ತಿರುವನಂತಪುರ: ವಿಶ್ವವಿದ್ಯಾಲಯಗಳ ಕುಲಾಧಿಪತಿಯೂ ಆಗಿರುವ ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರು, ತಮ್ಮ ಆದೇಶದ ವಿರುದ್ಧ ದಾವೆ ಹೂಡುವ ವಿಶ್ವವಿದ್ಯಾಲಯಗಳ ಕುಲಪತಿಗಳು ಮತ್ತು ಇತರ ಅಧಿಕಾರಿಗಳು ತಾವೇ ಕಾನೂನು ಹೋರಾಟದ ವೆಚ್ಚವನ್ನು ಭರಿಸಬೇಕು ಎಂದು ನಿರ್ದೇಶನ ನೀಡಿದ್ದಾರೆ.
ಕಣ್ಣೂರು, ಕ್ಯಾಲಿಕಟ್ ವಿಶ್ವವಿದ್ಯಾಲಯ ಸೇರಿದಂತೆ ಇತರ ವಿಶ್ವವಿದ್ಯಾಲಯಗಳಿಗೆ ರಾಜ್ಯಪಾಲರು ಹೊರಡಿಸಿರುವ ನಿರ್ದೇಶನದಲ್ಲಿ, ಅಂತಹ ಪ್ರಕರಣಗಳಲ್ಲಿನ ಕಾನೂನು ವೆಚ್ಚಗಳಿಗೆ ವಿ.ವಿಗಳು ಹಣವನ್ನು ಮಂಜೂರು ಮಾಡುವುದು ಸಮರ್ಥನೀಯವಲ್ಲ ಮತ್ತು ಅದು ವಿ.ವಿ ನಿಧಿಯ ದುರ್ಬಳಕೆ ಆಗುತ್ತದೆ ಎಂದು ಉಲ್ಲೇಖಿಸಿದ್ದಾರೆ.
ವಿಶ್ವವಿದ್ಯಾಲಯಗಳ ಅಧಿಕಾರಿಗಳು ತಮ್ಮ ವೈಯಕ್ತಿಕ ಹಿತಾಸಕ್ತಿಗಳ ರಕ್ಷಣೆ ಮತ್ತು ಅದನ್ನು ಉತ್ತೇಜಿಸಲು ಯತ್ನಿಸುತ್ತಿದ್ದಾರೆ. ಹೀಗಾಗಿ ಕುಲಪತಿಗಳು ಮತ್ತು ಇತರ ಅಧಿಕಾರಿಗಳಿಗೆ ಕಾನೂನು ವೆಚ್ಚವನ್ನು ಭರಿಸಲು ವಿಶ್ವವಿದ್ಯಾಲಯ ಯಾವುದೇ ಕ್ರಮ ತೆಗೆದುಕೊಳ್ಳಬಾರದು ಎಂದು ಅವರು ಸೂಚಿಸಿದ್ದಾರೆ.
ಒಂದು ವೇಳೆ ಅಂತಹ ಯಾವುದೇ ಪಾವತಿಗಳನ್ನು ಈಗಾಗಲೇ ಮಾಡಿದ್ದರೆ, ಆ ಮೊತ್ತವನ್ನು ಸಂಬಂಧಿಸಿದ ಅಧಿಕಾರಿಯಿಂದ ತಕ್ಷಣವೇ ವಸೂಲಿ ಮಾಡಲಾಗುತ್ತದೆ ಎಂದು ಖಾನ್ ಅವರು ಜುಲೈ 9ರಂದು ವಿಶ್ವವಿದ್ಯಾಲಯಗಳಿಗೆ ನಿರ್ದೇಶಿಸಿದ್ದಾರೆ. ಅಲ್ಲದೆ ಈ ಸಂಬಂಧ ಸ್ಥಿತಿಗತಿ ವರದಿ ಸಲ್ಲಿಸುವಂತೆಯೂ ವಿ.ವಿಗಳಿಗೆ ಅವರು ಸೂಚಿಸಿದ್ದಾರೆ.
ವರದಿಯ ಪ್ರಕಾರ, ಕುಲಾಧಿಪಾತಿಯ ಆದೇಶವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುವ ಸಂದರ್ಭದಲ್ಲಿ ಕುಲಪತಿಗಳು ಮತ್ತು ವಿ.ವಿಯ ಇತರ ಅಧಿಕಾರಿಗಳ ಪರವಾಗಿ ಕಾನೂನು ವೆಚ್ಚವಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡಲಾಗುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.