ಬೆಂಗಳೂರು: ಉತ್ತರಾಖಂಡದ ಸಹಸ್ತ್ರ ಸರೋವರಕ್ಕೆ ಚಾರಣಕ್ಕೆ ತೆರಳಿ ತೀವ್ರ ಹಿಮಗಾಳಿಗೆ ಸಿಲುಕಿ ಮೃತರಾದ ರಾಜ್ಯದ 9 ಮಂದಿಯ ಮೃತದೇಹಗಳೊಂದಿಗೆ ಅವರ ಸ್ನೇಹಿತರು 36 ಗಂಟೆ ಕಳೆದಿದ್ದರು ಎಂದು ಕರ್ನಾಟಕ ಪರ್ವತಾರೋಹಿಗಳ ಸಂಘಟನೆಯ (ಕೆಎಂಎ) ಎಸ್.ಶ್ರೀವಾಸ್ತವ ಹೇಳಿದರು.
‘ಚಾರಣ ತಂಡದಲ್ಲಿದ್ದ ಪ್ರತಿಯೊಬ್ಬರನ್ನೂ ನಾನು ಬಲ್ಲೆ. ಎಲ್ಲರೂ ಕೆಎಂಎ ಸದಸ್ಯರು. ನಾನು ಅವರೊಂದಿಗೆ ಅನೇಕ ಚಾರಣಗಳಲ್ಲಿ ಭಾಗವಹಿಸಿದ್ದೆ. ಆದರೆ, ಈ ಬಾರಿ ನಾನು ನೇಪಾಳದಲ್ಲಿದ್ದೆ. ದುರ್ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ನಾನು ಡೆಹ್ರಾಡೂನ್ಗೆ ಹೋದೆ’ ಎಂದು ಹೇಳಿದರು.
ಡೆಹ್ರಾಡೂನ್ನ ಆಸ್ಪತ್ರೆಯಲ್ಲಿ ತಾವು ದುರಂತದಲ್ಲಿ ಬದುಕುಳಿದವರನ್ನು ಭೇಟಿ ಮಾಡಿದಾಗ ಅವರ ಪರಿಸ್ಥಿತಿ ಹೇಗಿತ್ತು ಎನ್ನುವುದನ್ನು ಶ್ರೀವಾಸ್ತವ ನೆನಪಿಸಿಕೊಂಡರು.
‘ಅವರು ಆಘಾತಗೊಂಡಿದ್ದರು, ಜರ್ಜರಿತರಾಗಿದ್ದರು. ಅವರಲ್ಲಿ ಕೆಲವರು ತಮ್ಮ ಸ್ನೇಹಿತರ ಮೃತದೇಹಗಳೊಂದಿಗೆ 36 ಗಂಟೆ ಕಳೆದಿದ್ದರು. ಅದು ತೀರಾ ಹತಾಶೆಯ ಸಂಗತಿ’ ಎಂದು ವಿವರಿಸಿದರು.
‘ಅವರೆಲ್ಲ ಉತ್ತಮ ತರಬೇತಿ ಪಡೆದಿರುವ, ಅನುಭವಿ ಚಾರಣಿಗರು. ಜತೆಗೆ ಅದು ಕಡಿದಾದ ಹಾದಿಯೇನಲ್ಲ. ಸಾಮಾನ್ಯರು ಕೂಡ ಕ್ರಮಿಸಬಹುದಾದ ಮಾರ್ಗ. ಆದರೆ, ಕೇವಲ ಕೆಟ್ಟ ಹವಾಮಾನದಿಂದಾಗಿ ಈ ದುರ್ಘಟನೆ ಸಂಭವಿಸಿದೆ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.