ADVERTISEMENT

ಮುಂಬೈನ ಸಿದ್ಧಿವಿನಾಯಕ ದೇವಸ್ಥಾನದ ಪ್ರಸಾದ ಪೊಟ್ಟಣಗಳ ಮೇಲೆ ಇಲಿಗಳ ಓಡಾಟ: ತನಿಖೆ

ಪಿಟಿಐ
Published 24 ಸೆಪ್ಟೆಂಬರ್ 2024, 15:18 IST
Last Updated 24 ಸೆಪ್ಟೆಂಬರ್ 2024, 15:18 IST
<div class="paragraphs"><p>ಮುಂಬೈನ ಸಿದ್ಧಿವಿನಾಯಕ ದೇವಸ್ಥಾನ</p></div>

ಮುಂಬೈನ ಸಿದ್ಧಿವಿನಾಯಕ ದೇವಸ್ಥಾನ

   

ಮುಂಬೈ: ಪ್ರಸಿದ್ಧ ಸಿದ್ಧಿವಿನಾಯಕ ದೇವಸ್ಥಾನದ ಪ್ರಸಾದದ ಪೊಟ್ಟಣಗಳ ಮೇಲೆ ಇಲಿಗಳು ಓಡಾಡುತ್ತಿದ್ದವು ಎನ್ನಲಾದ ದೃಶ್ಯಗಳಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. 

ಈ ಆರೋಪವನ್ನು ಶ್ರೀ ಸಿದ್ಧಿವಿನಾಯಕ ಗಣಪತಿ ದೇವಸ್ಥಾನ ಟ್ರಸ್ಟ್‌ (ಎಸ್‌ಎಸ್‌ಜಿಟಿ) ತಳ್ಳಿಹಾಕಿದ್ದು, ಈ ವಿಚಾರ ಕುರಿತು ತನಿಖೆ ಆರಂಭಿಸಲಾಗಿದೆ ಎಂದಿದೆ.

ADVERTISEMENT

ತಿರು‍ಪತಿ ದೇವಸ್ಥಾನದ ಪ್ರಸಾದ ಲಾಡುವಿನಲ್ಲಿ ಪ್ರಾಣಿಗಳ ಕೊಬ್ಬಿನ ಅಂಶ ಪತ್ತೆಯಾಗಿದೆ ಎಂಬುದರ ಕುರಿತು ವಿವಾದ ಭುಗಿಲೆದ್ದಿರುವ ನಡುವೆಯೇ, ಸಿದ್ಧಿವಿನಾಯಕ ದೇವಸ್ಥಾನ ಪ್ರಸಾದ ಕುರಿತ ಈ ವಿಚಾರ ಕಳವಳಕ್ಕೆ ಕಾರಣವಾಗಿದೆ.

ನೀಲಿ ಬಣ್ಣದ ಟ್ರೆವೊಂದರಲ್ಲಿರುವ, ಪ್ರಸಾದದ ಹರಿದ ಪೊಟ್ಟಣಗಳ ಮೇಲೆ ಇಲಿಗಳು ಓಡಾಡುತ್ತಿರುವ ದೃಶ್ಯಗಳು, ಸಿದ್ಧಿವಿನಾಯಕ ದೇವಸ್ಥಾನಕ್ಕೆ ಸಂಬಂಧಿಸಿದ್ದು ಎನ್ನಲಾಗುತ್ತಿರುವ ವಿಡಿಯೊದಲ್ಲಿವೆ.

ಈ ಕುರಿತು ಪ್ರತಿಕ್ರಿಯಿಸಿರುವ ಶಿವಸೇನಾ ಮುಖಂಡ ಹಾಗೂ ಟ್ರಸ್ಟ್‌ನ ಮುಖ್ಯಸ್ಥ ಸದಾ ಸರವಣಕರ್,‘ದೇವಸ್ಥಾನದಲ್ಲಿ ಪ್ರತಿನಿತ್ಯ ಲಕ್ಷಗಟ್ಟಲೆ ಲಾಡುಗಳನ್ನು ವಿತರಿಸಲಾಗುತ್ತದೆ. ಲಾಡುಗಳನ್ನು ಸಂಗ್ರಹಿಸಿ ಇಡುವ ಜಾಗವೂ ಸ್ವಚ್ಛತೆಯಿಂದ ಕೂಡಿದೆ. ಆದರೆ, ವಿಡಿಯೊದಲ್ಲಿ ಕಾಣುವ ಸ್ಥಳ ಸ್ವಚ್ಛತೆಯಿಂದ ಕೂಡಿಲ್ಲ. ಇದು ಸಿದ್ಧಿವಿನಾಯಕ ದೇವಸ್ಥಾನದ್ದು ಅಲ್ಲ. ಬೇರೆ ಯಾವುದೋ ದೇಗುಲದಲ್ಲಿ ಚಿತ್ರೀಕರಿಸಿದ್ದರಿಬೇಕು’ ಎಂದು ಹೇಳಿದ್ದಾರೆ.

‘ಸಿ.ಸಿ.ಟಿವಿ ಯಲ್ಲಿನ ದೃಶ್ಯಗಳನ್ನು ಪರಿಶೀಲಿಸಲಾಗುವುದು. ಡಿಸಿಪಿ ಶ್ರೇಣಿಯ ಅಧಿಕಾರಿಯೊಬ್ಬರಿಂದ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು’ ಎಂದೂ ಅವರು ಹೇಳಿದ್ದಾರೆ.

ಇದಕ್ಕೂ ಮುನ್ನ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಭಕ್ತರಿಗೆ ಶುದ್ಧವಾದ ಪ್ರಸಾದ ಹಂಚುವುದನ್ನು ಖಾತ್ರಿಪಡಿಸಲು ಸಾಕಷ್ಟು ಗಮನ ನೀಡಲಾಗುತ್ತದೆ’ ಎಂದಿದ್ಧಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.