್ ಅವರು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಅಣ್ಣಾಮಲೈ ಅವರಿಗೆ ಬುಧವಾರ ಲೀಗಲ್‌ ನೋಟಿಸ್‌ ಕಳುಹಿಸಿದ್ದಾರೆ.

‘‌ನಮ್ಮ ವಿರುದ್ಧ ಮಾಡಿರುವ ಮಾನಹಾನಿಕರ ಆರೋಪಗಳಿಗಳಿಗೆ ಸಂಬಂಧಿಸಿದಂತೆ 48 ಗಂಟೆಗಳಲ್ಲಿ ಸಾರ್ವಜನಿಕವಾಗಿ ಬೇಷರತ್‌ ಕ್ಷಮೆ ಯಾಚಿಸಬೇಕು. ಇಲ್ಲದಿದ್ದರೆ ನಿಮ್ಮ ವಿರುದ್ಧ ಸೂಕ್ತ ಸಿವಿಲ್ ಮತ್ತು ಕ್ರಿಮಿನಲ್ ಮೊಕದ್ದಮೆ ಹೂಡಲಾಗುವುದು’ ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ.

ಏಪ್ರಿಲ್ 14 ರಂದು 'ಡಿಎಂಕೆ ಫೈಲ್ಸ್' ಬಿಡುಗಡೆಯ ಸಂದರ್ಭದಲ್ಲಿ ಅಣ್ಣಾಮಲೈ ಅವರು ಉದಯನಿಧಿ ಮತ್ತು ರೆಡ್ ಗಿಯಾಂಟ್‌ ಪ್ರೊಡಕ್ಷನ್ ಹೌಸ್ ವಿರುದ್ಧ ಮಾನಹಾನಿಕರ ಆರೋಪಗಳನ್ನು ಮಾಡಿದ್ದಾರೆ ಎಂದು ಡಿಎಂಕೆ ಸಂಸದ ಮತ್ತು ಹಿರಿಯ ವಕೀಲ ಪಿ. ವಿಲ್ಸನ್ ಕಳುಹಿಸಿರುವ ಲೀಗಲ್ ನೋಟಿಸ್‌ನಲ್ಲಿ ಆರೋಪಿಸಲಾಗಿದೆ.

ADVERTISEMENT

‘ಇದಲ್ಲದೆ, ನೀವು ಮಾಡಿರುವ ಆರೋಪಗಳು ದುರುದ್ದೇಶಪೂರಿತವಾಗಿದ್ದು, ಸತ್ಯದಿಂದ ದೂರವಿವೆ ಎಂದು ನಿಮಗೆ ಚೆನ್ನಾಗಿ ತಿಳಿದಿದೆ. ಈ ಸಂದರ್ಭ, ನೀವು ಮಾಡಿದಂತಹ ಮಾನಹಾನಿಗೆ ಕಾನೂನಿನ ಕ್ರಮ ಜರುಗಿಸಬಹುದು. ಆದ್ದರಿಂದ ನಮ್ಮ ಕಕ್ಷಿದಾರರ ಒಳ್ಳೆಯ ಹೆಸರು ಮತ್ತು ಖ್ಯಾತಿಗೆ ಹಾನಿಯಾಗಿದ್ದು, ₹ 50 ಕೋಟಿ ಮಾನಹಾನಿ ಪರಿಹಾರ ಪಾವತಿಸಲು ನೀವು ಜವಾಬ್ದಾರರಾಗಿರುತ್ತೀರಿ’ ಎಂದೂ ನೋಟಿಸ್‌ನಲ್ಲಿ ತಿಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.