ವಿಶ್ವಸಂಸ್ಥೆ: ವಿಶ್ವಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಭಾರತ ಸೇನೆಯ ನಿವೃತ್ತ ಅಧಿಕಾರಿ ಕರ್ನಲ್ ವೈಭವ್ ಅನಿಲ್ ಕಾಳೆ ಅವರ ಸಾವಿಗೆ ಸಂತಾಪ ವ್ಯಕ್ತಪಡಿಸಿ, ಭಾರತದ ಬಳಿ ಕ್ಷಮೆಯಾಚಿಸಿರುವ ವಿಶ್ವಸಂಸ್ಥೆ ಘಟನೆಯ ಬಗ್ಗೆ ತನಿಖೆ ಆರಂಭಿಸಿದೆ.
‘ಭಾರತದ ಕೊಡುಗೆಯನ್ನು ನಾವು ಗೌರವಿಸುತ್ತೇವೆ. ಭೀಕರ ದಾಳಿಯ ಬಗ್ಗೆ ಮಾಹಿತಿ ಸಂಗ್ರಹಿಸಲು ಸತ್ಯಶೋಧನಾ ಸಮಿತಿ ರಚಿಸಲಾಗಿದೆ. ಘಟನೆ ಹೇಗೆ? ಮತ್ತು ಯಾಕೆ? ಸಂಭವಿಸಿತು ಎಂಬ ಬಗ್ಗೆ ಇಸ್ರೇಲ್ ರಕ್ಷಣಾ ಪಡೆಯಿಂದ ಮಾಹಿತಿ ಪಡೆಯಲಾಗುತ್ತಿದೆ’ ಎಂದು ವಿಶ್ವಸಂಸ್ಥೆಯ ಕಾರ್ಯದರ್ಶಿಯವರ ಸಹ ವಕ್ತಾರ ಫರ್ಹಾನ್ ಹಕ್ ಅವರು ತಿಳಿಸಿದ್ದಾರೆ.
ಸೋಮವಾರ ಗಾಜಾದ ರಫಾದಲ್ಲಿ ವಾಹನದಲ್ಲಿ ಪ್ರಯಾಣಿಸುತ್ತಿದ್ದ ವೇಳೆ ನಡೆದ ಬಾಂಬ್ ದಾಳಿಯಲ್ಲಿ ಕಾಳೆ ಮೃತಪಟ್ಟಿದ್ದಾರೆ.
ಭಾರತದಿಂದ ಸಂತಾಪ
ನವದೆಹಲಿ: ಕರ್ನಲ್ ವೈಭವ್ ಅನಿಲ್ ಕಾಳೆ ಸಾವಿಗೆ ಭಾರತದ ವಿದೇಶಾಂಗ ಇಲಾಖೆಯೂ ಸಂತಾಪ ವ್ಯಕ್ತಪಡಿಸಿದೆ.
‘ನ್ಯೂಯಾರ್ಕ್, ಟೆಲ್ ಅವಿವಾ ಮತ್ತು ರಮಲ್ಲಾದಲ್ಲಿರುವ ಅಧಿಕಾರಿಗಳು ಕಾಳೆ ಅವರ ಶವವನ್ನು ತರಲು ಸಹಾಯ ಮಾಡುತ್ತಿದ್ದಾರೆ ಮತ್ತು ಘಟನೆಯ ಬಗ್ಗೆ ತನಿಖೆ ನಡೆಸುವ ಸಲುವಾಗಿ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದೇವೆ’ ಎಂದು ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.