ADVERTISEMENT

ಉತ್ತರ ಪ್ರದೇಶ: ರೆಸ್ಟೊರೆಂಟ್ ಮಾಲೀಕರ, ವ್ಯವಸ್ಥಾಪಕ ಹೆಸರು ಪ್ರದರ್ಶನ ಕಡ್ಡಾಯ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2024, 15:15 IST
Last Updated 24 ಸೆಪ್ಟೆಂಬರ್ 2024, 15:15 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಲಖನೌ: ರಾಜ್ಯದಲ್ಲಿರುವ ಢಾಬಾಗಳು, ರೆಸ್ಟೊರೆಂಟ್‌ಗಳು ಸೇರಿದಂತೆ ಆಹಾರ ಪದಾರ್ಥಗಳ ಮಾರಾಟ ಮಳಿಗೆಗಳಲ್ಲಿ ಅವುಗಳ ಮಾಲೀಕರು, ವ್ಯವಸ್ಥಾಪಕರು ಹಾಗೂ ಇತರ ಸಿಬ್ಬಂದಿ ಹೆಸರುಗಳನ್ನು ಕಡ್ಡಾಯವಾಗಿ ಪ್ರದರ್ಶಿಸಬೇಕು ಎಂದು ಉತ್ತರ ಪ್ರದೇಶ ಸರ್ಕಾರ ಮಂಗಳವಾರ ನಿರ್ದೇಶಿಸಿದೆ.

ರಾಜ್ಯದ ಕೆಲ ಭಾಗಗಳಲ್ಲಿನ ಢಾಬಾ, ರೆಸ್ಟೊರೆಂಟ್‌ಗಳಲ್ಲಿ ಆಹಾರ ಪದಾರ್ಥಗಳು ಹಾಗೂ ಹಣ್ಣಿನ ಜ್ಯೂಸ್‌ನಲ್ಲಿ ಮೂತ್ರ ಸೇರಿಸಲಾಗುತ್ತಿದೆ, ಅವುಗಳ ಮೇಲೆ ಉಗುಳಲಾಗುತ್ತಿದೆ ಎಂಬ ವ್ಯಾಪಕ ಆರೋಪಗಳು ಕೇಳಿ ಬಂದ ಬೆನ್ನಲ್ಲೇ, ಸರ್ಕಾರ ಈ ನಿರ್ದೇಶನ ನೀಡಿದೆ.

ADVERTISEMENT

ಈ ರೀತಿಯ ಆರೋಪಗಳ ಕುರಿತು ರಾಜ್ಯವ್ಯಾಪಿ ಪರಿಶೀಲನೆ ನಡೆಸುವಂತೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ನಿರ್ದೇಶನ ನೀಡಿದ್ದಾರೆ.

ಈ ವಿಚಾರವಾಗಿ ಹಿರಿಯ ಅಧಿಕಾರಿಗಳೊಂದಿಗೆ ನಡೆಸಿದ ಉನ್ನತ ಸಭೆ ನಂತರ ಮುಖ್ಯಮಂತ್ರಿ ನಿರ್ದೇಶನ ನೀಡಿದ್ದಾರೆ ಎಂದು ಮೂಲಗಳು ಹೇಳಿವೆ.

‘ಆರೋಪಗಳು ಕೇಳಿಬಂದಿರುವ ಢಾಬಾ, ರೆಸ್ಟೊರೆಂಟ್‌ ಸೇರಿದಂತೆ ಎಲ್ಲ ತಿಂಡಿ ಮಳಿಗೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವ್ಯಕ್ತಿಗಳ ಕುರಿತು ಪೊಲೀಸರು ಪರಿಶೀಲಿಸಬೇಕು. ಪೊಲೀಸರು, ಆಹಾರ ಸುರಕ್ಷತೆ ಹಾಗೂ ಔಷಧ ನಿಯಂತ್ರಣ ಅಧಿಕಾರಿಗಳನ್ನು ಒಳಗೊಂಡ ತಂಡಗಳು ತಕ್ಷಣವೇ ಈ ಕಾರ್ಯ ಆರಂಭಿಸಬೇಕು’ ಎಂದೂ ಅವರು ನಿರ್ದೇಶನ ನೀಡಿದ್ದಾರೆ.

ಸಿ.ಎಂ ಯೋಗಿ ಹೇಳಿದ್ದು

  • ಜನಸಾಮಾನ್ಯರ ಆರೋಗ್ಯದ ದೃಷ್ಟಿಯಿಂದ ಅಗತ್ಯ ಕಂಡಬಂದಲ್ಲಿ ನಿಯಮಗಳಿಗೆ ತಿದ್ದುಪಡಿ ತರಬೇಕು

  • ಜನರು ಕುಳಿತುಕೊಳ್ಳುವ ಪ್ರದೇಶ ಮಾತ್ರವಲ್ಲ ಢಾಬಾ ರೆಸ್ಟೊರೆಂಟ್‌ನ ಇತರ ಭಾಗಗಳಲ್ಲಿಯೂ ಸಿ.ಸಿ.ಟಿವಿ ಕ್ಯಾಮೆರಾಗಳನ್ನು ಅಳವಡಿಸಬೇಕು *

  • ಮಾಲೀಕರು ಸಿ.ಸಿ.ಟಿವಿ ದೃಶ್ಯಗಳನ್ನು ಕಾದಿಡಬೇಕು. ಅಗತ್ಯವೆನಿಸಿದಾಗ ಅವುಗಳನ್ನು ಪೊಲೀಸರಿಗೆ ಒದಗಿಸಬೇಕು 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.