ADVERTISEMENT

ಸಂಸತ್ತು ಪಕ್ಷಕ್ಕಾಗಿ ಅಲ್ಲ, ಜನರಿಗಾಗಿ ಇದೆ: ವಿಪಕ್ಷಗಳನ್ನು ಉದ್ದೇಶಿಸಿ ಪ್ರಧಾನಿ

​ಪ್ರಜಾವಾಣಿ ವಾರ್ತೆ
Published 22 ಜುಲೈ 2024, 16:20 IST
Last Updated 22 ಜುಲೈ 2024, 16:20 IST
ಪ್ರಧಾನಿ ನರೇಂದ್ರ ಮೋದಿ ಅವರು ಮುಂಗಾರು ಅಧಿವೇಶನದ ಮೊದಲ ದಿನವಾದ ಸೋಮವಾರದಂದು ಸುದ್ದಿಗಾರರ ಎದುರು ಮಾತನಾಡಿದರು  –ಪಿಟಿಐ ಚಿತ್ರ
ಪ್ರಧಾನಿ ನರೇಂದ್ರ ಮೋದಿ ಅವರು ಮುಂಗಾರು ಅಧಿವೇಶನದ ಮೊದಲ ದಿನವಾದ ಸೋಮವಾರದಂದು ಸುದ್ದಿಗಾರರ ಎದುರು ಮಾತನಾಡಿದರು  –ಪಿಟಿಐ ಚಿತ್ರ   

ನವದೆಹಲಿ: ‘ಸಂಸತ್ತು ದೇಶಕ್ಕಾಗಿ ಇದೆಯೇ ಹೊರತು ಪಕ್ಷಕ್ಕಾಗಿ ಅಲ್ಲ. ಅದು 140 ಕೋಟಿ ಭಾರತೀಯರಿಗೆ ಸೇರಿದೆ. ಆದರೆ, ಕೆಲ ಪಕ್ಷಗಳು ತಮ್ಮ ರಾಜಕೀಯ ವೈಫಲ್ಯವನ್ನು ಮುಚ್ಚಿ ಹಾಕಲು ಸಂಸತ್‌ ಅನ್ನು ದುರುಪಯೋಗಪಡಿಸಿಕೊಳ್ಳುತ್ತಿವೆ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ವಿರೋಧ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು.

ಸಂಸತ್ತಿನ ಮುಂಗಾರು ಅಧಿವೇಶನ ಆರಂಭವಾಗುವುದಕ್ಕೂ ಮುನ್ನ ಸುದ್ದಿಗಾರರ ಜತೆ ಮಾತನಾಡಿದ ಅವರು, ’ಹಿಂದಿನ ಅಧಿವೇಶನದಲ್ಲಿ ರಾಷ್ಟ್ರಪತಿ ಅವರ ಭಾಷಣದ ವಂದನಾ ನಿರ್ಣಯದ ಮೇಲಿನ ಚರ್ಚೆ ವೇಳೆ ವಿಪಕ್ಷಗಳ ಸದಸ್ಯರು ಗದ್ದಲ ಎಬ್ಬಿಸಿದ್ದರು. ಇದನ್ನು ಉಲ್ಲೇಖಿಸಿದ ಅವರು, ‘140 ಕೋಟಿ ಜನರ ಸೇವೆ ಸಲ್ಲಿಸಲು ಆಯ್ಕೆ ಆದ ಸರ್ಕಾರ ಮತ್ತು ಪ್ರಧಾನಿಯ ಧ್ವನಿ ಹತ್ತಿಕ್ಕಲು ವಿಪಕ್ಷಗಳು ಪ್ರಯತ್ನಿಸಿದ್ದನ್ನು ನೀವು ನೋಡಿದ್ದೀರ. ಪ್ರಜಾಪ್ರಭುತ್ವದಲ್ಲಿ ಇದಕ್ಕೆಲ್ಲ ಜಾಗವಿಲ್ಲ’ ಎಂದರು.

‘ಮಂಗಳವಾರ ಕೇಂದ್ರ ಬಜೆಟ್‌ ಮಂಡಿಸಲಾಗುವುದು. ದೇಶದ ಮುಂದಿನ ಐದು ವರ್ಷಗಳ ಭವಿಷ್ಯಕ್ಕೆ ಅದು ದಿಕ್ಸೂಚಿ ಆಗಲಿದೆ. ಅಲ್ಲದೇ, 2047ರ ಒಳಗೆ ದೇಶವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿಸುವ ಗುರಿ ಹೊತ್ತ ‘ವಿಕಸಿತ ಭಾರತ’ ಯೋಜನೆಗೂ ಅಡಿಪಾಯ ಹಾಕಲಿದೆ’ ಎಂದರು.

ADVERTISEMENT

 ‘ಜನವರಿ ನಂತರ ನಾವು ಲೋಕಸಭೆ ಚುನಾವಣೆಗೆ ಸೆಣಸಿದ್ದೇವೆ. ಜನರಿಗೆ ಏನು ಹೇಳಬೇಕಿತ್ತೋ ಅದನ್ನು ಹೇಳಿ ಮುಗಿಸಿದ್ದೇವೆ. ನಾವು ಪ್ರತಿನಿಧಿಸುವ ಪಕ್ಷಗಳಿಗಾಗಿ ಹೋರಾಟ ಮಾಡಿದ್ದೇವೆ. ಜನಾದೇಶವೂ ಸಿಕ್ಕಿದೆ. ಮುಂದಿನ ಐದು ವರ್ಷಗಳು ದೇಶಕ್ಕಾಗಿ ಹೋರಾಡುವ ಜವಾಬ್ದಾರಿ ಎಲ್ಲಾ ಸಂಸದರ ಮೇಲಿದೆ’ ಎಂದು ಹೇಳಿದರು.  

‘2029ರಲ್ಲಿ ಮತ್ತೆ ಚುನಾವಣೆ ನಡೆಯುತ್ತದೆ. ಆ ಆರು ತಿಂಗಳು ನಿಮಗೆ ಬೇಕಾದ್ದಂತೆ ಆಟವಾಡಿ. ಆಗ ಅದಕ್ಕೆ ಸಂಸತ್ತನ್ನು ಬಳಿಸಿಕೊಳ್ಳಿ. ಆದರೆ ಈಗ ಬಡವರ, ರೈತರ, ಯುವಜನರ ಮತ್ತು ಮಹಿಳೆಯರ ಏಳಿಗೆಗಾಗಿ ಸಂಸತ್ತನ್ನು ಬಳಸಿಕೊಳ್ಳಿ’ ಎಂದು ಕಿವಿಮಾತು ಹೇಳಿದರು.

‘2014ರ ನಂತರ ಹಲವಾರು ಸಂಸದರಿಗೆ ಸಂಸತ್ತಿನಲ್ಲಿ ಮಾತನಾಡಲು ಅವಕಾಶವೇ ಸಿಕ್ಕಿಲ್ಲ. ಹಲವಾರು ರಾಜಕೀಯ ಪಕ್ಷಗಳು ನಕಾರಾತ್ಮಕ ರಾಜಕೀಯವನ್ನು ರೂಢಿಸಿಕೊಂಡಿರುವುದೇ ಇದಕ್ಕೆ ಕಾರಣ. ಎಲ್ಲಾ ಸಂಸದರಿಗೂ ಸಂಸತ್ತಿನಲ್ಲಿ ಮಾತನಾಡಲು ಅವಕಾಶ ನೀಡುವಂತೆ ಎಲ್ಲಾ ರಾಜಕೀಯ ಪಕ್ಷಗಳಿಗೂ ಮನವಿ ಮಾಡುತ್ತೇನೆ’ ಎಂದರು.

ಮೂರನೇ ಅವಧಿಗೆ ಸರ್ಕಾರ ರಚಿಸಿದ್ದರ ಕುರಿತು ಸಂತೋಷ ವ್ಯಕ್ತಪಡಿಸಿದ ಅವರು, ‘60 ವರ್ಷಗಳ ನಂತರ ಪಕ್ಷವೊಂದು ಮೂರನೇ ಅವಧಿಗೆ ಸರ್ಕಾರ ರಚಿಸಿ, ಮೂರನೇ ಅವಧಿಯ ಮೊದಲ ಬಜೆಟ್‌ ಮಂಡಿಸುತ್ತಿದೆ. ದೇಶವು ಇದನ್ನು ಹೆಮ್ಮೆಯಿಂದ ನೋಡುತ್ತಿದೆ’ ಎಂದರು.

‘10 ವರ್ಷ ದೇಶದ ಧ್ವನಿ ಅಡಗಿಸಿದ್ದರು’

‘ವಿಪಕ್ಷಗಳು ದೇಶದ ಪ್ರಧಾನಿಯ ದನಿ ಹತ್ತಿಕ್ಕಲು ಪ್ರಯತ್ನಿಸಿದವು’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಮಾಡಿರುವ ಆರೋಪಕ್ಕೆ ಕಾಂಗ್ರೆಸ್‌ ತಿರುಗೇಟು ನೀಡಿದೆ. ‘10 ವರ್ಷಗಳಿಂದ ದೇಶದ ಕತ್ತುಹಿಚುಕಿ ಧ್ವನಿ ಹತ್ತಿಕ್ಕುವ ಕೆಲಸ ಮಾಡಿರುವ ವ್ಯಕ್ತಿಯು ಈಗ ವಿಪಕ್ಷಗಳ ಮೇಲೆ ಆರೋಪ ಮಾಡುತ್ತಿದ್ದಾರೆ’ ಎಂದು ಹೇಳಿದೆ. ಕಾಂಗ್ರೆಸ್‌ನ ಮಾಧ್ಯಮ ಮತ್ತು ಪ್ರಚಾರ ವಿಭಾಗದ ಮುಖ್ಯಸ್ಥ ಪವನ್‌ ಖೇರಾ ಅವರು ಈ ಕುರಿತು ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿದ್ದಾರೆ. ‘ಇಡೀ ದೇಶವೇ ಉಸಿರುಗಟ್ಟುವಂತೆ ಮೋದಿ ಅವರು ತಮ್ಮ 10 ವರ್ಷಗಳ ಅನ್ಯಾಯದ ಆಡಳಿತದಲ್ಲಿ ಮಾಡಿದ್ದರು. ಜನರು ಅದಕ್ಕೆ ಅವರಿಗೆ ಈಗ ಶಿಕ್ಷೆ ನೀಡಿದ್ದಾರೆ. ಇಂದು ಅವರು ತುಂಬಾ ದುರ್ಬಲರಾಗಿ ಮತ್ತು ಗೋಳಾಡುತ್ತಿರುವಂತೆ ಕಾಣುತ್ತಿದ್ದಾರೆ’ ಎಂದಿದ್ದಾರೆ.  ತಾವು ಬಹುಮತದಿಂದ ಆಯ್ಕೆ ಆದ ಸರ್ಕಾರದ ಪ್ರಧಾನಿಯಲ್ಲ. ಎರಡು ಪಕ್ಷಗಳ ಬೆಂಬಲದಿಂದ ಆಯ್ಕೆ ಆಗಿರುವ ಪ್ರಧಾನಿ ಎಂದು ಮೋದಿ ಮರೆತಿದ್ದಾರೆ. ಅವರು ವಿಪಕ್ಷಗಳ ವಿರುದ್ಧ ಹೇಳಿಕೆ ನೀಡುವ ವೇಳೆ 33 ಲಕ್ಷ ನೀಟ್‌ ಅಭ್ಯರ್ಥಿಗಳ ಧ್ವನಿಯನ್ನು ಸರ್ಕಾರ ಅಡಗಿಸಿದ್ದ ಪ್ರಕರಣದ ತನಿಖೆಯನ್ನು ಸುಪ್ರೀಂ ಕೋರ್ಟ್‌ ನಡೆಸುತ್ತಿತ್ತು ಎಂಬುದನ್ನು ನೆನಪಿಸುವ ಅಗತ್ಯವಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.