ADVERTISEMENT

ಹಿಂದೂಗಳು ಬಹುಸಂಖ್ಯಾತರಾಗಿದ್ದರೂ ಬೆದರಿಕೆ ಇದೆ: ಕೇಂದ್ರ ಸಚಿವ ಗಿರಿರಾಜ್‌ ಸಿಂಗ್

ಪಿಟಿಐ
Published 18 ಅಕ್ಟೋಬರ್ 2024, 13:44 IST
Last Updated 18 ಅಕ್ಟೋಬರ್ 2024, 13:44 IST
ಗಿರಿರಾಜ್‌ ಸಿಂಗ್ 
ಗಿರಿರಾಜ್‌ ಸಿಂಗ್    

ಭಾಗಲ್ಪುರ (ಬಿಹಾರ): ಹಿಂದೂಗಳು ಬಹುಸಂಖ್ಯಾತರಾಗಿದ್ದರೂ ಅವರು ಹೆಚ್ಚು ಸಂಘಟಿತರಾಗಬೇಕು. ಉತ್ತರ ಪ್ರದೇಶದ ಬಹರಾಯಿಚ್‌ ಜಿಲ್ಲೆಯಲ್ಲಿ ನಡೆದ ಕೋಮು ಹಿಂಸಾಚಾರವು ಹಿಂದೂಗಳ ಮೇಲಿನ ಬೆದರಿಕೆಯನ್ನು ಎತ್ತಿ ತೋರಿಸುತ್ತದೆ ಎಂದು ಕೇಂದ್ರ ಸಚಿವ ಗಿರಿರಾಜ್‌ ಸಿಂಗ್‌ ಹೇಳಿದರು.

ಬಿಹಾರದ ಬೆಗುಸರಾಯ್‌ನಿಂದ 150 ಕಿ.ಮೀ ದೂರದಲ್ಲಿರುವ ಭಾಗಲ್ಪುರದವರೆಗೆ ಹಮ್ಮಿಕೊಂಡಿರುವ ‘ಹಿಂದೂ ಸ್ವಾಭಿಮಾನ ಯಾತ್ರೆ’ಯ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಈ ಯಾತ್ರೆಯು ನಮ್ಮ ‍ಪಕ್ಷದಿಂದ ಹಮ್ಮಿಕೊಂಡಿರುವ ಕಾರ್ಯಕ್ರಮವಲ್ಲ. ನಾನು ಹಿಂದೂವಾಗಿ ಹುಟ್ಟಿದ್ದೇನೆ ಮತ್ತು ಹಿಂದೂವಾಗಿಯೇ ಸಾಯುತ್ತೇನೆ. ನನ್ನ ಸಮುದಾಯದ ರಕ್ಷಣೆ ನನ್ನ ಕರ್ತವ್ಯವೆಂದು ನಾನು ಭಾವಿಸಿದ್ದೇನೆ’ ಎಂದರು. 

‘ಹಿಂದೂಗಳು ಸಂಘಟಿತರಾಗಿಲ್ಲ. ಹೀಗಾಗಿಯೇ ಬಹುಸಂಖ್ಯಾತರಾಗಿದ್ದರೂ ಅವರಿಗೆ ಬೆದರಿಕೆ ಇದೆ. ಬಹರಾಯಿಚ್‌ನಲ್ಲಿ ದುರ್ಗಾ ಪೂಜೆ ಮೆರವಣಿಗೆ ಮೇಲೆ ದಾಳಿ ನಡೆಸಲಾಯಿತು. ಬಿಹಾರದ ಸೀತಾಮಡಿಯಲ್ಲೂ ಅದೇ ರೀತಿಯ ಘಟನೆ ನಡೆಯಿತು. ಮೊಹರಂ ಸಮಯದಲ್ಲಿ ಹಿಂದೂಗಳು ತಾಜಿಯಾ ಮೆರವಣಿಗೆಗೆ ಅಗೌರವ ತೋರದಿದ್ದರೂ ಸಹ ಇಂತಹ ಘಟನೆಗಳು ಆಗಾಗ ಸಂಭವಿಸುತ್ತಲೇ ಇವೆ. ನಾನೂ ಕೂಡ ತಾಜಿಯಾ ಮೆರವಣಿಗೆಯಲ್ಲಿ ಭಾಗಿಯಾಗಿದ್ದೇನೆ’ ಎಂದು ಹೇಳಿದರು. 

ADVERTISEMENT

‘ಬಾಂಗ್ಲಾದೇಶದಲ್ಲಿ ಹಿಂದೂ ಸಹೋದರಿಯರು ಅವಮಾನ ಎದುರಿಸುತ್ತಿದ್ದಾರೆ ಹಾಗೂ ಪಾಕಿಸ್ತಾನದಲ್ಲಿ ಹಿಂದೂ ಸಮುದಾಯ ಅಳಿವಿನಂಚಿನಲ್ಲಿದೆ. ದೇಶ ವಿಭಜನೆಯ ಸಂದರ್ಭದಲ್ಲಿ ಜನಸಂಖ್ಯೆ ವಿನಿಮಯ ಕುರಿತು ಬಿ.ಆರ್‌ ಅಂಬೇಡ್ಕರ್‌ ನೀಡಿದ ಸಲಹೆಯನ್ನು ಆಗಿನ ಪ್ರಧಾನಿ ಜವಾಹರಲಾಲ್‌ ನೆಹರೂ ಒಪ್ಪಲಿಲ್ಲ’ ಎಂದು ಕಿಡಿಕಾರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.